ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಕಾಲನಿಯನ್ನು ‘ವಿಶೇಷ ಆರ್ಥಿಕ ವಲಯ’ (SEZ) ಅಥವಾ ‘ವಿಶೇಷ ಕೈಗಾರಿಕಾ ಪ್ರದೇಶ’ ಎಂದು ಘೋಷಿಸಿ, ಅಲ್ಲಿ ಟೆಕ್ ಪಾರ್ಕ್ ಅಥವಾ ಕೈಗಾರಿಕಾ ಪಾರ್ಕ್ ಸ್ಥಾಪಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಒತ್ತಾಯಿಸಲಾಗಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ, ಮಾಜಿ ಶಾಸಕ ವಿ.ಎಸ್. ಪಾಟೀಲ ಮತ್ತು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಶಿರಸಿ ನೇತೃತ್ವದ ನಿಯೋಗವು ಸಚಿವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಯುವಜನರ ವಲಸೆ ತಡೆಯುವ ನಿಟ್ಟಿನಲ್ಲಿ ಟೆಕ್ ಪಾರ್ಕ್ ನಿರ್ಮಾಣದ ಅವಶ್ಯಕತೆಯನ್ನು ನಿಯೋಗವು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿತು.
ಯಲ್ಲಾಪುರದ ಮಾಗೋಡು ಪ್ರದೇಶದಲ್ಲಿ ಸುಮಾರು 300 ಎಕರೆಗೂ ಅಧಿಕ ಸರ್ಕಾರಿ ಭೂಮಿ ಲಭ್ಯವಿದೆ. ಈ ಜಾಗವು ಮೂಲತಃ ಬೇಡ್ತಿ ಯೋಜನೆಗೆಂದು ಕೆ.ಪಿ.ಸಿ. ಕಾಲನಿ ನಿರ್ಮಾಣಕ್ಕೆ ಮೀಸಲಾಗಿತ್ತು. ಪ್ರಸ್ತುತ ಅಲ್ಲಿನ ಕಟ್ಟಡಗಳು ಹಾಳಾಗಿದ್ದು, ಈ ಪ್ರದೇಶವು ನಿರ್ಜನವಾಗಿದೆ.

ಈ ಭೂಮಿಯನ್ನು ಅರಣ್ಯ ಇಲಾಖೆಯಿಂದ ಮರಳಿ ಪಡೆದು, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಮೂಲಕ ಇಲ್ಲಿ ಟೆಕ್ ಪಾರ್ಕ್ ನಿರ್ಮಿಸಿದರೆ, ಸ್ಥಳೀಯ ಪ್ರತಿಭಾವಂತ ಯುವಕರಿಗೆ ಉದ್ಯೋಗ ದೊರೆತು, ಅವರು ಉದ್ಯೋಗ ಅರಸಿ ಬೆಂಗಳೂರು ಅಥವಾ ಇತರ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಬಹುದು ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಸಂವಿಧಾನದ ಅರಿವಿನೊಂದಿಗೆ ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಿ: ನ್ಯಾ. ಅಕ್ಷತಾ ಸಿ.ಆರ್ ಕರೆ
ಮಾಗೋಡು ಕಾಲನಿಯು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕೇವಲ 75 ಕಿ.ಮೀ. ದೂರದಲ್ಲಿದೆ. ಅಲ್ಲದೆ, ಉದ್ದೇಶಿತ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ-53ರ ಸಮೀಪದಲ್ಲೇ ಇದೆ. ಊಟಿ ಮತ್ತು ಕೊಡೈಕೆನಾಲ್ ಮಾದರಿಯ ಆಹ್ಲಾದಕರ ಹವಾಮಾನ, ಉತ್ತಮ ಜಲಸಂಪನ್ಮೂಲ ಮತ್ತು ಸಾಂಸ್ಕೃತಿಕ ಪರಿಸರ ಇರುವುದರಿಂದ, ಈ ಪ್ರದೇಶವು ಐಟಿ-ಬಿಟಿ ಮತ್ತು ಸಾಫ್ಟ್ವೇರ್ ಪಾರ್ಕ್ಗಳ ಸ್ಥಾಪನೆಗೆ ಅತ್ಯಂತ ಸೂಕ್ತವಾಗಿದೆ ಎಂದು ವಿವರಣೆ ನೀಡಿದರು.
ಅಡಿಕೆ, ಸಾಂಬಾರ ಪದಾರ್ಥಗಳು ಮತ್ತು ವಿದ್ಯುತ್ ಯೋಜನೆಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯವನ್ನು ನೀಡುತ್ತಿದೆ. ಆದರೆ, ಇದಕ್ಕೆ ಪ್ರತಿಯಾಗಿ ಜಿಲ್ಲೆಗೆ ಉತ್ತಮ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳು ದೊರೆತಿಲ್ಲ ಎಂದು ನಿಯೋಗ ಅಸಮಾಧಾನ ವ್ಯಕ್ತಪಡಿಸಿದೆ.
ಹೀಗಾಗಿ, ಇದೇ ಅಧಿವೇಶನದಲ್ಲಿ ಮಾಗೋಡನ್ನು ವಿಶೇಷ ಆರ್ಥಿಕ ವಲಯವೆಂದು ಘೋಷಿಸಬೇಕು. ಮುಂಬರುವ ಅಂತರರಾಷ್ಟ್ರೀಯ ಟೆಕ್ ಸಮ್ಮಿಟ್ನಲ್ಲಿ ಈ ಭಾಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ನಿಯೋಗವು ಸಚಿವ ಎಂ.ಬಿ. ಪಾಟೀಲ್ ಅವರನ್ನು ಒತ್ತಾಯಿಸಿದೆ. ನಿಯೋಗದಲ್ಲಿ ಗಣೇಶ್ ಹೆಗಡೆ, ರಮೇಶ ನಾಯ್ಕ್ ಕುಪ್ಪಳ್ಳಿ, ಶ್ರೀಪತಿ ಮುದ್ದೆಪಾಲ್, ರಾಘವೇಂದ್ರ ನಾಯ್ಕ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.





