ಉತ್ತರ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಅಗತ್ಯಕ್ಕಿಂತ ಅತಿಯಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಕನಿಷ್ಠ ಐದು ವರ್ಷಗಳ ಕಾಲ ಹೊಸ ಆಟೋ ರಿಕ್ಷಾಗಳ ಪರ್ಮಿಟ್ ನೀಡುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಜಿಲ್ಲೆಯ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘಟನೆಗಳು ಜಿಲ್ಲಾಡಳಿತವನ್ನು ಒತ್ತಾಯಿಸಿವೆ.
ಅಲ್ಲದೆ, ಪ್ರಸ್ತುತ ಇರುವ ಆಟೋ ಸಂಚಾರದ ಪರ್ಮಿಟ್ ವ್ಯಾಪ್ತಿಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 50 ಕಿಲೋ ಮೀಟರ್ವರೆಗೆ ವಿಸ್ತರಿಸುವಂತೆ ಕೂಡ ಮನವಿ ಮಾಡಲಾಗಿದೆ. ಸೋಮವಾರ ಕಾರವಾರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಆಟೋ ಚಾಲಕ ಹಾಗೂ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಶಿರಸಿಯ ವಿಶ್ವನಾಥ ಎಸ್ ಗೌಡ ಅವರು, ಈ ಕುರಿತು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಆಟೋ ವರ್ಗವು ಹಲವು ವರ್ಷಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಮ್ಮ ಸಮಸ್ಯೆಗಳ ಕುರಿತು ಮನವಿಗಳು ಮತ್ತು ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಕೆಲವು ಬೇಡಿಕೆಗಳು ಈಡೇರಿದ್ದರೂ, ಅತಿ ಅವಶ್ಯಕ ಸಮಸ್ಯೆಗಳು ಇನ್ನೂ ಬಗೆಹರಿಯದೇ ಉಳಿದಿವೆ.
ಜಿಲ್ಲೆಯಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾಗಳು ಸಂಚರಿಸುತ್ತಿದ್ದು, ರಾಜ್ಯಾದ್ಯಂತ ಅಂದಾಜು 8 ಲಕ್ಷಕ್ಕೂ ಅಧಿಕ ಆಟೋಗಳಿವೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಸಂಖ್ಯೆಯನ್ನು ಮೀರಿ ಹಲವು ತಾಲೂಕುಗಳಲ್ಲಿ ರಿಕ್ಷಾಗಳು ಹೆಚ್ಚಾಗಿರುವುದರಿಂದ, ಚಾಲಕರಿಗೆ -ಮಾಲಕರಿಗೆ ಸಾಕಷ್ಟು ದುಡಿಮೆ ಇಲ್ಲದೆ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಆಟೋ ನಿಲ್ದಾಣಗಳಲ್ಲಿ ಸ್ಥಳಾವಕಾಶದ ಕೊರತೆಯುಂಟಾಗಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಇತರ ಜಿಲ್ಲೆಗಳಲ್ಲಿರುವಂತೆ ಉತ್ತರ ಕನ್ನಡದಲ್ಲೂ ಕನಿಷ್ಠ ಐದು ವರ್ಷಗಳ ಕಾಲ ಹೊಸ ಪರ್ಮಿಟ್ ನೀಡುವುದನ್ನು ಸ್ಥಗಿತಗೊಳಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಜೊತೆಗೆ, ಲಾಭದಾಸೆಯಿಂದ ಎರಡು ಪರ್ಮಿಟ್ಗಿಂತ ಹೆಚ್ಚು ಹೊಂದಿರುವ ಮಾಲಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಲಾಗಿದೆ.
ಪ್ರಸ್ತುತ ನಗರ ಪ್ರದೇಶಗಳಲ್ಲಿ ಕೇವಲ 7 ಕಿ.ಮೀ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 3 ಕಿ.ಮೀ ಮಾತ್ರ ಸಂಚರಿಸಲು ಪರ್ಮಿಟ್ ವ್ಯಾಪ್ತಿ ಇದೆ. ಈ ಸೀಮಿತ ವ್ಯಾಪ್ತಿಯಿಂದ ಆಟೋ ವರ್ಗಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ವಿಶ್ವನಾಥ ಗೌಡ ಅವರು ವಿವರಿಸಿದರು. ಉದಾಹರಣೆಗೆ, ಪ್ರವಾಸಿ ತಾಣ ಮುರ್ಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವುದರಿಂದ, ಅಲ್ಲಿ 300ಕ್ಕೂ ಹೆಚ್ಚು ಆಟೋಗಳಿದ್ದರೂ ಕೇವಲ 3 ಕಿ.ಮೀ ಸಂಚಾರ ಮಿತಿ ಇದೆ.
ಈ ಕಾರಣದಿಂದ, ಬೇರೆ ಜಿಲ್ಲೆಗಳಲ್ಲಿ ಜಾರಿಯಲ್ಲಿರುವಂತೆ ಉತ್ತರ ಕನ್ನಡದಲ್ಲೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 50 ಕಿ.ಮೀ ವರೆಗೆ ಪರ್ಮಿಟ್ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಇದರ ಜೊತೆಗೆ, ಪರ್ಮಿಟ್ ನೀಡುವಾಗ ನಗರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ನ ಪರವಾನಿಗೆಯನ್ನು ಕಡ್ಡಾಯಗೊಳಿಸಬೇಕು ಮತ್ತು ಬೇರೆ ಜಿಲ್ಲೆಗಳ ನೋಂದಣಿ ಹೊಂದಿರುವ ಆಟೋ ರಿಕ್ಷಾಗಳಿಗೆ ಪರ್ಮಿಟ್ ಹಾಗೂ ಸಂಚಾರ ಪರವಾನಿಗೆ ನೀಡಬಾರದು ಎಂಬ ಬೇಡಿಕೆಗಳನ್ನೂ ಮುಂದಿಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಿದ್ದಾಪುರ | ವಿದ್ಯಾರ್ಥಿಗಳಿಂದ ಭತ್ತದ ಕೊಯ್ಲು: ಪ್ರಾಯೋಗಿಕ ಕೃಷಿ ಅಧ್ಯಯನಕ್ಕೆ ಸಾಕ್ಷಿಯಾದ ಹುಲ್ಕುತ್ರಿ ಶಾಲೆ
ರಿಕ್ಷಾ ಖರೀದಿ, ತೆರಿಗೆಗಳು ಮತ್ತು ವಿಮೆಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆಟೋ ವಲಯದಿಂದ ಪ್ರತಿವರ್ಷ 5 ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಬರುತ್ತಿದೆ ಎಂದು ವಿವರಣೆ ನೀಡಿದರು. ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರವು ಇತರ ಜಿಲ್ಲೆಗಳಂತೆ ಕಾನೂನಾತ್ಮಕ ಬದಲಾವಣೆಗಳನ್ನು ಮಾಡಿ, 30 ದಿನಗಳೊಳಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಆಟೋ ಚಾಲಕ-ಮಾಲಕರ ಸಂಘಟನೆಗಳು ವಿನಂತಿಸಿವೆ.





