ಉತ್ತರ ಕನ್ನಡ ಜಿಲ್ಲೆಯ ಪರಿಸರ ಮತ್ತು ಜನಜೀವನಕ್ಕೆ ತೀವ್ರ ಆತಂಕ ತಂದಿರುವ ಬೇಡ್ತಿ–ವರದಾ, ಅಘನಾಶಿನಿ–ವೇದಾವತಿ ನದಿ ತಿರುವು ಯೋಜನೆಗಳು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲೆಯ ಶಾಸಕರು ಹಾಗೂ ಸಂಸದರು ಒಟ್ಟಾಗಿ ಸೇರಿ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ನಿಯೋಗವು ಈ ಯೋಜನೆಗಳ ಕುರಿತು ತಜ್ಞ ವಿಜ್ಞಾನಿಗಳ ಸಭೆ ನಡೆಸಿ, ಜಿಲ್ಲೆಯ ಒಟ್ಟಾರೆ ಸಾಮರ್ಥ್ಯದ (Carrying Capacity) ಕುರಿತು ವೈಜ್ಞಾನಿಕ ಅಧ್ಯಯನ ಮಾಡಬೇಕೆಂದು ಒತ್ತಾಯಿಸಿದೆ.
ಮನವಿಯಲ್ಲಿ ನದಿಗಳ ತಿರುವಿನಿಂದ ಉಂಟಾಗಬಹುದಾದ ಪರಿಸರ ಹಾನಿಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. “ಬೇಡ್ತಿ ಹಾಗೂ ಅಘನಾಶಿನಿ ಕಣಿವೆಗಳು ಪಶ್ಚಿಮ ಘಟ್ಟದ ಹೃದಯ ಭಾಗವಾಗಿದ್ದು, ಅಣೆಕಟ್ಟು, ಕಾಲುವೆ ಮತ್ತು ರಸ್ತೆ ಕಾಮಗಾರಿಗಳು ಭೂಕುಸಿತ ಹಾಗೂ ಜಲಚರ-ಸ್ಥಲಚರ ಜೀವಿಗಳ ವಾಸಸ್ಥಳ ನಾಶಕ್ಕೆ ಕಾರಣವಾಗಬಹುದು. ಸುಮಾರು 2 ಲಕ್ಷ ಮಲೆನಾಡು ಕುಟುಂಬಗಳು ಹಾಗೂ ಕರಾವಳಿಯ ಮೀನುಗಾರರು ಈ ನದಿಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಯೋಜನೆಗಳು ಜಾರಿಯಾದರೆ ನದಿಗಳಲ್ಲಿ ಸಿಹಿನೀರು ಕಡಿಮೆಯಾಗಿ ಉಪ್ಪುನೀರು ನುಗ್ಗುವ ಅಪಾಯವಿದೆ,” ಎಂದು ತಿಳಿಸಿದರು.
ಸುಮಾರು ₹35,000 ಕೋಟಿ ವೆಚ್ಚದ ಈ ಯೋಜನೆಗಳ ಸಾಧ್ಯತಾ ವರದಿಯನ್ನು ಜಲಸಂಪನ್ಮೂಲ ಇಲಾಖೆ ಸಿದ್ಧಪಡಿಸಿರುವ ಹಿನ್ನೆಲೆಯಲ್ಲಿ ಜನಾಕ್ರೋಶ ಹೆಚ್ಚಾಗಿದೆ. ಪೂಜ್ಯ ಸೋಂದಾ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದ ‘ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ’ ಈ ಯೋಜನೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದು, 2021–22ರ ಪ್ರತಿಭಟನೆಯ ಬಳಿಕ ಸರ್ಕಾರವು ಬೇಡ್ತಿ–ವರದಾ ಯೋಜನೆ ಸ್ಥಗಿತಗೊಳಿಸಿತ್ತು ಎಂಬುದನ್ನು ನಿಯೋಗವು ಸಿಎಂ ಗಮನಕ್ಕೆ ತಂದಿದೆ. ನಿಯೋಗವು ಯಾವುದೇ ಕಾರಣಕ್ಕೂ ಈ ಯೋಜನೆಗಳ ಡಿ.ಪಿ.ಆರ್. (DPR) ತಯಾರಿಗೆ ಮುಂದಾಗಬಾರದು ಎಂದು ಆಗ್ರಹಿಸಿದೆ.
ಈ ಸುದ್ದಿ ಓದಿದ್ದೀರಾ? 12 ಗಂಟೆ ಹೋರಾಡಿ ಆ್ಯಂಬುಲೆನ್ಸ್ನಲ್ಲೇ ಅಂತ್ಯ ಕಂಡ ಬಡ ಕಾರ್ಮಿಕ; ಇದೇನಾ ಆರೋಗ್ಯ ವ್ಯವಸ್ಥೆಯ ನಿಜಮುಖ?
ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ಕುರಿತು ಸಹ ನಿಯೋಗವು ಸಿಎಂಗೆ ಮನವಿ ಮಾಡಿದೆ. “ಬೆಳೆ ನಷ್ಟ ಪರಿಹಾರದ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು, ಹವಾಮಾನ ಆಧಾರಿತ ಬೆಳೆ ವಿಮೆ ಸರಿಯಾದ ಸಮಯಕ್ಕೆ ದೊರಕುವಂತೆ ಕ್ರಮ ಕೈಗೊಳ್ಳಬೇಕು, ಹವಾಮಾನ ಮಾಪಕ ಉಪಕರಣಗಳನ್ನು ತುರ್ತಾಗಿ ದುರಸ್ತಿ ಮಾಡಬೇಕು ಹಾಗೂ ಪ್ರವಾಹದಿಂದ ಹಾನಿಯಾದ ರಸ್ತೆಗಳನ್ನು ಪುನರ್ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು,” ಎಂದು ಒತ್ತಾಯಿಸಿದ್ದಾರೆ.
ಈ ನಿಯೋಗದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರುಗಳಾದ ಶಿವರಾಮ್ ಹೆಬ್ಬಾರ್, ಭೀಮಣ್ಣ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ಧಿ, ಅಘನಾಶಿನಿ ಕೊಳ್ಳ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶಿಸರ, ಶ್ರೀ ಸ್ವರ್ಣವಲ್ಲಿ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಸೇರಿದಂತೆ ಪರಿಸರ ಹೋರಾಟಗಾರರು ಭಾಗಿಯಾಗಿದ್ದರು. ಜಿಲ್ಲೆಯ ಹಿತಕ್ಕಾಗಿ ಪಕ್ಷಾತೀತವಾಗಿ ಎಲ್ಲಾ ಪ್ರಮುಖರು ಒಟ್ಟಾಗಿ ಸರ್ಕಾರದ ಗಮನ ಸೆಳೆದಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.





