ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಕಾರವಾರದ ತಹಶೀಲ್ದಾರ್ ಕಚೇರಿಗಳಿಗೆ ಸತತ ಎರಡು ದಿನಗಳ ಅಂತರದಲ್ಲಿ ಬಂದ ಇ-ಮೇಲ್ ಬಾಂಬ್ ಬೆದರಿಕೆಗಳು ಜಿಲ್ಲಾಡಳಿತ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದವು. ಆದಾಗ್ಯೂ, ವ್ಯಾಪಕ ತಪಾಸಣೆಯ ನಂತರ ಈ ಎರಡೂ ಬೆದರಿಕೆಗಳು ಹುಸಿ ಕರೆಯೆಂದು ದೃಢಪಟ್ಟಿವೆ.
ಮೊದಲಿಗೆ ಮಂಗಳವಾರ ಭಟ್ಕಳ ತಹಶೀಲ್ದಾರ್ ಕಚೇರಿಗೆ ಬೆದರಿಕೆ ಸಂದೇಶ ಬಂದಿದ್ದರೆ, ಬೆಳಿಗ್ಗೆ ಕಾರವಾರ ತಹಶೀಲ್ದಾರ್ ಕಚೇರಿಗೆ ಇದೇ ಮಾದರಿಯ ಇ-ಮೇಲ್ ಬಂದಿತ್ತು. ಕಾರವಾರ ತಹಶೀಲ್ದಾರ್ ಕಚೇರಿಗೆ ಸಂದೇಶ ಬಂದ ತಕ್ಷಣ, ತಹಶೀಲ್ದಾರ್ ನಿಶ್ಕಲ್ ನರೋನ್ಹಾ ಅವರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆ, ಹಿರಿಯ ಪೊಲೀಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಸಂಪೂರ್ಣ ಕಚೇರಿಯನ್ನು ಜಾಲಾಡಿ ತಪಾಸಣೆ ನಡೆಸಿದ ನಂತರ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಬಂದಿರುವುದು ಸುಳ್ಳು ಅಥವಾ ವಂಚನೆಯ ಕೃತ್ಯ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.”ಮೇಲ್ನೋಟಕ್ಕೆ ಇದೊಂದು ಕಟ್ಟುಕಥೆಯಂತೆ ಕಂಡುಬಂದರೂ, ನಾವು ಭದ್ರತಾ ದೃಷ್ಟಿಯಿಂದ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಎಲ್ಲ ರೀತಿಯ ತಪಾಸಣೆಗಳನ್ನು ನಡೆಸಿದ್ದೇವೆ,” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಘಟನೆಗಳ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಎಂ.ಎನ್., “ಭಟ್ಕಳ ಮತ್ತು ಕಾರವಾರ ಕಚೇರಿಗಳಿಗೆ ಬಂದಿರುವ ಇ-ಮೇಲ್ ಬೆದರಿಕೆಗಳು ಒಂದೇ ಮಾದರಿಯಲ್ಲಿದ್ದು, ತನಿಖೆ ಮುಂದುವರಿದಿದೆ” ಎಂದು ತಿಳಿಸಿದರು. ಈ ಹಿಂದೆ ಜೂನ್ ತಿಂಗಳಿನಲ್ಲಿ ಭಟ್ಕಳ ಪೊಲೀಸ್ ಠಾಣೆಗೂ ಇದೇ ರೀತಿಯ ಬೆದರಿಕೆ ಬಂದಿತ್ತು, ಆಗ ಆರೋಪಿಯನ್ನು ಬಂಧಿಸಲಾಗಿತ್ತು
ಈ ಸುದ್ದಿ ಓದಿದ್ದೀರಾ? ಸಿದ್ದಾಪುರ | ವಿದ್ಯಾರ್ಥಿಗಳಿಂದ ಭತ್ತದ ಕೊಯ್ಲು: ಪ್ರಾಯೋಗಿಕ ಕೃಷಿ ಅಧ್ಯಯನಕ್ಕೆ ಸಾಕ್ಷಿಯಾದ ಹುಲ್ಕುತ್ರಿ ಶಾಲೆ
ಪ್ರಸ್ತುತ ಇ-ಮೇಲ್ ಕಳುಹಿಸಿದವರ ಮೂಲವನ್ನು ಪತ್ತೆಹಚ್ಚಲು ಸೈಬರ್ ಠಾಣಾ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಜೊತೆಗೆ, ಜಿಲ್ಲೆಯ ಇತರೆ ಸರ್ಕಾರಿ ಕಚೇರಿಗಳಿಗೂ ಇಂತಹ ಬೆದರಿಕೆಗಳು ಬಂದಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಸದ್ಯ ಎರಡೂ ಕಚೇರಿಗಳಲ್ಲಿ ದೈನಂದಿನ ಕಾರ್ಯಗಳು ಯಥಾಸ್ಥಿತಿಯಲ್ಲಿ ಮುಂದುವರಿದಿವೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಎಸ್ಪಿ ಮನವಿ ಮಾಡಿದ್ದು, ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡುವಂತೆ ಸೂಚಿಸಿದ್ದಾರೆ.





