ಉತ್ತರ ಕನ್ನಡ ಜಿಲ್ಲೆಯ ಮುಡಗೇರಿ ಡ್ಯಾಂ ಹತ್ತಿರದ ಅರಣ್ಯ ಪ್ರದೇಶದಲ್ಲಿ ಗೋವಾದಿಂದ ಅಕ್ರಮವಾಗಿ ತರಲಾಗುತ್ತಿದ್ದ ಭಾರೀ ಪ್ರಮಾಣದ ಮದ್ಯವನ್ನು ಅಬಕಾರಿ ಇಲಾಖೆ ಗುರುವಾರ ಬೆಳಿಗ್ಗೆ ವಶಪಡಿಸಿಕೊಂಡಿದೆ. ಅಧಿಕಾರಿಗಳು ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಆರೋಪಿಗಳು ತಮ್ಮ ವಾಹನಗಳನ್ನು ಬಿಟ್ಟು ಕಾಡಿನೊಳಗೆ ಓಡಿ ಪರಾರಿಯಾಗದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಬೆಳಿಗ್ಗೆ ಸುಮಾರು 9 ಗಂಟೆಗೆ ಅಬಕಾರಿ ಅಧಿಕಾರಿಗಳು ಮುಡಗೇರಿ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಐದು ದ್ವಿಚಕ್ರ ವಾಹನಗಳ ಮೇಲೆ ಅನುಮಾನ ಬಂದು ತಪಾಸಣೆ ನಡೆಸಿದ ವೇಳೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ಕಾರ್ಯಾಚರಣೆಯಲ್ಲಿ ಒಟ್ಟು 649.610 ಲೀಟರ್ ಮದ್ಯ ಪತ್ತೆಯಾಗಿದ್ದು. ಇದರಲ್ಲಿ ಗೋವಾ ಫೆನ್ನಿ – 304.830 ಲೀಟರ್, ಗೋವಾ ಮದ್ಯ – 284.280 ಲೀಟರ್ ಹಾಗೂ ಬಿಯರ್ – 60.500 ಲೀಟರ್ ಸೇರಿವೆ. ಜಪ್ತಿ ಮಾಡಿದ ಮದ್ಯದ ಅಂದಾಜು ಮೌಲ್ಯ ₹3,62,350 ಎಂದು ಇಲಾಖೆಯ ಮಾಹಿತಿಯಿಂದ ತಿಳಿದುಬಂದಿದೆ. ಅಲ್ಲದೆ ಮದ್ಯ ಸಾಗಣೆಗೆ ಬಳಸಲಾಗಿದ್ದ ಐದು ದ್ವಿಚಕ್ರ ವಾಹನಗಳು (ಅಂದಾಜು ಮೌಲ್ಯ ₹4,00,000) ವಶಕ್ಕೆ ಪಡೆಯಲಾಗಿದೆ. ಒಟ್ಟು ಜಪ್ತಿ ಮಾಡಿದ ಮೌಲ್ಯ ₹7,62,350 ಆಗಿದೆ. ಪರಾರಿಯಾದ ಆರೋಪಿಗಳ ಪತ್ತೆಗೆ ಅಬಕಾರಿ ಇಲಾಖೆ ಶೋಧ ಕಾರ್ಯಾಚರಣೆ ಮುಂದುವರೆಸಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ವಾರು ಮೀಸಲಾತಿಗೆ ಜಿಲ್ಲೆಯಾದ್ಯಂತ 116 ಆಕ್ಷೇಪಣೆ ಅರ್ಜಿಗಳು ಸಲ್ಲಿಕೆ
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ನಡೆದ ಈ ರೇಡ್ನಲ್ಲಿ ಅಬಕಾರಿ ಉಪ ಅಧೀಕ್ಷಕ ರಮೇಶ್ ಬಿ. ಭಜಂತ್ರಿ, ನಿರೀಕ್ಷಕ ರಂಜೀತಕುಮಾರ ಮೀತ್ರಾ, ಉಪ ನಿರೀಕ್ಷಕ ನಾಗರಾಜ ಕೊಟಗಿ, ಸಿಬ್ಬಂದಿಗಳಾದ ಪ್ರವೀಣಕುಮಾರ ಕಲ್ಲೊಳ್ಳಿ, ಹೇಮಚಂದ್ರ ಈರಣ್ಣನವರ್, ವಿರೇಶ ಕುರಿಯವರ ಹಾಗೂ ಚಾಲಕರಾದ ಇಮ್ಮಿಯಾಝ್ ಮತ್ತು ಪವನ ಮಸೂರಕರ ಭಾಗವಹಿಸಿದ್ದರು.





