ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮತ್ತು ಹಳಿಯಾಳ ತಾಲೂಕಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ‘ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ’ದ ಮೂಲಕ 2025-26ನೇ ಸಾಲಿನಲ್ಲಿ ಬುಡಕಟ್ಟು ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮೀನುಗಾರಿಕೆ ಇಲಾಖೆಯು ವ್ಯಾಪಾರದ ಉತ್ತೇಜನಕ್ಕೆ ಸಬ್ಸಿಡಿ ನೀಡುತ್ತಿದೆ.
ಈ ಯೋಜನೆಯಡಿ ಮೀನು ಮಾರಾಟಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬುಡಕಟ್ಟು ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ಮೀನು ಮಾರಾಟ ಮಾಡಲು ಐಸ್ ಬಾಕ್ಸ್ ಹೊಂದಿರುವ ದ್ವಿಚಕ್ರ ವಾಹನ, ಐಸ್ ಬಾಕ್ಸ್ ಹೊಂದಿರುವ ತ್ರಿಚಕ್ರ ವಾಹನಗಳ ಖರೀದಿ ಹಾಗೂ ಜೀವಂತ ಮೀನು ಮಾರಾಟ ಕೇಂದ್ರಗಳನ್ನು (Live Fish Vending Centres) ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಗೃಹರಕ್ಷಕದಳದಲ್ಲಿ 89 ಸ್ವಯಂಸೇವಕರ ನೇಮಕಾತಿ: ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನ
ವಿಶೇಷವೆಂದರೆ, ಈ ಘಟಕಗಳ ಒಟ್ಟು ವೆಚ್ಚದಲ್ಲಿ ಸರ್ಕಾರವು ಶೇಕಡಾ 90 ರಷ್ಟು ಬೃಹತ್ ಮೊತ್ತದ ಸಹಾಯಧನವನ್ನು ನೀಡಲಿದೆ.
ಯಾವ ಗ್ರಾಮದವರಿಗೆ ಅವಕಾಶ? ಈ ಯೋಜನೆಯು ಆಯ್ದ ಗ್ರಾಮಗಳಿಗೆ ಮಾತ್ರ ಸೀಮಿತವಾಗಿದ್ದು, ಹಳಿಯಾಳ ತಾಲ್ಲೂಕಿನ ಗರುಡೊಳ್ಳಿ ಗ್ರಾಮದವರು ಅರ್ಜಿ ಸಲ್ಲಿಸಬಹುದು. ಜೋಯಿಡಾ ತಾಲ್ಲೂಕಿನ ಜೋಯಿಡಾ, ಅವೇಡ, ರಾಮನಗರ ಮತ್ತು ಪ್ರಧಾನಿ ಗ್ರಾಮಸ್ಥರಿಗೆ ಅವಕಾಶವಿದೆ.
ಮುಂಡಗೋಡ ತಾಲ್ಲೂಕಿನ ಯರೇಬೈಲ್, ಹುಲಿಹೊಂಡ, ಅಗಡಿ, ನಂದಿಕಟ್ಟ, ಉಗ್ಗಿನಕೇರಿ, ಗುಂಜಾವತಿ, ಮೈನಳ್ಳಿ, ಇಂದೂರು, ಹುನಗುಂದ, ಚೌಡಳ್ಳಿ, ನ್ಯಾಸರ್ಗಿ, ಸಾಲಗಾಂವ, ಚಿಗಳ್ಳಿ, ಕಾತೂರ, ಓರಲಗಿ, ರಾಮಾಪುರ, ಕೋಡಂಬಿ, ಭದ್ರಾಪುರ, ಪಾಳಾ, ಸಿದ್ದಾಪುರ, ಮಳಗಿ, ಗೊಟಗೋಡಿಕೊಪ್ಪ ಹಾಗೂ ಕ್ಯಾದಗಿಕೊಪ್ಪ ಗ್ರಾಮಗಳ ನಿವಾಸಿಗಳು ಮಾತ್ರ ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ.
ಆಸಕ್ತ ಮತ್ತು ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಫೆಬ್ರವರಿ 16, 2026 ಕೊನೆಯ ದಿನವಾಗಿದೆ. ಹೆಚ್ಚಿನ ತಾಂತ್ರಿಕ ಮಾಹಿತಿ ಅಥವಾ ಅರ್ಜಿ ಸಲ್ಲಿಕೆಯ ವಿವರಗಳಿಗಾಗಿ ಹಳಿಯಾಳ ಮತ್ತು ಮುಂಡಗೋಡ ಕಚೇರಿಯ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರನ್ನು ನೇರವಾಗಿ ಸಂಪರ್ಕಿಸಬೇಕೆಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.





