ಉತ್ತರ ಕನ್ನಡ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಹಾಗೂ ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಪೋಷಕರನ್ನು ಆಕರ್ಷಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಮಗ್ರ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.
ಇಲಾಖೆಯ ಉಪ ನಿರ್ದೇಶಕರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಜಿಲ್ಲೆಯ ಯಾವುದೇ ಫಲಾನುಭವಿಯೂ ಐಸಿಡಿಎಸ್ (ICDS) ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ವ್ಯಾಪಕ ಸರ್ವೆ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪೋಷಕರು ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಅಂಗನವಾಡಿಗಳಲ್ಲೂ ಮಾಂಟೆಸರಿ ಮಾದರಿಯ ಎಲ್ಕೆಜಿ ಮತ್ತು ಯುಕೆಜಿ ಶಿಕ್ಷಣವನ್ನು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಾಯೋಗಿಕ ಹಂತದಲ್ಲಿ 75 ಕೇಂದ್ರಗಳಲ್ಲಿ ಈ ಸೌಲಭ್ಯ ದೊರೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕೇಂದ್ರಗಳಿಗೂ ಇದನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ. ಈ ಮಕ್ಕಳಿಗೆ ವಿಶೇಷ ಬೋಧನಾ ಸಾಮಗ್ರಿ (TLM) ಹಾಗೂ ಶಾಲಾಪೂರ್ವ ಶಿಕ್ಷಣದ ಪುಸ್ತಕಗಳನ್ನು ಒದಗಿಸಿ ವ್ಯವಸ್ಥಿತ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಶಾಲಾಪೂರ್ವ ಶಿಕ್ಷಣದ ಗುಣಮಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ‘ಪೋಷಣ್ ಭಿ ಪಡಾಯಿ ಭಿ’ ಕಾರ್ಯಕ್ರಮದಡಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ತರಬೇತಿ ನೀಡಲಾಗಿದೆ. ಆಧುನಿಕ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲಾಗುತ್ತಿದ್ದು, ಸಕ್ಷಮ ಅಂಗನವಾಡಿ ಯೋಜನೆಯಡಿ ಈಗಾಗಲೇ 448 ಕೇಂದ್ರಗಳಿಗೆ ಸ್ಮಾರ್ಟ್ ಟಿವಿಗಳನ್ನು ವಿತರಿಸಲಾಗಿದೆ. ಉಳಿದ ಎಲ್ಲಾ ಕೇಂದ್ರಗಳಿಗೂ ಶೀಘ್ರದಲ್ಲೇ ಸ್ಮಾರ್ಟ್ ಟಿವಿ ಸೌಲಭ್ಯ ಕಲ್ಪಿಸಲಾಗುವುದು. ಕೇವಲ ಶಿಕ್ಷಣ ಮಾತ್ರವಲ್ಲದೆ ಮಕ್ಕಳ ಪೌಷ್ಟಿಕತೆಯ ವಿಚಾರದಲ್ಲೂ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಡಿಸೆಂಬರ್ 2023 ರಿಂದ ಡಿ.ಎಫ್.ಆರ್.ಎಲ್ ಸೂತ್ರದಡಿ ಗುಣಮಟ್ಟದ ಆಹಾರ ನೀಡಲಾಗುತ್ತಿದ್ದು, ‘ಸೃಷ್ಟಿ’ ಯೋಜನೆಯಡಿ ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಗೂ ಸಾಮಾನ್ಯ ಮಕ್ಕಳಿಗೆ ಎರಡು ದಿನ ಮೊಟ್ಟೆ ವಿತರಿಸಲಾಗುತ್ತಿದೆ. ಜೊತೆಗೆ ‘ಕ್ಷೀರಭಾಗ್ಯ’ ಯೋಜನೆಯಡಿ ವಾರದಲ್ಲಿ ಐದು ದಿನ ಹಾಲು ನೀಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ | ನರೇಗಾ ರದ್ದತಿ ಕೇವಲ ವದಂತಿ; ಆತಂಕ ಬಿಟ್ಟು ಕೆಲಸ ಮಾಡಿ ಇಒ ಟಿ.ವಾಯ್. ದಾಸನಕೊಪ್ಪ ಭರವಸೆ
ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಕೇಂದ್ರಗಳಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು, ವಿದ್ಯುತ್ ಹಾಗೂ ಫ್ಯಾನ್ ಸಂಪರ್ಕ ಕಲ್ಪಿಸಲಾಗಿದೆ. ಮಕ್ಕಳನ್ನು ಆಕರ್ಷಿಸಲು ‘ಬಾಲ ಸ್ನೇಹಿ’ ಪೇಂಟಿಂಗ್ಗಳನ್ನು ಮಾಡಿಸಲಾಗುತ್ತಿದ್ದು, 2025 ರ ಡಿಸೆಂಬರ್ ಅಂತ್ಯದ ವೇಳೆಗೆ 132 ಮಾದರಿ ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳ್ಳಲಿದೆ.
ಸಮುದಾಯದ ಸಹಭಾಗಿತ್ವದಡಿ ಬ್ರಿಟಾನಿಯಾ ಸಂಸ್ಥೆಯಿಂದ ಪುಷ್ಟಿ ಬಿಸ್ಕೇಟ್ ಹಾಗೂ ಮುಂಡಗೋಡ, ಶಿರಸಿ, ಹಳಿಯಾಳ ಭಾಗದ ತಾಯಂದಿರಿಗೆ ಪೌಷ್ಟಿಕಾಂಶದ ಕಿಟ್ಗಳನ್ನು ನೀಡಲಾಗುತ್ತಿದೆ. ಮಹತ್ವಾಕಾಂಕ್ಷಿ ತಾಲೂಕುಗಳಾದ ಮುಂಡಗೋಡ ಮತ್ತು ಜೋಯಿಡಾದಲ್ಲಿ ‘ಶಿಕ್ಷಣ ಫೌಂಡೇಶನ್’ ಸಹಯೋಗದೊಂದಿಗೆ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿ ವಿಶೇಷ ತರಬೇತಿ ನೀಡಲಾಗುತ್ತಿದೆ. ಈ ಎಲ್ಲಾ ಪ್ರಗತಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತ್ರೈಮಾಸಿಕವಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಾಗುತ್ತಿದೆ ಎಂದು ಉಪ ನಿರ್ದೇಶಕರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.





