ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಕೂಗು ಜಿಲ್ಲೆಯ ರಾಜಕಾರಣಿಗಳಿಗೆ ಹಾಗೂ ರಾಜ್ಯದ ಎಲ್ಲಾ ಪಕ್ಷದ ನಾಯಕರಿಗೆ ಹೊಸದೇನಲ್ಲ. ಈಗ ಅದು ಸಾಲದೆಂಬಂತೆ ಜಿಲ್ಲೆಯಾದ್ಯಂತ ಮಕ್ಕಳ ಮತ್ತು ಹೆರಿಗೆ ವೈದ್ಯರ ಕೊರತೆ ಕೂಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಾಮಾನ್ಯವಾಗಿದೆ. ಇದರಿಂದ ಜನಸಾಮಾನ್ಯರು ಹೆರಿಗೆಗೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವಂತಾಗಿದೆ. ವಿಶೇಷವಾಗಿ ಹೆರಿಗೆ ಸೇವೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ಬಡ ಮಹಿಳೆಯರು ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕಾದಿದ್ದ ಜಿಲ್ಲೆಯ ಜನರಿಗೆ ಇದೀಗ ತಜ್ಞ ವೈದ್ಯರ ಕೊರತೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.
ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 15 ರಿಂದ 17 ಸಾವಿರ ಹೆರಿಗೆಗಳು ನಡೆಯುತ್ತಿವೆ. ಆದರೆ ಅವುಗಳಲ್ಲಿ ಶೇ.40 ರಷ್ಟು ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ. ಅಂಕೋಲಾ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಶೇ.90ರಷ್ಟು ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ನಡೆದಿವೆ. ಜೋಯಿಡಾ ತಾಲೂಕು ಒಂದು ಬಿಟ್ಟರೆ ಉಳಿದ ಎಲ್ಲ ತಾಲೂಕುಗಳಲ್ಲಿ ಖಾಸಗಿ ಆಸ್ಪತ್ರೆಗಳೇ ಆರೋಗ್ಯ ಸೇವೆ ನೀಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಇದು ಬಡವರಿಗೆ ದುಬಾರಿಯಾಗಿ ಪರಿಣಮಿಸಿದ್ದು ಅವರನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡಿದೆ. ಹೆರಿಗೆ ಸಮಯದಲ್ಲಿ ಕೈಗೆಟುಕದಷ್ಟು ವೆಚ್ಚ ಭರಿಸುವ ಹೊತ್ತಿಗೆ ಜನ ಸಾಮಾನ್ಯರು ಹೈರಾಣಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಒಂದು ಜಿಲ್ಲಾಸ್ಪತ್ರೆ, 10 ತಾಲೂಕು ಆಸ್ಪತ್ರೆಗಳು, ಎರಡು ಹೆರಿಗೆ ಆಸ್ಪತ್ರೆಗಳಿವೆ. ಪ್ರಾಥಮಿಕ ಮತ್ತು ಸಮುದಾಯ ಸೇರಿ ಒಟ್ಟು 89 ಆರೋಗ್ಯ ಕೇಂದ್ರಗಳಿವೆ. ಆದರೆ ವೈದ್ಯರ ಸಂಖ್ಯೆ ತೀರಾ ಕಡಿಮೆ. ಬಹುತೇಕ ಆಸ್ಪತ್ರೆಗಳಲ್ಲಿ ಪ್ರಸೂತಿ ತಜ್ಞರು, ಮಕ್ಕಳ ತಜ್ಞರು ಲಭ್ಯವಿಲ್ಲ. ತಾಲೂಕು ಆಸ್ಪತ್ರೆಗಳಲ್ಲಿ ಸಿಗದ ಸೇವೆಗಾಗಿ ಜನರು ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ.
ಕಾರವಾರದಲ್ಲಿರುವ ಜಿಲ್ಲಾಸ್ಪತ್ರೆ ಜಿಲ್ಲೆಯ ಒಂದು ಮೂಲೆಯಲ್ಲಿ ಇರುವುದರಿಂದ ಬೇರೆ ತಾಲೂಕುಗಳ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಜಿಲ್ಲಾಸ್ಪತ್ರೆಗೆ ತಲುಪುವುದು ಕಷ್ಟಕರವಾಗಿದೆ. ಕಾರವಾರದಿಂದ ಜಿಲ್ಲೆಯ ಇತರ ಭಾಗಗಳ ಕೊನೆಯ ಗ್ರಾಮಗಳಿಗೆ ಸುಮಾರು 35 ರಿಂದ 120 ಕಿಲೋಮೀಟರ್ ದೂರವಿದ್ದು, ಮಧ್ಯರಾತ್ರಿಯ ತುರ್ತು ಪರಿಸ್ಥಿತಿಗಳಿಗೆ ಜನರು ಖಾಸಗಿ ಆಸ್ಪತ್ರೆಗೇ ಧಾವಿಸುವಂತಾಗಿದೆ.

2023–24ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 17,068 ಹೆರಿಗೆಗಳು ನಡೆದಿವೆ. ಅದರಲ್ಲಿ 9,784 ಹೆರಿಗೆಗಳು ಸರಕಾರಿ ಆಸ್ಪತ್ರೆಗಳಲ್ಲಿ ನಡೆದರೆ, 7,279 ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ನಡೆದಿವೆ. ಐದು ಹೆರಿಗೆಗಳು ಮನೆಯಲ್ಲಿಯೇ ನಡೆದಿವೆ.
2024–25ನೇ ಸಾಲಿನಲ್ಲಿ ಏಪ್ರಿಲ್ನಿಂದ ಜನವರಿವರೆಗೆ 10 ತಿಂಗಳಲ್ಲಿ 13,433 ಹೆರಿಗೆಗಳು ನಡೆದಿದ್ದು, ಅದರಲ್ಲಿ ಶೇ.44ರಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ನಡೆದಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ.
2024–25ನೇ ಸಾಲಿನಲ್ಲಿ ಒಟ್ಟು 13,433 ಹೆರಿಗೆಗಳು ನಡೆದಿದ್ದು, ಈ ಪೈಕಿ 7,435 (55.34%) ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ 5,996 (44.63%) ಖಾಸಗಿ ಆಸ್ಪತ್ರೆಗಳಲ್ಲಿ ನಡೆದಿವೆ. ಈ ಅಂಕಿ–ಅಂಶಗಳು ಸ್ಪಷ್ಟವಾಗಿ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿರುವ ಮೂಲಸೌಕರ್ಯದ ಕೊರತೆಯನ್ನು ತೋರಿಸುತ್ತವೆ.
ಆಸ್ಪತ್ರೆಗೆ ಬಂದಿದ್ದ ಸ್ಥಳೀಯ ನಿವಾಸಿ ಯಶಸ್ವಿನಿ ಈದಿನ.ಕಾಂ ಜೊತೆ ಮಾತನಾಡಿ, “ಆರೋಗ್ಯ ಸೇವೆ ಪಡೆದುಕೊಳ್ಳುವುದು ಜನಸಾಮಾನ್ಯರ ಹಕ್ಕು ಎಂದು ಸರ್ಕಾರ ಹೇಳುತ್ತದೆ. ಆದರೆ, ಆ ಸೇವೆ ಕೊಡುವವರು ಯಾರು? ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡ್ತೇವೆ ಅಂತ ರಾಜಕಾರಣಿಗಳು ವರ್ಷಗಳಿಂದ ಮಾತಾಡ್ತಿದ್ದಾರೆ. ಆದರೆ ಇವತ್ತಿಗೂ ನಮ್ಮ ಊರಲ್ಲಿ ಹೆರಿಗೆ ಡಾಕ್ಟರ್ಗಳೇ ಸಿಗೋದಿಲ್ಲ. ನಾವು ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗ್ಬೇಕಾದರೆ ಲಕ್ಷ ಲಕ್ಷ ಖರ್ಚು ಮಾಡ್ಬೇಕು. ಹೀಗಾದರೆ ಸರ್ಕಾರ ಇರುವುದೇಕೆ? ಜಿಲ್ಲಾಸ್ಪತ್ರೆ ಇರೋವುದು ಒಂದು ಮೂಲೆಯಾದರೆ, ನಮ್ಮ ಗ್ರಾಮ ಇರೋದು ಇನ್ನೊಂದು ಮೂಲೆ. ರಾತ್ರಿ ತುರ್ತು ಪರಿಸ್ಥಿತಿಯಲ್ಲಿ ಎದುರಾದರೆ ಯಾರಿಗೆ ಹೇಳೊದು? ರಾಜಕಾರಣಿಗಳು ಹೀಗೇ ಇರುತ್ತಾರಾ? ಅವರಿಗೆ ಬೇಕಾದ ಸೌಕರ್ಯಗಳನ್ನು ಮಾಡಿಕೊಂಡು ನೆಮ್ಮದಿಯಾಗಿರ್ತಾರೆ. ಅವರಿಗೆ ಓಟು ಹಾಕಿದ ಜನರ ಪರಿಸ್ಥಿತಿ ಅವರಿಗೆ ಬೇಕಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆಯ ಹೊರರೋಗಿ ರಂಗಪ್ಪ ಮಾತನಾಡಿ, “ನಮ್ಮೂರಿನಿಂದ ಇಲ್ಲಿಗೆ ಬರೋಕೆ ಬಾಳ ತೊಂದ್ರೆ ಆಗುತ್ತೆ. ಸ್ಪೆಷಾಲಿಟಿ ಆಸ್ಪತ್ರೆ ಕಟ್ತೀವಿ ಅಂತ ಹೇಳಿ ಇಲ್ಲಿಗೆ ಸುಮಾರು ವರ್ಷಗಳೇ ಆದ್ವು. ಆದ್ರೆ ಇನ್ನೂ ಆಗಿಲ್ಲ. ಕಡೆಪಕ್ಷ ಅದನ್ನಾದ್ರೂ ಮಾಡಿಕೊಟ್ರೆ ನಮ್ಮಂತ ಬಡವರಿಗೆ ಅನುಕೂಲ ಆಗುತ್ತೆ. ಖಾಸಗಿಯವ್ರಿಗೆ ದುಡ್ಡು ಹೊಂದಿಸೋಕೆ ನಮ್ಮಿಂದ ಸಾಧ್ಯವಿಲ್ಲ. ಈ ಆಸ್ಪತ್ರೆಲಿ ಹೆರಿಗೆಗೆ, ಮಕ್ಕಳು ನೋಡೋಕೆ ಒಳ್ಳೆ ಡಾಕ್ಟರ್ಗಳೇ ಇಲ್ಲ. ಸಂಬಂಧಪಟ್ಟೋರು ಗಮನಹರಿಸಿ ಒಳ್ಳೆ ಆಸ್ಪತ್ರೆ ಕಟ್ಟಿಕೊಡಲಿ, ಅದಾಗದಿದ್ರೆ ಇರೋ ಆಸ್ಪತ್ರೆಗೆ ವೈದ್ಯರನ್ನಾದ್ರೂ ನೇಮಿಸಲಿ” ಎಂದರು.
ಪ್ರತಿ ತಾಲೂಕು ಮಟ್ಟದಲ್ಲಿ ತಜ್ಞ ವೈದ್ಯರ ನೇಮಕಾತಿ ಹಾಗೂ ಜಿಲ್ಲೆಯಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಎಷ್ಟು ಅಗತ್ಯವಿದೆ ಎಂದು ಅಂಕಿ ಅಂಶಗಳೆ ಹೇಳುತ್ತಿವೆ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರಾಜ್ಯದ ನಾಯಕರು ಈ ಸಮಸ್ಯೆಗಳನ್ನು ರಾಜಕೀಯಗೊಳಿಸದೆ ಜಿಲ್ಲೆಯ ಜನರ ಉಳಿವಿಗಾಗಿ ಮತ್ತು ಅವರ ಬದುಕಿಗಾಗಿ ಆಲೋಚಿಸಿ ಪಕ್ಷಾತೀತವಾಗಿ ಜಿಲ್ಲೆಯ ಸಮಸ್ಯೆಗಳನ್ನು ರಾಜ್ಯಮಟ್ಟದಲ್ಲಿ ಪ್ರಸ್ತಾಪಿಸಿ, ಆರೋಗ್ಯ ಸೇವೆಯಲ್ಲಿ ಬೇಕಾಗಿರುವ ಕನಿಷ್ಠ ಮೂಲ ಸೌಕರ್ಯಗಳನ್ನಾದರೂ ತರಲು ಎಲ್ಲರೂ ಸೇರಿ ಒತ್ತಾಯಿಸಬೇಕಾಗಿದೆ ಎಂಬುದು ಜಿಲ್ಲೆಯ ಜನರ ಮನವಿ.
ಇದನ್ನೂ ಓದಿ: ಉತ್ತರ ಕನ್ನಡ | ದೇವಭಾಗ್ ಬೀಚ್ನಲ್ಲಿ ಮತ್ತೆ ‘ಮೀನಿನ ಮಳೆ’!
ಕಾರವಾರದ ಜಿಲ್ಲಾಸ್ಪತ್ರೆಯ ಭೌಗೋಳಿಕ ಸೀಮಿತತೆಯಿಂದ, ದೂರದ ಗ್ರಾಮಗಳ ಮಹಿಳೆಯರಿಗೆ ತುರ್ತು ಪರಿಸ್ಥಿತಿಯಲ್ಲಿ ತಲುಪುವುದು ಕಷ್ಟ, ಈ ಮೂಲಕ ಆರ್ಥಿಕ ಮತ್ತು ಶಾರೀರಿಕ ಹಿಂಸೆಗೆ ಕಾರಣವಾಗಿದೆ. ಅಂಕಿ–ಅಂಶಗಳು ಹಾಗೂ ಸ್ಥಳೀಯ ವರದಿಗಳು ತಜ್ಞ ವೈದ್ಯರ ನೇಮಕಾತಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪನೆಯ ಅಗತ್ಯತೆಯನ್ನು ಒತ್ತಿ ಹೇಳುತ್ತಿವೆ.
ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರಾಜ್ಯದ ನಾಯಕರು ಈ ಸಮಸ್ಯೆಗಳನ್ನು ರಾಜಕೀಯ ಒಳಿತಿಗಾಗಿ ಅಲ್ಲ, ಜನರ ಜೀವ ಮತ್ತು ಆರೋಗ್ಯಕ್ಕಾಗಿ ಪಕ್ಷಾತೀತವಾಗಿ ಮುಂದಿಟ್ಟುಕೊಳ್ಳಬೇಕು ಎಂಬುದು ನಾಗರಿಕರ ಬಹಿರಂಗ ಮನವಿ. ಆರೋಗ್ಯ ಸೇವೆಯಲ್ಲಿ ಕನಿಷ್ಠ ಮೂಲಸೌಕರ್ಯಗಳ ಭದ್ರತೆ ಇಲ್ಲದಿದ್ದರೆ, ಬಡ ಮತ್ತು ಮಧ್ಯಮವರ್ಗದ ಜನರಿಗೆ ಆರೋಗ್ಯದ ಹಕ್ಕು ಸಾಧಿಸಲು ಸಾಧ್ಯವಿಲ್ಲ.




