ಉತ್ತರ ಕನ್ನಡ: ಕುಮಟಾ–ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಗುತ್ತಿಗೆದಾರರಿಗೆ ಬಿಡುಗಡೆ ಮಾಡಬೇಕಿದ್ದ ಸುಮಾರು ₹100 ಕೋಟಿ ಹಣ ಕೇಂದ್ರದಿಂದ ಬಾಕಿ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ, “ಇಷ್ಟು ಮುಖ್ಯ ಕಾಮಗಾರಿಗೂ ಹಣ ಕೊಡಲು ಸಾಧ್ಯವಾಗದಿದ್ದರೆ ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರ ಬೇಕು” ಎಂದು ಕಿಡಿಕಾರಿದರು.
ಯೋಜನಾ ಸಮಿತಿ ರಚನೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಮೂರು ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ನಿಂತಿದೆ. ಜನರು ಬೇರೆ ಮಾರ್ಗ ಹಿಡಿದು ಶಿರಸಿಗೆ ತಲುಪುವ ಪರಿಸ್ಥಿತಿ ಉಂಟಾಗಿದೆ. ಕಾಮಗಾರಿಗೆ ಹಣವನ್ನು ಸರಿಯಾದ ಸಮಯಕ್ಕೆ ಬಿಡುಗಡೆ ಮಾಡದೆ ಕುಳಿತಿರುವ ಕೇಂದ್ರ ಸರ್ಕಾರದ ನಡೆಯನ್ನು ನೋಡುತ್ತಿದ್ದಾರೆ ನಮ್ಮ ಜಿಲ್ಲೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಕಾಳಜಿ ಇದ್ದಂತೆ ತೊರುತ್ತಿಲ್ಲ ಜಿಲ್ಲೆಯ ಬಗ್ಗೆ ಈ ನಿರ್ಲಕ್ಷ್ಯ ಧೋರಣೆ ಯಾಕೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. ಇನ್ನೂ ಮುಂದುವರೆದು, “ರಾಷ್ಟ್ರೀಯ ಹೆದ್ದಾರಿ–66 ಕಾಮಗಾರಿ ಸಹ ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಎರಡೂ ಕಾಮಗಾರಿಗಳ ಸ್ಥಿತಿ ನೋಡಿದರೆ ಕೇಂದ್ರದ ಹಣಕಾಸು ನಿರ್ವಹಣೆಯ ಸಾಮರ್ಥ್ಯ ದಿವಾಳಿಯಾಗಿರುವಂತೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಳಿ ಸೇತುವೆ ಭೂಮಿಪೂಜೆ ವಿವಾದ ಕಾಳಿ ಸೇತುವೆಯ ಭೂಮಿಪೂಜೆಗೆ ಜಿಲ್ಲಾ ಉಸ್ತುವಾರಿ ಸಚಿವನಾದ ತಮಗೆ ಆಹ್ವಾನ ನೀಡದಿರುವುದನ್ನು ವೈದ್ಯ ಗಂಭೀರವಾಗಿ ಟೀಕಿಸಿದರು. “ಜಿಲ್ಲಾ ಉಸ್ತುವಾರಿ ಸಚಿವನಿಗೆ ಕರೆಯದೆ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಸಿರುವುದು ಪ್ರೋಟೊಕಾಲ್ ಉಲ್ಲಂಘನೆ ಹೌದು ಅಲ್ಲ ಎಂಬುದನ್ನು ಕಾಗೇರಿ ಅವ್ರೆ ಹೇಳಬೇಕು, ಕಾಗೇರಿ ಅವರು ಹಿಂದೆ ಸಚಿವರಾಗಿದ್ದರು, ಸ್ಪೀಕರಾಗಿದ್ದರು, ಈಗ ಸಂಸದರಾಗಿದ್ದಾರೆ. ಅವರೇ ಈ ನಡೆ ಬಗ್ಗೆ ವಿವರಿಸಬೇಕು. ಅಥವಾ ಅವರಿಗೆ ವಯಸ್ಸಿನ ಮರೆವೋ ತಿಳಿಯದು, ಎಂದು ವ್ಯಂಗ್ಯವಾಡಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ವಾರು ಮೀಸಲಾತಿಗೆ ಜಿಲ್ಲೆಯಾದ್ಯಂತ 116 ಆಕ್ಷೇಪಣೆ ಅರ್ಜಿಗಳು ಸಲ್ಲಿಕೆ
ಸಿಆರ್ಝೆಡ್ ಸಡಿಲಿಕೆ ಅಗತ್ಯ ಸಮುದ್ರ ತೀರ ಪ್ರದೇಶಗಳಾಭಿವೃದ್ಧಿಗೆ ಸಿಆರ್ಝೆಡ್ ನಿಯಮ ಸಡಿಲಿಕೆ ಅತ್ಯಂತ ಅವಶ್ಯಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, “ಗೋವಾ–ಕೇರಳಕ್ಕೆ ನೀಡಿದ ಸಡಿಲಿಕೆ ನಮಗೂ ದೊರಕಬೇಕು. ಇಲ್ಲದಿದ್ದರೆ ಜಿಲ್ಲೆಯ ಸಮುದ್ರ ತೀರದಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ,” ಎಂದರು.
ಕೇಣಿ ಬಂದರು ಯೋಜನೆಗೆ ಬೆಂಬಲ ಕೇಣಿ ಬಂದರು ಆಗಬೇಕು ನಾನು ಅದರ ಪರವಾಗಿ ಇದ್ದೆನೆ ಮೀನುಗಾರರಿಗೆ ಸಮಸ್ಯೆ ಆಗುವಂತದಿದ್ದರೆ ಯೋಜನೆ ಜಾರಿ ಆಗುವುದನ್ನು ವಿರೋಧಿಸುತ್ತೇನೆ ಎಂದು ತಮ್ಮ ನೀಲುವನ್ನು ತಿಳಿಸಿದರು. ನಾನು ಮೀನುಗಾರರ ಸಮುದಾಯದಿಂದ ಬಂದವನಾದ್ದರಿಂದ ಅವರ ವಿರುದ್ಧದ ಯಾವ ಯೋಜನೆಯನ್ನೂ ನಾನು ಒಪ್ಪುವುದಿಲ್ಲ. ಆದರೆ ಅಭಿವೃದ್ಧಿ ದೃಷ್ಟಿಯಿಂದ ಬಂದರು ಯೋಜನೆ ಅಗತ್ಯ. ಹಿಂದಿನ ಬಿಜೆಪಿ ಸರ್ಕಾರವೇ ಕ್ಲಿಯರೆನ್ಸ್ ನೀಡಿತ್ತು ಈಗ ನಮ್ಮ ಸರ್ಕಾರ ಒಪ್ಪಂದಗಳನ್ನು ಮುಂದುವರೆಸಿದೆ ಅಷ್ಟೇ ಎಂದು ಹೇಳಿದರು. ಯೋಜನೆ ವಿರೋಧಿಸುವವರಿಗೆ ಮುಖ್ಯಮಂತ್ರಿ ಭೇಟಿಯ ಅವಶ್ಯಕತೆ ಇಲ್ಲ. ಯೋಜನೆ ಬೇಕೆಂದವರಿಗೆ ಮಾತ್ರ ಸಂಶಯ ನಿವಾರಣೆ ಸಾಧ್ಯ. ಅಧಿಕಾರಿಗಳು, ಜನಪ್ರತಿನಿಧಿಗಳು, ಮಾಧ್ಯಮದವರು—ಎಲ್ಲರೂ ಸತ್ಯಶೋಧನೆಯಲ್ಲಿದ್ದಾರೆ. ಅದು ಪೂರ್ಣವಾದ ಮೇಲೆ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಿಲಾಗುವುದು ಎಂದು ಸ್ಪಷ್ಟಪಡಿಸಿದರು.





