ಭಾಷೆ ಯಾರ ಸ್ವತ್ತೂ ಅಲ್ಲ, ನಾವು ಯಾವುದೇ ಭಾಷೆ ಬೇಕಾದರೂ ಕಲಿಯಬಹುದು ಎಂದು ದಾಂಡೇಲಿಯ ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯ ಶಿಕ್ಷಕ ಅಬ್ದುಲ್ ರೆಹಮಾನ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ಮುಸ್ಲಿಂ ಎಜುಕೇಶನ್ ಸೊಸೈಟಿಯ, ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಒಂದು ದಿನದ ಕಾರ್ಯಗಾರದಲ್ಲಿ ಅತಿಥಿಯಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಆಫ್ತಾಭ ಅತ್ತಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ಯಾವ ರೀತಿ ಅಧ್ಯಯನ ಮಾಡಬೇಕೆಂಬ ವಿಷಯದಲ್ಲಿ ಸಮಗ್ರವಾಗಿ ಮಾಹಿತಿ ನೀಡಿದರು, ಮೊಹಮ್ಮದ್ ಇಸ್ಮಾಯಿಲ್ ಅವರು, ಎಸ್ಎಸ್ಎಲ್ಸಿ ನಂತರದ ಕೋರ್ಸ್ಗಳ ಬಗ್ಗೆ ಸಮಗ್ರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ಆಯೇಷಾ ಮಾತನಾಡಿ, “ಹೆಣ್ಣು ಮಕ್ಕಳ ಶಿಕ್ಷಣವನ್ನು ಮುಂದುವರೆಸಲು ಸರ್ಕಾರವು ಸಾಕಷ್ಟು ಅವಕಾಶ ನೀಡಿದೆ. ಯಾವುದೇ ತೊಂದರೆ ಇಲ್ಲದೆ ಶಿಕ್ಷಣ ಮುಂದುವರೆಸಬಹುದು. ಹಾಗೆಯೇ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಕಾಳಜಿ ವಹಿಸಬೇಕು” ಎಂದು ಸಲಹೆ ನೀಡಿದರು.
ಅತಿಥಿ ಡಾ. ಎನ್ ಬಿ ನಾಲತವಾಡ ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಪಡಿಯಬೇಕಾದರೆ ಏಕಾಗ್ರತೆ, ಸಂಯಮ, ಶಿಸ್ತು ಮತ್ತು ಸಮಯ ಪಾಲನೆ ಇವುಗಳೆಲ್ಲವೂ ಇದ್ದರೆ ಯಾವುದೇ ಪರೀಕ್ಷೆಗಳನ್ನು ನಾವು ಉತ್ತಮವಾಗಿ ಎದುರಿಸಬಹುದು ಹಾಗೂ ಯಶಸ್ಸು ಪಡೆಯಬಹುದು” ಎಂದು ನುಡಿದರು.
ಅಲಹಾಜ್ ಎ ಏ ಅತ್ತಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ ವತಿಯಿಂದ ಯೋಚಿಸಲಾದ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಬಹು ಅಮೂಲ್ಯವಾದಂತಹ ಮಾಹಿತಿ ನೀಡಿವೆ” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಇಂಧನ ಇಲಾಖೆ ರದ್ದುಗೊಳಿಸಿರುವ ಅಕ್ರಮ-ಸಕ್ರಮ ಯೋಜನೆ ಮುಂದುವರಿಕೆಗೆ ಒತ್ತಾಯ
ಕಾರ್ಯಕ್ರಮದಲ್ಲಿ ಎಂಇಎಸ್ ಸಂಸ್ಥೆ ಉಪಾಧ್ಯಕ್ಷ ಜನಾಬ್ ಇಕ್ಬಾಲ್ ಶೇಖ್, ಕಾರ್ಯದರ್ಶಿ ಜನಾಬ್ ಬದ್ಧರುಜ್ಜಾಮ, ಜನಾಬ್ ರಾಜೇಸಾಬ್ ಸುಂಕದ್, ಇಮ್ತಿಯಾಜ್ ಅತ್ತಾರ, ನವಾಜ್ ಕರೀಂ ಖಾನ್ ಸೇರಿದಂತೆ ಇತರರು ಇದ್ದರು.





