ಉತ್ತರ ಕನ್ನಡ: ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳಿಗೆ ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುವ ಉದ್ದೇಶದಿಂದ, ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ “ಪೋಷಕರ-ಶಿಕ್ಷಕರ ಮಹಾಸಭೆ” ಏಕಕಾಲಕ್ಕೆ ಜಿಲ್ಲೆಯಾದ್ಯಂತ ನಡೆಯಲಿದೆ.
ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಅವರು ಪ್ರಕಟಣೆ ನೀಡಿದ್ದು, ಸಭೆಗೆ ಎಲ್ಲಾ ಸರ್ಕಾರಿ ಶಾಲಾ ಮತ್ತು ಕಾಲೇಜುಗಳ ಪಾಲಕರು-ಪೋಷಕರು ಕಡ್ಡಾಯವಾಗಿ ಹಾಜರಾಗುವಂತೆ ಕೋರಿದ್ದಾರೆ. ಸಭೆಯ ಕಾರ್ಯಕ್ರಮದ ಅಂಗವಾಗಿ ಸಂವಿಧಾನ ಪೀಠಿಕೆಯ ಓದು, ಸಭೆಯ ಉದ್ದೇಶಗಳ ಮಂಡನೆ, ಮಕ್ಕಳ ಕಲಿಕಾ ಪ್ರಗತಿ ಮತ್ತು ಹಾಜರಾತಿ ವರದಿ ಹಂಚಿಕೆ, ಪೋಷಕರೊಂದಿಗೆ ಪ್ರಗತಿ ಪತ್ರ ವಿತರಣೆ ಮತ್ತು ಚರ್ಚೆ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಶಾಲಾ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರದ ಅರಿವು ಮೂಡಿಸುವಿಕೆ ನಡೆಯಲಿದೆ.
ಇದೇ ರೀತಿ, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಅಭಿನಂದನೆಗೊಳಿಸುವ ಕಾರ್ಯಕ್ರಮ, ಬಾಲ್ಯ ವಿವಾಹ ನಿಷೇಧ ಮತ್ತು ಬಾಲ ಕಾರ್ಮಿಕ ನಿಷೇಧ ನೀತಿಗಳ ಬಗ್ಗೆ ಜಾಗೃತಿ ಮೂಡಿಸುವಿಕೆ, ಹಾಗೂ ವಿಶೇಷ ಚೇತನ ಮಕ್ಕಳಿಗೆ ನೀಡಲಾಗುವ ಸೌಲಭ್ಯಗಳ ಕುರಿತು ಪೋಷಕರಿಗೆ ಅರಿವು ನೀಡುವುದು ಸೇರಿದಂತೆ ಹಲವಾರು ಚಟುವಟಿಕೆಗಳು ನಡೆಯಲಿವೆ. ಸಭೆಯಲ್ಲಿ ಶಾಲೆಯ ಅಭಿವೃದ್ಧಿಯಲ್ಲಿ ಭಾಗೀದಾರರ ಪಾತ್ರ, ಪೋಷಕರ ಸಹಕಾರದ ಅಗತ್ಯತೆ, ಮತ್ತು ಪೋಷಕರ ಪ್ರತಿಭೆ ಗುರುತಿಸುವಿಕೆ ಕುರಿತ ಚರ್ಚೆಗೂ ಅವಕಾಶ ಕಲ್ಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜಿಲ್ಲೆಯಲ್ಲಿ ಆರು ಸಂಚಾರಿ ಆರೋಗ್ಯ ಘಟಕಗಳ ಸೇವೆ ಶೀಘ್ರದಲ್ಲೇ ಪ್ರಾರಂಭ
ಜಿಲ್ಲೆಯ ಪೋಷಕರ-ಶಿಕ್ಷಕರ ಮಹಾಸಭೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ 1089 ಪ್ರಾಥಮಿಕ ಶಾಲೆಗಳ 41,224 ವಿದ್ಯಾರ್ಥಿಗಳು ಮತ್ತು 76 ಪ್ರೌಢಶಾಲೆಗಳ 7,259 ವಿದ್ಯಾರ್ಥಿಗಳು, ಕಾರವಾರ ಶೈಕ್ಷಣಿಕ ಜಿಲ್ಲೆಯ 913 ಪ್ರಾಥಮಿಕ ಶಾಲೆಗಳ 36,689 ವಿದ್ಯಾರ್ಥಿಗಳು ಮತ್ತು 49 ಪ್ರೌಢಶಾಲೆಗಳ 6,562 ವಿದ್ಯಾರ್ಥಿಗಳು, ಜೊತೆಗೆ ಪದವಿ ಪೂರ್ವ ವಿಭಾಗದ 37 ಕಾಲೇಜುಗಳ 12,488 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಒಟ್ಟಾರೆ ಜಿಲ್ಲೆಯ 2,164 ಸರ್ಕಾರಿ ಶಾಲೆ-ಕಾಲೇಜುಗಳ 1,04,222 ವಿದ್ಯಾರ್ಥಿಗಳು ಈ ಮಹಾಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





