ಉತ್ತರ ಕನ್ನಡ: ಕರ್ನಾಟಕದ ರಾಜಕೀಯದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ದಿವಂಗತ ಡಿ. ದೇವರಾಜ ಅರಸು ಅವರ ಹಾದಿಯಲ್ಲಿ ದೃಢವಾಗಿ ಮುನ್ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ದೇವರಾಜ ಅರಸು ಅವರ ನಂತರ ಪೂರ್ಣಾವಧಿ ಆಡಳಿತ ಪೂರೈಸಿ, ಅರಸು ಅವರ ದಾಖಲೆಯನ್ನು ಸರಿಗಟ್ಟಿದ ಸಿದ್ದರಾಮಯ್ಯ ಅವರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಅರಸು ಅವರು ‘ಉಳುವವನೇ ಭೂಮಿಯ ಒಡೆಯ’ ಎಂಬ ಕಾನೂನಿನ ಮೂಲಕ ಶೋಷಿತ ವರ್ಗಗಳಿಗೆ ಆತ್ಮಗೌರವ ನೀಡಿದ್ದರು.
ಇಂದು ಸಿದ್ದರಾಮಯ್ಯನವರು ‘ಅನ್ನಭಾಗ್ಯ’ ಮತ್ತು ‘ಪಂಚ ಗ್ಯಾರಂಟಿ’ ಯೋಜನೆಗಳ ಮೂಲಕ ಅದೇ ಶೋಷಿತ ಮತ್ತು ಹಿಂದುಳಿದ ವರ್ಗಗಳ ಬದುಕಿಗೆ ಆರ್ಥಿಕ ಭದ್ರತೆ ನೀಡುತ್ತಿದ್ದಾರೆ. ಅರಸು ಅವರ ನಂತರ ಅಷ್ಟೇ ಬದ್ಧತೆಯಿಂದ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿರುವ ನಾಯಕ ಸಿದ್ದರಾಮಯ್ಯ” ಎಂದು ಬಣ್ಣಿಸಿದ್ದಾರೆ.
ದಾಖಲೆ ಮಟ್ಟದ ಆಯವ್ಯಯ ಮಂಡಿಸಿರುವ ಸಿದ್ದರಾಮಯ್ಯನವರಿಗೆ ರಾಜ್ಯದ ಆರ್ಥಿಕತೆಯ ಮೇಲೆ ಗಟ್ಟಿಯಾದ ಹಿಡಿತವಿದೆ. ಅಭಿವೃದ್ಧಿ ಮತ್ತು ಜನಕಲ್ಯಾಣ ಕಾರ್ಯಕ್ರಮಗಳ ನಡುವೆ ಸಮತೋಲನ ಸಾಧಿಸಿರುವುದು ಇಂದಿನ ಆಡಳಿತದ ಯಶಸ್ಸು. ಗೃಹಲಕ್ಷ್ಮಿ, ಗೃಹಜ್ಯೋತಿಯಂತಹ ಯೋಜನೆಗಳು ಕಲ್ಯಾಣ ರಾಜ್ಯದ ಪರಿಕಲ್ಪನೆಗೆ ಹೊಸ ಅರ್ಥ ನೀಡಿವೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಬಿಜೆಪಿಗೆ ಬಿಗ್ ಶಾಕ್; ವಿವೇಕ್ ಹೆಬ್ಬಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಯುವ ನಾಯಕ ರವಿ ಹಾವೇರಿ
ಅರಸು ಅವರ ಕಾಲದಲ್ಲಿ ಜನರಿಗಿದ್ದ ‘ನಮ್ಮ ಸರ್ಕಾರ’ ಎಂಬ ಅಚಲ ವಿಶ್ವಾಸ ಇಂದು ಸಿದ್ದರಾಮಯ್ಯನವರ ಆಡಳಿತದಲ್ಲೂ ಮರುಕಳಿಸಿರುವುದು ಹೆಮ್ಮೆಯ ವಿಷಯ” ಎಂದು ದೇಶಪಾಂಡೆ ಅವರು ಹೇಳಿದ್ದಾರೆ.
ಒಟ್ಟಾರೆಯಾಗಿ, ಸಾಮಾಜಿಕ ನ್ಯಾಯದ ಬುನಾದಿಯ ಮೇಲೆ ಸಮೃದ್ಧ ಕರ್ನಾಟಕವನ್ನು ಕಟ್ಟುತ್ತಿರುವ ಸಿದ್ದರಾಮಯ್ಯನವರ ಆಡಳಿತವು ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ ಎಂದು ದೇಶಪಾಂಡೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





