ಉತ್ತರ ಕನ್ನಡ: ಸಾರ್ವಜನಿಕರ ಅನುಕೂಲಕ್ಕಾಗಿ ಭಾರತೀಯ ಅಂಚೆ ಇಲಾಖೆಯು ತನ್ನ ಸೇವೆಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಇನ್ನು ಮುಂದೆ ಎಲ್ಲಾ ಇಲಾಖಾ ಅಂಚೆ ಕಚೇರಿಗಳಲ್ಲಿ ಕೆಲಸದ ಅವಧಿ ಮುಗಿಯುವ ಕೊನೆಯ 30 ನಿಮಿಷಗಳವರೆಗೂ ಅಂಚೆ ವಸ್ತುಗಳನ್ನು ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಾಮಾನ್ಯವಾಗಿ ಕಚೇರಿ ಸಮಯದ ಕೊನೆಯ ಕ್ಷಣದಲ್ಲಿ ಬರುವ ಗ್ರಾಹಕರಿಗೆ ಅಂಚೆ ಸೇವೆ ಪಡೆಯಲು ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಇಲಾಖೆಯು, ನಿಗದಿತ ಕಾರ್ಯಾವಧಿ ಮುಕ್ತಾಯಕ್ಕೆ ಮುಂಚಿತವಾಗಿ 30 ನಿಮಿಷಗಳವರೆಗೆ ಸ್ಪೀಡ್ ಪೋಸ್ಟ್,
ಪಾರ್ಸೆಲ್ ಹಾಗೂ ಅಂತರರಾಷ್ಟ್ರೀಯ ಸ್ಪೀಡ್ ಪೋಸ್ಟ್ ಮತ್ತು ಪಾರ್ಸೆಲ್ಗಳನ್ನು ಬುಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಿಂದ ಸಂಜೆಯ ವೇಳೆಗೆ ಕಚೇರಿಗೆ ಧಾವಿಸುವ ಗ್ರಾಹಕರು ಇನ್ನು ಮುಂದೆ ಸುಲಭವಾಗಿ ತಮ್ಮ ಪಾರ್ಸೆಲ್ಗಳನ್ನು ರವಾನಿಸಬಹುದಾಗಿದೆ.
ಕೇವಲ ಕಚೇರಿಗಳಿಗೆ ಭೇಟಿ ನೀಡುವುದು ಮಾತ್ರವಲ್ಲದೆ, ಮನೆಯಲ್ಲಿಯೇ ಕುಳಿತು ಅಂಚೆ ಸೇವೆ ಪಡೆಯಲು ಇಲಾಖೆಯು ‘ಗ್ರಾಹಕ ಸ್ವಯಂ ಸೇವಾ ಪೋರ್ಟಲ್’ ಅನ್ನು ಲಭ್ಯವಾಗಿಸಿದೆ. ಗ್ರಾಹಕರು ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಅಂಚೆ ವಸ್ತುಗಳ ಬುಕ್ಕಿಂಗ್, ಟ್ರ್ಯಾಕಿಂಗ್ ಹಾಗೂ ದೂರು ಸಲ್ಲಿಕೆಯಂತಹ ಕಾರ್ಯಗಳನ್ನು ಆನ್ಲೈನ್ನಲ್ಲೇ ಮಾಡಬಹುದಾಗಿದೆ.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ ಓಡಿಸಿದರೆ ಲೈಸೆನ್ಸ್ ರದ್ದು: ಜಿಲ್ಲಾಧಿಕಾರಿಗಳ ಖಡಕ್ ಸೂಚನೆ
ಅಂಚೆ ಸೇವೆಗಳನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ “Dak Seva App” ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಕೂಡ ಇಲಾಖೆ ಬಿಡುಗಡೆ ಮಾಡಿದೆ. ಈ ಆಪ್ ಮೂಲಕ ಗ್ರಾಹಕರು ತಮ್ಮ ಮೊಬೈಲ್ನಲ್ಲಿಯೇ ಬುಕ್ಕಿಂಗ್ ಮತ್ತು ಸೇವಾ ಮಾಹಿತಿಯನ್ನು ಪಡೆಯಬಹುದು.
ಈ ಆಪ್ ಡೌನ್ಲೋಡ್ ಮಾಡಲು ಅಗತ್ಯವಿರುವ ಕ್ಯೂಆರ್ ಕೋಡ್ ಅಂಚೆ ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಸಾರ್ವಜನಿಕರು ಈ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅಂಚೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ತಮ್ಮ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.





