ಉತ್ತರ ಕನ್ನಡ ಜಿಲ್ಲೆಯ ದುರ್ಗಮ ಮತ್ತು ಸಂಪರ್ಕ ರಹಿತ ಪ್ರದೇಶಗಳು, ಹಿಂದುಳಿದ ವರ್ಗದ ಜನಸಂಖ್ಯೆಯುಳ್ಳ ಹಳ್ಳಿಗಳು ಹಾಗೂ ಆರೋಗ್ಯ ಸೇವೆಗಳಿಂದ ವಂಚಿತರಾಗಿರುವ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ, ಅವರ ಮನೆ ಬಾಗಿಲಿಗೇ ತೆರಳಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡುವ ಸಂಚಾರಿ ಆರೋಗ್ಯ ಘಟಕಗಳ (Mobile Health Units) ಸೇವೆ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ.
ಪ್ರಸ್ತುತ ಜಿಲ್ಲೆಯ ಅಂಕೋಲಾ, ಹೊನ್ನಾವರ, ಶಿರಸಿ, ಯಲ್ಲಾಪುರ, ಜೋಯಿಡಾ ಮತ್ತು ಹಳಿಯಾಳ ತಾಲೂಕುಗಳ ವ್ಯಾಪ್ತಿಯ ದುರ್ಗಮ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಲು ಒಟ್ಟು ಆರು ಸಂಚಾರಿ ಆರೋಗ್ಯ ಘಟಕಗಳನ್ನು ಮಂಜೂರು ಮಾಡಲಾಗಿದೆ. ಈ ತಾಲೂಕುಗಳ ವ್ಯಾಪ್ತಿಯಲ್ಲಿನ ದುರ್ಗಮ ಹಾಗೂ ಸಂಪರ್ಕ ರಹಿತ ಪ್ರದೇಶಗಳು, ಹಿಂದುಳಿದ ವರ್ಗದ ಜನಸಂಖ್ಯೆಯುಳ್ಳ ಹಳ್ಳಿಗಳು ಮತ್ತು ಆರೋಗ್ಯ ಸೇವೆಗಳಿಂದ ವಂಚಿತರಾಗಿರುವ ಸ್ಥಳಗಳನ್ನು (ಸಮೀಪದ ಆರೋಗ್ಯ ಉಪಕೇಂದ್ರದಿಂದ ಐದು ಕಿಲೋ ಮೀಟರ್ ಅಥವಾ ಅದಕ್ಕಿಂತ ಹೆಚ್ಚು ದೂರವಿರುವ ಹಳ್ಳಿಗಳು) ಗುರುತಿಸಲಾಗಿದೆ.
ಈ ಪ್ರದೇಶಗಳಲ್ಲಿ 12 ವಿಸ್ತೃತ ಪ್ಯಾಕೇಜುಗಳಡಿ ಮೂಲಭೂತ ಆರೋಗ್ಯ ಸೇವೆಗಳು ಹಾಗೂ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗಳು ಈ ಸಂಚಾರಿ ಘಟಕಗಳ ಮೂಲಕ ನೀಡಲಾಗುತ್ತದೆ. ಪ್ರತಿ ಘಟಕದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಒಂದು ವಾಹನ, ಒಬ್ಬ ಎಂ.ಬಿ.ಬಿ.ಎಸ್ ವೈದ್ಯರು, ಶುಶ್ರೂಷಕ ಮತ್ತು ಪ್ರಯೋಗಶಾಲಾ ತಂತ್ರಜ್ಞರು ಇರಲಿದ್ದಾರೆ. ಅವರು ನಿಗದಿತ ರಸ್ತೆ ನಕ್ಷೆಯನ್ವಯ ಪ್ರತಿ ದಿನ ಸೋಮವಾರದಿಂದ ಶನಿವಾರದವರೆಗೆ, ಬೆಳಿಗ್ಗೆ ಒಂದು ಹಳ್ಳಿ ಮತ್ತು ಮಧ್ಯಾಹ್ನ ಮತ್ತೊಂದು ಹಳ್ಳಿಯನ್ನು ಭೇಟಿ ನೀಡಿ ಜನರಿಗೆ ಅಗತ್ಯವಿರುವ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲಿದ್ದಾರೆ. ಇದೇ ರೀತಿ, ಸಂಬಂಧಪಟ್ಟ ಸಮುದಾಯ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಪ್ರತಿ ವಾರ ನಿಗದಿತ ದಿನದಂದು ಈ ಹಳ್ಳಿಗಳಿಗೆ ಭೇಟಿ ನೀಡಿ ಆರೋಗ್ಯ ಸೇವೆಗಳನ್ನು ನೀಡಲು ಸೂಚಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಭಟ್ಕಳ | ಗೃಹೋಪಯೋಗಿ ವಸ್ತುಗಳನ್ನು ಕಡಿಮೆ ದರದಲ್ಲಿ ನೀಡುವುದಾಗಿ ಲಕ್ಷಾಂತರ ರೂ. ವಂಚನೆ ಮಾಡಿದ ಆರೋಪಿಗಳು ಪೊಲೀಸರ ವಶಕ್ಕೆ
ಸಂಚಾರಿ ಆರೋಗ್ಯ ಘಟಕಗಳು ನಿಗದಿತ ದಿನಗಳಲ್ಲಿ ಗೊತ್ತುಪಡಿಸಿದ ಹಳ್ಳಿಗಳಿಗೆ ತೆರಳಿ ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ಪತ್ತೆ, ಚಿಕಿತ್ಸೆ, ಪ್ರಸವ ಪೂರ್ವ ಮತ್ತು ನಂತರದ ಸೇವೆಗಳು, ಹಾಗೂ ಲಸಿಕೆ ಕಾರ್ಯಕ್ರಮಗಳ ಅನುಷ್ಠಾನ ಸೇರಿದಂತೆ ಹಲವು ಸೇವೆಗಳನ್ನು ನೀಡಲಿವೆ. ಇದರ ಜೊತೆಗೆ, ಈ ವಾಹನಗಳ ಮೂಲಕ ರಾಷ್ಟ್ರೀಯ ಮತ್ತು ರಾಜ್ಯದ ಆರೋಗ್ಯ ಯೋಜನೆಗಳ ಪ್ರಚಾರ, ಸಾರ್ವಜನಿಕರಿಗೆ ಐಇಸಿ ಸಾಮಾಗ್ರಿಗಳ ವಿತರಣೆ, ಆರೋಗ್ಯದ ಕುರಿತು ಸಮಾಲೋಚನೆಗಳು, ಪೋಸ್ಟರ್ಗಳು, ಬ್ಯಾನರ್ಗಳು, ಕರ ಪತ್ರಗಳು ಹಾಗೂ ಮೈಕಿಂಗ್ ವ್ಯವಸ್ಥೆಯ ಮೂಲಕ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು.
ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಹಾಗೂ ಪ್ರತಿಯೊಬ್ಬ ನಾಗರಿಕನಿಗೂ ಪ್ರಾಥಮಿಕ ಆರೋಗ್ಯ ಸೇವೆ ಖಚಿತಪಡಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಈ ಯೋಜನೆ ರೂಪುಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ದುರ್ಗಮ ಪ್ರದೇಶಗಳ ಜನತೆಗೆ ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆ ಮತ್ತು ಇತರೆ ಆರೋಗ್ಯ ಸೌಲಭ್ಯಗಳನ್ನು ಈ ಘಟಕಗಳ ಮೂಲಕ ನೀಡಲಾಗುತ್ತದೆ ಎಂದು ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ನಟರಾಜ್ ತಿಳಿಸಿದ್ದಾರೆ.





