ಉತ್ತರ ಕನ್ನಡ: ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ 2020-21 ರಿಂದ 2025-26 ನೇ ಸಾಲಿನವರೆಗೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ (SSP) ಮೂಲಕ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ತಮ್ಮ ಮಾಹಿತಿಯನ್ನು ಸರಿಪಡಿಸಿಕೊಳ್ಳಲು ಕಡೆಯ ಅವಕಾಶ ನೀಡಲಾಗಿದೆ.
ತಾಂತ್ರಿಕ ಕಾರಣಗಳಿಂದಾಗಿ ಬಾಕಿ ಉಳಿದಿರುವ ವಿದ್ಯಾರ್ಥಿ ವೇತನವನ್ನು ವಿತರಿಸಲು ಅನುಕೂಲವಾಗುವಂತೆ ಜನವರಿ 30ರ ಒಳಗಾಗಿ ಅಗತ್ಯ ಅಪ್ಡೇಟ್ ಮಾಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿದ ಅನೇಕ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಸೀಡ್ ಆಗದಿರುವುದು ಪ್ರಮುಖ ಅಡಚಣೆಯಾಗಿದೆ. ಇದರೊಂದಿಗೆ, ವಿದ್ಯಾರ್ಥಿಗಳ ಶೈಕ್ಷಣಿಕ ದತ್ತಾಂಶ ಹಾಗೂ ಎಸ್ಎಸ್ಪಿ ತಂತ್ರಾಂಶದಲ್ಲಿರುವ ಹೆಸರಿನಲ್ಲಿ ವ್ಯತ್ಯಾಸಗಳಿರುವುದು ಕಂಡುಬಂದಿದೆ.
ಕೌನ್ಸೆಲಿಂಗ್ ಕೋರ್ಸ್ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಕೌನ್ಸೆಲಿಂಗ್ ದತ್ತಾಂಶವನ್ನು ನಮೂದಿಸದಿರುವುದು ಮತ್ತು ವಿವಿಧ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಹಿಂದಿನ ವರ್ಷದ ಶೈಕ್ಷಣಿಕ ಮಾಹಿತಿಯನ್ನು ತಂತ್ರಾಂಶದೊಂದಿಗೆ ಹಂಚಿಕೊಳ್ಳದಿರುವುದು ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಪಾವತಿ ಪ್ರಕ್ರಿಯೆಗೆ ಹಿನ್ನಡೆಯನ್ನುಂಟು ಮಾಡಿದೆ.
ಈ ಸುದ್ದಿ ಓದಿದ್ದೀರಾ ? ಹೊನ್ನಾವರ | ಇಡಗುಂಜಿ ಮಹಾಗಣಪತಿ ಸನ್ನಿಧಿಯಲ್ಲಿ ಅರ್ಚಕರ ಕಾಳಗ: ದಕ್ಷಿಣೆ ಹಣಕ್ಕಾಗಿ ಭಕ್ತರ ಮುಂದೆಯೇ ತಳ್ಳಾಟ!
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ವಿದ್ಯಾರ್ಥಿ ಲಾಗಿನ್ನಲ್ಲಿ ಹಾಗೂ ಆಯಾ ತಾಲೂಕು ಅಥವಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಲಾಗಿನ್ನಲ್ಲಿ ಮಾಹಿತಿ ಅಪ್ಡೇಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ತಕ್ಷಣವೇ ಲಾಗಿನ್ ಆಗಿ ತಮ್ಮ ದತ್ತಾಂಶಗಳನ್ನು ಸರಿಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ನಿಗದಿತ ದಿನಾಂಕವಾದ ಜನವರಿ 30ರ ಒಳಗಾಗಿ ಮಾಹಿತಿಯನ್ನು ಅಪ್ಡೇಟ್ ಮಾಡದಿದ್ದಲ್ಲಿ, ಅಂತಹ ವಿದ್ಯಾರ್ಥಿಗಳ ಅರ್ಜಿಗಳನ್ನು ಅನಿವಾರ್ಯವಾಗಿ ತಿರಸ್ಕರಿಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಆದ್ದರಿಂದ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಥವಾ ಗೊಂದಲಗಳ ನಿವಾರಣೆಗಾಗಿ ಕಚೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ 08382-226589 ಅನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.





