ಉತ್ತರ ಕನ್ನಡ ಜಿಲ್ಲೆಯ ಜೀವನಾಡಿ ಅಘನಾಶಿನಿ ನದಿಯ ನೀರನ್ನು ತಿರುಗಿಸುವ ಕೇಂದ್ರ ಸರ್ಕಾರದ ಯೋಜನೆಯ ವಿರುದ್ಧ ಸಿದ್ದಾಪುರದಲ್ಲಿ ಆಕ್ರೋಶದ ಅಲೆ ಎದ್ದಿದೆ. ಅರಣ್ಯ ನಾಶ ಮತ್ತು ಪರಿಸರ ಹಾನಿಯನ್ನು ಖಂಡಿಸಿ ಕೇವಲ ಒಂದೇ ದಿನದಲ್ಲಿ 25 ಸಾವಿರಕ್ಕೂ ಅಧಿಕ ಆಕ್ಷೇಪಣಾ ಪತ್ರಗಳನ್ನು ಸಲ್ಲಿಕೆ ಮಾಡುವ ಮೂಲಕ ಹೋರಾಟಗಾರರು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಜಿಲ್ಲೆಯ ವಿವಿಧ ಹಳ್ಳಿಗಳಿಂದ ಅತ್ಯಂತ ಶಿಸ್ತುಬದ್ಧವಾಗಿ ಆಗಮಿಸಿದ ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳು, ಅಘನಾಶಿನಿ ನದಿ ಜೋಡಣೆ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರಿಗೆ ಬರೆದ ಈ ಆಕ್ಷೇಪಣಾ ಪತ್ರಗಳನ್ನು ತಾಲೂಕಾ ದಂಡಾಧಿಕಾರಿ ಎಮ್.ಆರ್. ಕುಲಕರ್ಣಿ ಅವರ ಮೂಲಕ ಸಲ್ಲಿಸಲಾಯಿತು.
ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯು, ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ತೀವ್ರ ಸ್ವರೂಪದ ಕಾನೂನು ಹೋರಾಟದ ಮುನ್ಸೂಚನೆ ಎಂದು ಸಂಘಟಕರು ಎಚ್ಚರಿಸಿದ್ದಾರೆ.

ಪಶ್ಚಿಮ ಘಟ್ಟಗಳು ಕೇವಲ ಒಂದು ಪ್ರದೇಶದ ಆಸ್ತಿಯಲ್ಲ, ಅವು ಜಾಗತಿಕ ಹವಮಾನ ಭದ್ರತೆಯ ಅವಿಭಾಜ್ಯ ಅಂಗ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಮತ್ತು ವಿಶ್ವದ 8 ಪ್ರಮುಖ ಜೈವಿಕ ವೈವಿಧ್ಯತೆಯ ಹಾಟ್ಸ್ಪಾಟ್ಗಳಲ್ಲಿ ಒಂದಾಗಿರುವ ಈ ಸೂಕ್ಷ್ಮ ಪ್ರದೇಶದಲ್ಲಿ ಸುರಂಗ ನಿರ್ಮಾಣ, ಆಣೆಕಟ್ಟು ಮತ್ತು ನದಿ ತಿರುವು ಕಾಮಗಾರಿಗಳನ್ನು ನಡೆಸುವುದು ಅತ್ಯಂತ ಅಪಾಯಕಾರಿ ಎಂದು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯಿಂದ ಅರಣ್ಯ ನಾಶ, ಭೂಕುಸಿತ, ಜೀವ ವೈವಿಧ್ಯದ ಹಾನಿ ಮತ್ತು ಹವಮಾನ ಬದಲಾವಣೆಯಂತಹ ಗಂಭೀರ ಪರಿಣಾಮಗಳು ಉಂಟಾಗಲಿವೆ ಎಂಬುದು ವೈಜ್ಞಾನಿಕ ಅಧ್ಯಯನಗಳಿಂದ ಸಾಬೀತಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಆರ್ಥಿಕ ಸಬಲೀಕರಣದ ಸೂಚಕ: ಸಚಿವ ಮಂಕಾಳ ವೈದ್ಯ
ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ ಸಿದ್ಧಪಡಿಸಿರುವ ಪೂರ್ವಭಾವಿ ಯೋಜನಾ ವರದಿಯು (PFR) ಸಂಪೂರ್ಣ ಅವೈಜ್ಞಾನಿಕ ಮತ್ತು ಪರಿಸರ ವಿರೋಧಿಯಾಗಿದೆ ಎಂದು ಸಭೆಯಲ್ಲಿ ಖಂಡಿಸಲಾಯಿತು. ಉತ್ತರ ಕನ್ನಡದ ಆರ್ಥಿಕತೆ ಮತ್ತು ಅಸ್ಮಿತೆಯಾಗಿರುವ ದಟ್ಟ ಕಾಡುಗಳು ಹಾಗೂ ಜಲಪಾತಗಳನ್ನು ಉಳಿಸಿಕೊಳ್ಳಲು ಈ ವರದಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ನಾಗಪತಿ ಗೌಡ ಹುಕ್ಕಳ್ಳಿ, ಜಿ.ಎನ್. ಹೆಗಡೆ ಸೇರಿದಂತೆ ಅನೇಕ ಮುಖಂಡರು ಮಾತನಾಡಿದರು. ಸಭೆಯಲ್ಲಿ ಇಬ್ರಾಹೀಂ ಗೌಡಳ್ಳಿ, ಮಹೇಶ್ ನಾಯ್ಕ, ಹರಿಹರ್ ನಾಯ್ಕ, ರಾಜೇಶ್ ವಿ. ಭಟ್ ಹಾಗೂ ಸಾವಿರಾರು ಗ್ರಾಮಸ್ಥರು ಉಪಸ್ಥಿತರಿದ್ದು, ಯೋಜನೆಯ ವಿರುದ್ಧ ಒಕ್ಕೊರಲಿನ ಧ್ವನಿ ಎತ್ತಿದರು.





