ಉತ್ತರ ಕನ್ನಡ: ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣ ಹಾಗೂ ಸ್ವಪಕ್ಷದ ಶಾಸಕರ ಇತ್ತೀಚಿನ ಬಹಿರಂಗ ಹೇಳಿಕೆಗಳ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಲ್ಲಿ ಕಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಯವರೇ ಉತ್ತರಿಸಲಿ:ಲೋಕಾಯುಕ್ತ ದಾಳಿಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಲೋಕಾಯುಕ್ತವು ಒಂದು ಸ್ವತಂತ್ರ ಸಾಂವಿಧಾನಿಕ ಸಂಸ್ಥೆ. ಅದರ ತನಿಖಾ ಪ್ರಕ್ರಿಯೆಗಳಲ್ಲಿ ಸರ್ಕಾರವಾಗಲಿ ಅಥವಾ ನಾವಾಗಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ.
ಈ ಪ್ರಕರಣದ ಬಗ್ಗೆ ಬಿಜೆಪಿಯವರೇ ಉತ್ತರಿಸಬೇಕು ಮತ್ತು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ” ಎಂದು ಮಾರ್ಮಿಕವಾಗಿ ನುಡಿದರು.
ಬಾಯಿ ಮುಚ್ಚಿಕೊಂಡಿದ್ದರೆ ಪಕ್ಷಕ್ಕೆ ಕ್ಷೇಮ: ಇದೇ ಸಂದರ್ಭದಲ್ಲಿ ಪಕ್ಷದ ಆಂತರಿಕ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುತ್ತಿರುವ ಶಾಸಕರಾದ ಇಕ್ಬಾಲ್ ಹುಸೇನ್, ರವಿ ಮತ್ತು ಶಿವಗಂಗಾ ಅವರ ನಡೆಗೆ ಡಿಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರೆಲ್ಲರೂ ಅನಗತ್ಯವಾಗಿ ಬಹಿರಂಗ ಹೇಳಿಕೆ ನೀಡುವುದನ್ನು ನಿಲ್ಲಿಸಿ, ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರೆ ನನಗೆ ಮತ್ತು ಪಕ್ಷಕ್ಕೆ ಒಳ್ಳೆಯದು ಎಂದು ಎಚ್ಚರಿಕೆಯ ಧಾಟಿಯಲ್ಲಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ ? ದಾಂಡೇಲಿ | ಆರ್.ವಿ. ದೇಶಪಾಂಡೆ ವಿರುದ್ಧದ ಟೀಕೆ ‘ಬಾಲಿಶತನದ ಪರಮಾವಧಿ’: ಸುನೀಲ ಹೆಗಡೆಗೆ ಮೋಹನ ಹಲವಾಯಿ ತಿರುಗೇಟು
ಇನ್ನು ಕೆಲವು ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಪ್ರವಾಸಕ್ಕೆ ಹೋದವರೆಲ್ಲರೂ ನಮ್ಮ ಪಕ್ಷದವರೇ. ಅವರು ಮರಳಿ ಬಂದ ನಂತರ ಆ ಪ್ರವಾಸದ ಉದ್ದೇಶ ಮತ್ತು ಅಗತ್ಯದ ಬಗ್ಗೆ ಮಾಹಿತಿ ಪಡೆಯಲಾಗುವುದು” ಎಂದು ಸ್ಪಷ್ಟಪಡಿಸಿದರು.





