ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಉತ್ತರ ಕನ್ನಡ ಜಿಲ್ಲೆಯ ರಸ್ತೆಗಳು ಇಂದು ರಕ್ತಸಿಕ್ತವಾಗುತ್ತಿವೆ. ಜಿಲ್ಲೆಯಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಭೀಕರ ಅಪಘಾತಗಳು ನೂರಾರು ಕುಟುಂಬಗಳ ಆಧಾರಸ್ತಂಭಗಳನ್ನೇ ಉರುಳಿಸಿವೆ. ರಸ್ತೆಗಳಲ್ಲಿ ಹರಿಯುತ್ತಿರುವ ರಕ್ತದ ಕಲೆಗಳು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಂತಿವೆ.
ಜಿಲ್ಲೆಯ ಭೌಗೋಳಿಕ ಸ್ಥಿತಿಗತಿಯನ್ನು ಗಮನಿಸಿದರೆ, ಇಲ್ಲಿನ ಅಪಘಾತಗಳಿಗೆ ಕೇವಲ ಚಾಲಕರ ಅತಿವೇಗ ಅಥವಾ ಮದ್ಯಪಾನವಷ್ಟೇ ಕಾರಣವಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಲಾದ ಸೇತುವೆಗಳು, ಅಪಾಯಕಾರಿ ತಿರುವುಗಳಲ್ಲಿ ದೃಷ್ಟಿ ಮರೆಮಾಚುವ ಗಿಡಗಂಟಿಗಳು ಮತ್ತು ಕಿರಿದಾದ ಗ್ರಾಮೀಣ ರಸ್ತೆಗಳು ಮೃತ್ಯುವಿಗೆ ನೇರ ಆಹ್ವಾನ ನೀಡುತ್ತಿವೆ. ಅದರಲ್ಲೂ ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳು ಹಠಾತ್ತನೆ ಅಡ್ಡ ಬರುವ ಜಾಗಗಳಲ್ಲಿ ಎಚ್ಚರಿಕೆ ಫಲಕಗಳಿಲ್ಲದಿರುವುದು ವ್ಯವಸ್ಥೆಯ ಉದಾಸೀನತೆಯನ್ನು ಎತ್ತಿ ತೋರಿಸುತ್ತಿದೆ.
ಸಾರಿಗೆ ಸಂಸ್ಥೆಯ ಬಸ್ಗಳು, ಸಂಚರಿಸುವ ಮೃತ್ಯುಕೂಪಗಳು?: ‘ಶಕ್ತಿ’ ಯೋಜನೆಯಡಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದರೂ, ಕೆಎಸ್ಆರ್ಟಿಸಿ ಬಸ್ಗಳ ತಾಂತ್ರಿಕ ನಿರ್ವಹಣೆ (Maintenance) ಸಂಪೂರ್ಣ ಕುಸಿದಂತಿದೆ. ಸಂಚಾರಕ್ಕೆ ಯೋಗ್ಯವಲ್ಲದ ಹಳೆಯ ಬಸ್ಗಳನ್ನು ಗ್ರಾಮೀಣ ಮಾರ್ಗಗಳಲ್ಲಿ ಓಡಿಸಿ ಜನರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಬಸ್ಗಳು ನಿಯಂತ್ರಣ ತಪ್ಪಿ ಚರಂಡಿಗೆ ಉರುಳುವ ಘಟನೆಗಳು ಮರುಕಳಿಸುತ್ತಿದ್ದರೂ ಸಾರಿಗೆ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿದೆ.

ದಂಡ ವಸೂಲಿಗಷ್ಟೇ ಸೀಮಿತವೇ ಪೊಲೀಸ್ ಇಲಾಖೆ?: ಸಂಚಾರಿ ಪೊಲೀಸರ ದಂಡ ಪ್ರಯೋಗ ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾದಂತಿದೆ. ಹೆದ್ದಾರಿಗಳಲ್ಲಿ ಹೆಲ್ಮೆಟ್ ರಹಿತ ಚಾಲನೆ ಮತ್ತು ಅಪ್ರಾಪ್ತರ ವಾಹನ ಚಾಲನೆ ರಾಜಾರೋಷವಾಗಿ ನಡೆಯುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 1.41 ಲಕ್ಷ ಪ್ರಕರಣಗಳನ್ನು ದಾಖಲಿಸಿ 6.93 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆಯೇ ಹೊರತು, ತಳಮಟ್ಟದಲ್ಲಿ ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸುವಲ್ಲಿ ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಅಂಕಿ-ಅಂಶ (ಕಳೆದ 3 ವರ್ಷ)
ಅಪಘಾತಗಳ ತೀವ್ರತೆಯನ್ನು ಈ ಕೆಳಗಿನ ಕೋಷ್ಟಕವು ಸ್ಪಷ್ಟಪಡಿಸುತ್ತದೆ:
| ವರ್ಷ | ಒಟ್ಟು ಅಪಘಾತಗಳು | ಗಾಯಗೊಂಡವರು | ಮೃತಪಟ್ಟವರು |
|---|
| 2023 | 1,029 | 1,739 | 248 |
| 2024 | 974 | 1,622 | 264 |
| 2025 | 809 | 1,763 | 214 |
| ಒಟ್ಟು | 2,812 | 5,124 | 726 |
ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು 2,812 ಅಪಘಾತಗಳು ಸಂಭವಿಸಿದ್ದು, ಭೀಕರವಾಗಿ ಗಾಯಗೊಂಡವರ ಸಂಖ್ಯೆ 5,124 ತಲುಪಿದೆ. ಇವೆಲ್ಲಕ್ಕಿಂತ ಮಿಗಿಲಾಗಿ, ಒಟ್ಟು 726 ಅಮಾಯಕ ಜೀವಗಳು ರಸ್ತೆ ಬಲಿಯಾಗಿವೆ ಎಂಬುದು ಅತ್ಯಂತ ಆತಂಕಕಾರಿ ಸಂಗತಿ.
2025ರಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಸ್ವಲ್ಪ ಇಳಿಕೆಯಾಗಿದ್ದರೂ, ಗಾಯಗೊಂಡವರ ಸಂಖ್ಯೆ ಏರಿಕೆಯಾಗಿರುವುದು ಅಪಾಯದ ಮುನ್ಸೂಚನೆಯಾಗಿದೆ. ಹೆದ್ದಾರಿಗಳಲ್ಲಿ ‘ಬ್ಲ್ಯಾಕ್ ಸ್ಪಾಟ್’ಗಳನ್ನು ಗುರುತಿಸಲಾಗಿದೆ ಎಂದು ಇಲಾಖೆ ಹೇಳುತ್ತದೆ. ಆದರೆ ವಾಸ್ತವದಲ್ಲಿ ಅಪಾಯಕಾರಿ ತಿರುವುಗಳ ವಿಸ್ತರಣೆ ಆಗುತ್ತಿಲ್ಲ. ನಗರದ ಬಿಗಿ ತಪಾಸಣೆ ಹೆದ್ದಾರಿಗಳಲ್ಲಿ ಕಾಣುತ್ತಿಲ್ಲ ಎನ್ನುತ್ತಾರೆ ಸಿದ್ದಾಪುರ ನಿವಾಸಿ ರಾಘವೇಂದ್ರ ಭಟ್.
ಅಂಕೋಲಾ ನಿವಾಸಿ ಮಹಾಬಲೇಶ್ವರ ದೇಸಾಯಿ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರು ವಾಹನ ಚಲಾಯಿಸುವುದು ಫ್ಯಾಶನ್ ಆಗಿದೆ. ಪೋಷಕರು ಮತ್ತು ಪೊಲೀಸರು ಇವರ ಮೇಲೆ ನಿಗಾ ಇಡದಿದ್ದರೆ ಇಂತಹ ದುರ್ಮರಣಗಳು ತಪ್ಪಿದ್ದಲ್ಲ,” ಎಂದು ಎಚ್ಚರಿಸಿದ್ದಾರೆ.

ಜಿಲ್ಲೆಯಾದ್ಯಂತ ಆಗಬೇಕಿರುವ ತುರ್ತು ಕ್ರಮಗಳು
ಬ್ಲ್ಯಾಕ್ ಸ್ಪಾಟ್ಗಳ ಸುಧಾರಣೆ
ಅಪಘಾತಗಳು ಮರುಮರು ಸಂಭವಿಸುವ ಸ್ಥಳಗಳನ್ನು ಗುರುತಿಸಿ, ಅಲ್ಲಿ ವೈಜ್ಞಾನಿಕ ರೀತಿಯಲ್ಲಿ ಬದಲಾವಣೆ ಮಾಡುವುದು ಅತ್ಯಗತ್ಯ. ತಿರುವುಗಳ ವಿಸ್ತರಣೆ, ಸ್ಪೀಡ್ ಬ್ರೇಕರ್ಗಳ ಸರಿಯಾದ ಅಳವಡಿಕೆ, ಸೂಚನಾ ಫಲಕಗಳು, ಬೆಳಕಿನ ವ್ಯವಸ್ಥೆ ಮತ್ತು ರಸ್ತೆ ಅಗಲದ ತಿದ್ದುಪಡಿ.. ಇವೆಲ್ಲವೂ ಜೀವ ಉಳಿಸುವ ಕ್ರಮಗಳಾಗಿವೆ. ʼಇಲ್ಲಿ ಅಪಘಾತವಾಗುತ್ತಲೇ ಇದೆʼ ಎಂದು ಹೇಳಿಕೊಂಡು ಸುಮ್ಮನಿರುವುದಲ್ಲ, ಏಕೆ ಆಗುತ್ತಿದೆ ಎಂಬುದಕ್ಕೆ ತಾಂತ್ರಿಕ ಉತ್ತರ ಹುಡುಕಬೇಕಿದೆ.
ಬಸ್ಗಳ ನವೀಕರಣ ಮತ್ತು ತಾಂತ್ರಿಕ ಗುಣಮಟ್ಟ
ಹಳೆಯ, ದುರಸ್ತಿ ಸ್ಥಿತಿಯಲ್ಲಿರುವ ಬಸ್ಗಳನ್ನು ರಸ್ತೆಗಿಳಿಸುವುದು ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ಒಡ್ಡುವಂತದ್ದು. ಬ್ರೇಕ್, ಟೈರ್, ಲೈಟು, ಸ್ಟೀರಿಂಗ್ ವ್ಯವಸ್ಥೆ ಸೇರಿದಂತೆ ಪ್ರತಿ ಬಸ್ನ ತಾಂತ್ರಿಕ ಸ್ಥಿತಿ ನಿಯಮಿತವಾಗಿ ಪರಿಶೀಲನೆಯಾಗುತ್ತಿರಬೇಕು. ಸಾರ್ವಜನಿಕ ಸಾರಿಗೆ ಅಗ್ಗವಾಗಿರುವುದು ಮಾತ್ರವಲ್ಲ, ಸುರಕ್ಷಿತವಾಗಿರಬೇಕು.

ಹೆದ್ದಾರಿ ಗಸ್ತು ಬಲಪಡಿಕೆ
ಹೆದ್ದಾರಿಗಳಲ್ಲಿ ಅತಿವೇಗ, ಮದ್ಯಪಾನ ಮಾಡಿ ವಾಹನ ಚಾಲನೆ, ಓವರ್ ಲೋಡಿಂಗ್, ಹೆಲ್ಮೆಟ್-ಸೀಟ್ ಬೆಲ್ಟ್ ನಿರ್ಲಕ್ಷ್ಯ ಇವು ಸಾಮಾನ್ಯವಾಗಿವೆ. ಇದನ್ನು ತಡೆಯಲು ನಿರಂತರ ಪೊಲೀಸ್ ಗಸ್ತು, ತಕ್ಷಣದ ತಪಾಸಣೆ ಮತ್ತು ನಿಯಮ ಉಲ್ಲಂಘನೆಗೆ ಕಟ್ಟುನಿಟ್ಟಾದ ಕ್ರಮಗಳು ಅಗತ್ಯ.
ಸಾರ್ವಜನಿಕ ಜಾಗೃತಿ
ಅಪಘಾತಗಳನ್ನು ತಡೆಯಲು ದಂಡ ವಿಧಿಸುವುದಷ್ಟೇ ಪರಿಹಾರವಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಕಡಿಮೆ ಇದೆ. ಶಾಲೆ-ಕಾಲೇಜುಗಳು, ಗ್ರಾಮ ಸಭೆಗಳು, ಚಾಲಕರ ತರಬೇತಿ ಶಿಬಿರಗಳ ಮೂಲಕ ಸುರಕ್ಷತೆಯ ಅರಿವು ಮೂಡಿಸಬೇಕು. ನಿಯಮ ಉಲ್ಲಂಘನೆ ಮಾಡಿದರೆ ದಂಡ ಎನ್ನುವುದಕ್ಕಿಂತ, ನಿಯಮ ಪಾಲಿಸಿದರೆ ಜೀವ ಉಳಿಯುತ್ತದೆ ಎಂಬ ಸಂದೇಶ ಸಾರ್ವಜನಿಕರಿಗೆ ತಲುಪಬೇಕು.
ಇದನ್ನೂ ಓದಿ: ದಾಂಡೇಲಿಯಲ್ಲಿ ಕರಗುತ್ತಿರುವ ಕಲರವ; ಪ್ರವಾಸಿಗರ ಅಬ್ಬರಕ್ಕೆ ಬೆದರಿದ ʼಹಾರ್ನ್ಬಿಲ್ʼ ಪಕ್ಷಿ ಪ್ರಭೇದ!
ರಸ್ತೆಗಳು ಸಂಚಾರಕ್ಕೆ ಸುಗಮವಾಗಿರಬೇಕೇ ಹೊರತು, ಸ್ಮಶಾನಕ್ಕೆ ದಾರಿಯಾಗಬಾರದು. ಪ್ರತಿಯೊಂದು ಅಪಘಾತದ ಹಿಂದೆ ಒಂದು ಕುಟುಂಬದ ಭವಿಷ್ಯ ನಲುಗುತ್ತದೆ ಎಂಬ ಸತ್ಯವನ್ನು ಆಡಳಿತ ಮರೆತರೆ ಸಹಿಸಲಾಗದು. ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ಈಗಲಾದರೂ ಎಚ್ಚೆತ್ತುಕೊಂಡು ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.




