ಕಳೆದ ಮೂರು ವರ್ಷಗಳಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ 45 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 33 ಪ್ರಕರಣಗಳು ಉತ್ತರ ಕನ್ನಡದಲ್ಲೇ ಸಂಭವಿಸಿವೆ. ಒಂದು ಕಾಲದಲ್ಲಿ ಅನ್ನ ಕೊಟ್ಟ ಹೊಲಗಳು ಇಂದು ರೈತರ ಪ್ರಾಣ ತೆಗೆದುಕೊಳ್ಳುತ್ತಿರುವ ಭಯಾನಕ ಸ್ಥಿತಿಗೆ ತಲುಪಿವೆ. ಇದಕ್ಕೆ ಹೊಣೆ ಯಾರು?
ಕರಾವಳಿಯ ಸೊಬಗು, ಮಲೆನಾಡಿನ ಹಸಿರು ಹಾಗೂ ಅರೆಬಯಲು ಸೀಮೆಯ ವೈವಿಧ್ಯತೆಯನ್ನೇ ಹಾಸಿ ಹೊದ್ದು ಮಲಗಿರುವ ಜಿಲ್ಲೆ ಉತ್ತರ ಕನ್ನಡ. ಜೀವ ವೈವಿಧ್ಯತೆಗೂ ಜಿಲ್ಲೆ ಹೆಸರುವಾಸಿ. ಈ ಜಿಲ್ಲೆಯ ಕೃಷಿಕರ ಬದುಕು ಮಾತ್ರ ಇಂದು ಅತಂತ್ರ ಸ್ಥಿತಿಗೆ ತಲುಪಿದೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ.
ಪ್ರಕೃತಿ ವಿಕೋಪ, ಬೆಳೆ ರೋಗ ಮತ್ತು ಸಾಲದ ಸುಳಿಗೆ ಸಿಲುಕಿದ ರೈತರು ಸಾವಿನ ಹಾದಿ ಹಿಡಿಯುತ್ತಿರುವುದು ಈ ಭಾಗದ ಕೃಷಿ ಕ್ಷೇತ್ರ ಎದುರಿಸುತ್ತಿರುವ ಗಂಭೀರ ಬಿಕ್ಕಟ್ಟಿಗೆ ಸಾಕ್ಷಿಯಾಗಿದೆ.
ಅಂಕಿ-ಅಂಶ ನೀಡುತ್ತಿರುವ ಎಚ್ಚರಿಕೆ ಗಂಟೆ:
ಕಳೆದ ಮೂರು ವರ್ಷಗಳ ಸರ್ಕಾರಿ ಅಂಕಿ-ಅಂಶಗಳನ್ನು ಗಮನಿಸಿದರೆ ಕರಾವಳಿ ಭಾಗದಲ್ಲಿ ರೈತರ ಸ್ಥಿತಿ ಎಷ್ಟು ದಯನೀಯವಾಗಿದೆ ಎಂಬುದು ತಿಳಿಯುತ್ತದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಒಟ್ಟು 45 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಈ ಪೈಕಿ ಸಿಂಹಪಾಲು ಉತ್ತರ ಕನ್ನಡ ಜಿಲ್ಲೆಯದ್ದೇ ಆಗಿದೆ. ಜಿಲ್ಲೆಯಲ್ಲಿ ಸಂಭವಿಸಿದ 33 ಪ್ರಕರಣಗಳು ಕೃಷಿ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ.
ದಕ್ಷಿಣ ಕನ್ನಡ (11) ಮತ್ತು ಉಡುಪಿಗೆ (1) ಹೋಲಿಸಿದರೆ ಉತ್ತರ ಕನ್ನಡದಲ್ಲಿ ಸಾವಿನ ಸರಣಿ ಹೆಚ್ಚಿರುವುದು ಆತಂಕಕಾರಿ ಸಂಗತಿ. ಅತಿಯಾದ ಮಳೆ ಮತ್ತು ಅಕಾಲಿಕ ಹವಾಮಾನ ವೈಪರೀತ್ಯದಿಂದಾಗಿ ಭತ್ತ, ಅಡಿಕೆ, ಮೆಣಸು, ಬಾಳೆ ಹಾಗೂ ತೆಂಗಿನ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ.
ಅಡಿಕೆಗೆ ಬಾಧಿಸಿರುವ ಭೀಕರ ‘ಕೊಳೆ ರೋಗ’ ಬೆಳೆಗಾರರ ಬೆನ್ನೆಲುಬು ಮುರಿದಿದೆ. ಇದರ ಜೊತೆಗೆ ಕಾಡುಪ್ರಾಣಿಗಳ ಹಾವಳಿ, ಅದರಲ್ಲೂ ಕಾಡುಹಂದಿ ಮತ್ತು ಆನೆಗಳ ದಾಳಿಯಿಂದಾಗಿ ರೈತರು ಹೈರಾಣಾಗಿದ್ದಾರೆ. ಹೂಡಿದ ಬಂಡವಾಳವೂ ಕೈಗೆ ಸಿಗದೆ, ಬ್ಯಾಂಕ್ ಹಾಗೂ ಖಾಸಗಿ ಸಾಲಗಾರರ ಒತ್ತಡಕ್ಕೆ ಹೈರಾಣಾಗಿ ರೈತರು ಮಾನಸಿಕ ಖಿನ್ನತೆಗೆ ಒಳಗಾಗಿ ಅಂತಿಮವಾಗಿ ಸಾವಿನ ದಾರಿ ಹಿಡಿಯುತ್ತಿದ್ದಾರೆ.
ಕಂದಾಯ ಇಲಾಖೆಯ ಮಾಹಿತಿಯಂತೆ, ಅರ್ಹ ಕುಟುಂಬಗಳಿಗೆ 5 ಲಕ್ಷ ರೂ.ಗಳ ಪರಿಹಾರ ಧನ ವಿತರಿಸಲಾಗುತ್ತಿದೆ. ಆದರೆ, ಕೇವಲ ಹಣ ನೀಡುವುದರಿಂದ ಅಥವಾ ಸಾವಿನ ನಂತರ ಸಾಂತ್ವನ ಹೇಳುವುದರಿಂದ ಈ ಬಿಕ್ಕಟ್ಟು ಬಗೆಹರಿಯುವುದಿಲ್ಲ. ಮುಂಡಗೋಡ ಮತ್ತು ಶಿರಸಿ ಭಾಗಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಯಲು ಸರ್ಕಾರ ಕೃಷಿ ಸಾಲ ಮನ್ನಾ, ವೈಜ್ಞಾನಿಕ ಬೆಳೆ ವಿಮೆ ಮತ್ತು ಪ್ರಾಣಿಗಳ ಹಾವಳಿ ತಡೆಯಲು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಉತ್ತರ ಕನ್ನಡ ಜಿಲ್ಲೆಯ ರೈತರ ಈ ಗಂಭೀರ ಸ್ಥಿತಿಯ ಕುರಿತು ರಾಜ್ಯ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ಅವರು ಈ ದಿನ ಮಾಧ್ಯಮದೊಂದಿಗೆ ಮಾತನಾಡಿ, “ಸರ್ಕಾರ ಈ ಸಲ ಬಜೆಟ್ ನಲ್ಲಿ ಜಿಲ್ಲೆಯ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇಲ್ಲದಿದ್ದರೆ ರೈತರ ಆತ್ಮಹತ್ಯೆ ಪ್ರಕರಣಗಳು ಖಂಡಿತ ಕಡಿಮೆಯಾಗುವುದಿಲ್ಲ. ಈ ಅಕಾಲಿಕ ಹವಾಮಾನದಿಂದ ಕೃಷಿ ಮಾಡುವುದೇ ದೊಡ್ಡ ಸವಾಲಾಗಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸುವ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಬೇಕಿದೆ” ಎಂದು ಕಳಕಳಿ ವ್ಯಕ್ತಪಡಿಸಿದರು.
ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರ ನವೀನ್ ಮಾತನಾಡಿ, “ಉತ್ತರ ಕನ್ನಡ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿರುವುದು ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲವೇ? ಕೇವಲ 5 ಲಕ್ಷ ರೂಪಾಯಿ ಪರಿಹಾರ ನೀಡಿ ಕೈತೊಳೆದುಕೊಳ್ಳುವುದು ಸರ್ಕಾರದ ಜವಾಬ್ದಾರಿಯಲ್ಲ. ಅಡಿಕೆ ಬೆಳೆಗೆ ತಗುಲಿರುವ ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ರೈತನಿಗೆ ಸೂಕ್ತ ರಕ್ಷಣೆ ನೀಡಬೇಕು. ರೈತರು ಸಾಲದ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಮುನ್ನವೇ ಅವರ ನೆರವಿಗೆ ಬರುವಂತಹ ವಿಶೇಷ ಕೃಷಿ ಪ್ಯಾಕೇಜ್ ಅನ್ನು ಸರ್ಕಾರ ತಕ್ಷಣ ಘೋಷಿಸಬೇಕು. ಅನ್ನದಾತನನ್ನು ಉಳಿಸಿಕೊಳ್ಳದಿದ್ದರೆ ನಾಡಿನ ಭವಿಷ್ಯವೇ ಮಂಕಾಗಲಿದೆ” ಎಂದು ಈ ದಿನ ಮಾಧ್ಯಮದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.
ಶಿರಸಿ ಭಾಗದ ಪ್ರಗತಿಪರ ರೈತ ಶಶಿಧರ್ ಭಟ್ ಮಾತನಾಡಿ, “ಮಲೆನಾಡಿನ ಕೃಷಿ ಇಂದು ಜೂಜಾಟವಾಗಿ ಪರಿಣಮಿಸಿದೆ. ಅಡಿಕೆಗೆ ತಗುಲಿರುವ ಕೊಳೆ ರೋಗ ಮತ್ತು ಹಳದಿ ಎಲೆ ರೋಗಕ್ಕೆ ದಶಕಗಳು ಕಳೆದರೂ ಸರ್ಕಾರಿ ಮಟ್ಟದಲ್ಲಿ ಸಂಶೋಧನೆಗಳಾಗಿಲ್ಲ. ಇದುವರೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಜಿಲ್ಲೆಯ ರೈತ ಆತ್ಮಹತ್ಯೆ ಮಾಡಿಕೊಂಡಾಗ ಬಂದು ಪರಿಹಾರ ಚೆಕ್ ನೀಡುವುದು ದೊಡ್ಡ ಸಾಧನೆಯಲ್ಲ. ಬದಲಾಗಿ, ರೈತ ಆತ್ಮಹತ್ಯೆಯ ಹಾದಿ ಹಿಡಿಯದಂತೆ ತಡೆಯಲು ಸಾಲ ಮನ್ನಾ ಮತ್ತು ಬಡ್ಡಿ ರಹಿತ ಸಾಲದ ಸೌಲಭ್ಯಗಳನ್ನು ವಿಸ್ತರಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆಯಾಗದಿದ್ದರೆ ಶಿರಸಿ, ಸಿದ್ದಾಪುರ ಭಾಗದ ಅಡಿಕೆ ಬೆಳೆಗಾರರ ಬದುಕು ಮುಂದಿನ ದಿನಗಳಲ್ಲಿ ಮತ್ತಷ್ಟು ಕಮರಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ | ಶಾಸಕ ಶಿವರಾಮ ಹೆಬ್ಬಾರ್ ಅವರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ವಿವಿಧ ಸೌಲಭ್ಯಗಳ ವಿತರಣೆ
ಹಳಿಯಾಳ ತಾಲ್ಲೂಕಿನ ರೈತ ಮುಂಜುನಾಥ್ ಎಚ್ ಮಾತನಾಡಿ, “ಜಿಲ್ಲೆಯ ಅರೆಬಯಲು ಸೀಮೆಯ ಸಂಕಷ್ಟಗಳನ್ನು ವಿವರಿಸುತ್ತಾ, “ನಾವು ಬೆಳೆದ ಬೆಳೆಯನ್ನು ನಾವು ಮನೆಗೆ ತರುತ್ತೇವೆ ಎಂಬ ನಂಬಿಕೆ ನಮಗಿಲ್ಲದಂತಾಗಿದೆ. ಕಾಡುಹಂದಿ ಮತ್ತು ಆನೆಗಳ ಹಾವಳಿಯಿಂದಾಗಿ ರಾತ್ರಿ ಇಡೀ ಹೊಲದಲ್ಲಿ ಜಾಗರಣೆ ಮಾಡಿದರೂ ಬೆಳೆ ಉಳಿಸಿಕೊಳ್ಳಲಾಗುತ್ತಿಲ್ಲ. ಹಳಿಯಾಳ ಮತ್ತು ದಾಂಡೇಲಿ ಭಾಗದ ರೈತರು ಪ್ರಾಣಿಗಳ ದಾಳಿಗೆ ಬೆಳೆ ಕಳೆದುಕೊಂಡು ಸಾಲಗಾರರಾಗುತ್ತಿದ್ದಾರೆ. ಸರ್ಕಾರ ಕೇವಲ ಅರಣ್ಯ ಸಂರಕ್ಷಣೆಯ ಬಗ್ಗೆ ಮಾತನಾಡುತ್ತದೆ, ಆದರೆ ರೈತನ ರಕ್ಷಣೆಗೆ ಸೋಲಾರ್ ಬೇಲಿ ಅಥವಾ ಶಾಶ್ವತ ತಡೆಗೋಡೆ ನಿರ್ಮಿಸಲು ಮುಂದಾಗುತ್ತಿಲ್ಲ. ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಉತ್ತರ ಕನ್ನಡದ ರೈತರಿಗಾಗಿ ವಿಶೇಷ ಪ್ಯಾಕೇಜ್ ನೀಡಿ, ಕಾಡುಪ್ರಾಣಿಗಳಿಂದ ಹಾನಿಯಾದ ಬೆಳೆಗೆ ತಕ್ಷಣದ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ರೈತ ದೇಶದ ಬೆನ್ನೆಲುಬು ಎಂಬ ಮಾತು ಕೇವಲ ಘೋಷಣೆಯಾಗಬಾರದು. ಉತ್ತರ ಕನ್ನಡದ ರೈತರ ಕಣ್ಣೀರು ಒರೆಸಲು ಸರ್ಕಾರವು ಕೇವಲ ಪರಿಹಾರದ ಹಾದಿ ಹಿಡಿಯದೆ, ಕೃಷಿಯನ್ನು ಲಾಭದಾಯಕ ಹಾಗೂ ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ.





