ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಅವಾಚ್ಯವಾಗಿ ಕಾಮೆಂಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕಳೆದ 2025ರ ಮಾರ್ಚ್ 4 ರಂದು ಫೇಸ್ಬುಕ್ನ ‘ವಾರ್ತಾ ಭಾರತಿ’ ಪೇಜ್ನಲ್ಲಿ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಲ್ಲಿ ತರಕಾರಿ ವ್ಯಾಪಾರ ಮಾಡುವ ಮಹಮ್ಮದ್ ಅವರ ಸಂದರ್ಶನ ಪ್ರಕಟವಾಗಿತ್ತು. ಈ ಕುರಿತು “ರಂಜಾನ್ ಕಥೆಯ ಇಂದಿನ ಹೀರೋ ಮಂಗಳೂರಿನ ಮಹಮ್ಮದ್” ಎಂಬ ಶೀರ್ಷಿಕೆಯ ಪೋಸ್ಟ್ಗೆ ‘ಹೆಮ್ಮೆಯ ಕಾರ್ಯಕರ್ತ’ ಎಂಬ ಹೆಸರಿನ ಫೇಸ್ಬುಕ್ ಖಾತೆಯಿಂದ ಅವಾಚ್ಯವಾಗಿ ಕಾಮೆಂಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 353(2) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 66(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕ ಜಯರಾಮ್ ಡಿ. ಗೌಡ ಅವರ ನೇತೃತ್ವದಲ್ಲಿ ಪಿಎಸ್ಐ ನಂಜಾನಾಯ್ಕ್ ಎನ್. (ಕಾ&ಸು), ಪಿಎಸ್ಐ ಶ್ರೀಮತಿ ಪುಷ್ಪ (ತನಿಖೆ) ಹಾಗೂ ಸಿಬ್ಬಂದಿಗಳಾದ ಸಂತೋಷ, ಮೋಹನ್, ಸಂತೋಷ ದೇವಾಡಿಗ, ಘನಶ್ಯಾಮ, ಅಣ್ಣಪ್ಪ, ಮಹಾಬಲ ಶೆಟ್ಟಿಗಾರ, ನಾಗಶ್ರೀ ಮತ್ತು ಗೌತಮ ಅವರ ತಂಡ ಕಾರ್ಯಾಚರಣೆ ನಡೆಸಿತು.
ಪ್ರಕರಣದ ಆರೋಪಿ ಪ್ರಕಾಶ್ ಎಸ್. (45), ತಂದೆ ಶಿವರಾಮ್ ಕೆ., ಮತ್ತಿಕೆರೆ, ಬೆಂಗಳೂರು ನಿವಾಸಿ ಇತನನ್ನು ಬಂಧಿಸಿ, ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.





