ಮಹಿಳೆಯರು ಮತ್ತು ಯುವ ಮನಸ್ಸುಗಳು ಮೌಢ್ಯಾಚಾರ–ವಿಚಾರಗಳ ಹೆಸರಿನಲ್ಲಿ ಕುರುಡು ಕೂಪಕ್ಕೆ ಬೀಳುತ್ತಿರುವ ಈ ಕಾಲಘಟ್ಟದಲ್ಲಿ, ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿದು ಸಮಾಜದ ಮುಖ್ಯವಾಹಿನಿಗೆ ಬರಬೇಕಾದ ಅನಿವಾರ್ಯತೆ ಇದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವುದು ಸಾಮಾಜಿಕ ಬದಲಾವಣೆಯ ಹೊಸ ಪರ್ವವನ್ನು ಸೂಚಿಸುತ್ತದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಳ್ಳಿಹೊಳೆ ಘಟಕದ ವತಿಯಿಂದ ಆಯೋಜಿಸಿದ್ದ ಭೀಮ ಶಕ್ತಿ ಐಕ್ಯತಾ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಹಾಗೂ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯ ವಾಸುದೇವ ಮುದೂರು ಹೇಳಿದರು.
ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ಅವರು, ಕಟ್ಟಿಬೆಳೆದ ಸಂಘಟನೆಯನ್ನು ಒಡೆದು ಆಳುವ ಹಿತಶತ್ರುಗಳು ಅವಕಾಶವಾದಿಗಳಾಗಿ ಜೊತೆಯಲ್ಲೇ ಇದ್ದರೆ ಸಮುದಾಯದ ಹಿತಕ್ಕೆ ಸವಾಲಾಗುತ್ತದೆ ಎಂದು ಎಚ್ಚರಿಸಿದರು. ಆಡಳಿತ ವ್ಯವಸ್ಥೆಗಳು ಎಷ್ಟೇ ಜನಪರ ಯೋಜನೆಗಳನ್ನು ಜಾರಿಗೆ ತಂದರೂ, ಹಕ್ಕುಗಳನ್ನು ಹೋರಾಟದ ಮೂಲಕವೇ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಮುಂದುವರಿದಿದೆ ಎಂದರು. ಗ್ರಾಮೀಣ ಭಾಗಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ಜನರನ್ನು ತರುವಲ್ಲಿ ಸಂಘಟನೆಯ ಕಾರ್ಯ ನಿರಂತರವಾಗಿರಲಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನಪರ ಹೋರಾಟಗಾರ ಜಯನ್ ಮಲ್ಪೆ, ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಅಂಬೇಡ್ಕರ್ ಅವರ ಒಕ್ಕೂಟ ಚಳವಳಿಯ ಹೋರಾಟದಿಂದಲೇ ಎಲ್ಲ ಹಕ್ಕುಗಳ ಪ್ರತಿಪಾದನೆ ಸಾಧ್ಯವಾಯಿತು ಎಂದರು. ದಲಿತರು ಗುಲಾಮಗಿರಿಯ ಮನೋಭಾವದಿಂದ ಹೊರಬಂದು ಶಾಸನ ರಚಿಸುವ ವಿಧಾನಸಭೆ–ಲೋಕಸಭೆಗಳ ರಾಜಕೀಯ ಶಕ್ತಿಯಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕುಂದಾಪುರ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ರಮೇಶ್ ಕುಲಾಲ್, ಶಂಕರನಾರಾಯಣ ಪೊಲೀಸ್ ಉಪನಿರೀಕ್ಷಕರು ಯೂನುಸ್ ಗಡ್ಡೆಕರ, ಎಸ್ಸಿ–ಎಸ್ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ ಉಪ್ಪೂರು ಹಾಗೂ ಹಳ್ಳಿಹೊಳೆ ಗ್ರಾ.ಪಂ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಮಾಜಿ ಗ್ರಾ.ಪಂ ಅಧ್ಯಕ್ಷ ಹಾಗೂ ತಾಲ್ಲೂಕು ಸಂಘಟನಾ ಸಂಚಾಲಕ ರಾಮ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷರಾದ ಗಣೇಶ್ ನೆರ್ಗಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಚಂದ್ರ ಹಳಗೇರಿ, ಬೈಂದೂರು ತಾಲ್ಲೂಕು ಸಂಚಾಲಕರಾದ ಲಕ್ಷಣ ಬೈಂದೂರು, ಹಳ್ಳಿಹೊಳೆ ಗ್ರಾ.ಪಂ ಉಪಾಧ್ಯಕ್ಷರಾದ, ಅಂಬೇಡ್ಕರ್ ಯುವ ಸೇನೆಯ ಹರೀಶ್ ಸಾಲಿಯಾನ್, ಗ್ರಾ.ಪಂ ಸದಸ್ಯರು ಪ್ರಭಾಕರ ಉಳಾಲುಮಠ, ಯಡಮೊಗ್ಗೆ ಸಂಚಾಲಕರಾದ ಬಾಸ್ಕರ್ ನಾಯ್ಕ, ಸುಂದರ ಹೊಸಕೋಟೆ, ಸುರೇಶ್ ಮೂಡುಬಗ್ಗೆ, ನಾರಾಯಣ ಪರ್ಕಳ, ಕಮಲಾಕ್ಷ ಚೇರ್ಕಾಡಿ ಹಾಗೂ ಶಿವಕುಮಾರ್ ಪರ್ಕಳ ಉಪಸ್ಥಿತರಿದ್ದರು.
ವರ್ಥನಾಯ್ಕ ಬಾಳಿಕೆರೆ ಸ್ವಾಗತಿಸಿದರು. ಉದಯ ನಾಯ್ಕ ರಾಂಪೈಜಡ್ಡು ನಿರೂಪಿಸಿದರು. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ಕೊಠಾರಿ ವಂದನಾರ್ಪಣೆ ಸಲ್ಲಿಸಿದರು.





