ಧರ್ಮಸ್ಥಳ ಕ್ಷೇತ್ರದಲ್ಲಿರುವ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ದೇವಸ್ಥಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ತಹಶೀಲ್ದಾರರು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ತಿಳಿಸಿದ್ದಾರೆ. ಈ ವರದಿಯ ಪ್ರತಿಯನ್ನು ನಾಗರಿಕ ಸೇವಾ ಟ್ರಸ್ಟ್ನ ಅಧ್ಯಕ್ಷ ಸೋಮನಾಥ ನಾಯಕ್ ಅವರಿಗೆ ಕಳಿಸಿದ್ದಾರೆ.
ಯಾವುದೇ ಮಾಹಿತಿಯನ್ನು ನೀಡಲು ನಿರಾಕರಿಸಿರುವ ಕಾರಣದಿಂದಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮ 2002ರ ಸೆಕ್ಷನ್ 53ರಂತೆ ನೋಂದಣಿ ಮಾಡಲು ಪ್ರಸ್ಥಾವನೆ ಸಲ್ಲಿಸಲು ಅಸಾಧ್ಯವಾಗಿದೆ ಎಂದು ತಹಶೀಲ್ದಾರರು ಹೇಳಿದ್ದಾರೆ. ಇದಾದ ಬೆನ್ನಲ್ಲೇ ಮಾಹಿತಿ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿರುವ ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ, ನಾಗರಿಕ ಸೇವಾ ಟ್ರಸ್ಟ್ ಅನುಮಾನವನ್ನು ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ಸೌಜನ್ಯ ಪ್ರಕರಣ: ಓದುಗರಿಗೆ ದ್ರೋಹ ಬಗೆದ ‘ಹೆಗ್ಗಡೆವಾಣಿ’ಗೆ ನಾಗರಿಕ ಸೇವಾ ಟ್ರಸ್ಟ್ ಪತ್ರ
ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ದೇವಸ್ಥಾನದ ಹೆಸರು & ವಿಳಾಸ, ದೇವಾಲಯದ ಮೂಲ ಮತ್ತು ಇತಿಹಾಸ, ದೇವಸ್ಥಾನದ ಭೂಮಿ, ಕಟ್ಟಡ, ಠೇವಣಿಗಳ ಮತ್ತು ಚಿನ್ನಾಭರಣಾದಿ ಸಕಲ ಚರ ಸೊತ್ತುಗಳ ವಿವರ, ವಾರ್ಷಿಕ ಆದಾಯ ಮತ್ತು ಖರ್ಚಿನ ವಿವರ ( ಆಡಿಟ್ ಆದ ಲೆಕ್ಕಪತ್ರದ ಪ್ರತಿಸಹಿತ) ನೀಡಬೇಕು. ಆದರೆ ಈ ಮಾಹಿತಿಯನ್ನು ನೀಡಲು ಧರ್ಮಾಧಿಕಾರಿಗಳು ನಿರಾಕರಿಸಿದ್ದಾರೆ.


ಇದಾದ ಬೆನ್ನಲ್ಲೇ ಈ ಮಾಹಿತಿಗಳನ್ನು ಗುಟ್ಟಾಗಿಟ್ಟಿದ್ದಾರೆ ಎಂದರೆ ಸಂಶಯ ಬರುತ್ತಿದೆ ಎಂದು ನಾಗರಿಕ ಸೇವಾ ಟ್ರಸ್ಟ್ ಹೇಳಿದೆ. “ಪ್ರತಿವರ್ಷ ಲೆಕ್ಕಪತ್ರ ನೀಡಬೇಕು. ಸಾರ್ವಜನಿಕರಿಂದ ನಗದು ಕಾಣಿಕೆ & ದೇಣಿಗೆ, ವಸ್ತುರೂಪದ ದೇಣಿಗೆ ಪಡೆಯುವ ದೇವಾಲಯ ಅದರ ಲೆಕ್ಕಪತ್ರವನ್ನು ಸಾರ್ವಜನಿಕರ ಮುಂದೆ ಇಡಬೇಕು. ಆದರೆ ಮುಚ್ಚಿಡಲಾಗುತ್ತಿದೆ. ಈ ಮಾಹಿತಿಯನ್ನು ಗುಟ್ಟಾಗಿಟ್ಟಿದ್ದಾರೆ ಎಂದರೆ ಸಂಶಯ ಬರುವುದಿಲ್ಲವೇ” ಎಂದು ಪ್ರಶ್ನಿಸಿದೆ.
“ದೇವಳದ ಸಾವಿರಾರು ರೂಪಾಯಿ ಕೋಟಿ ಮೌಲ್ಯದ ಆಸ್ತಿ & ಹಣ ಏನಾಗಿದೆ ಮತ್ತು ಏನಾಗುತ್ತಿದೆ. 1050ಕ್ಕೂ ಅಧಿಕ ಎಕರೆ ದೇವಾಲಯದ ಭೂಮಿಯನ್ನು ಹೆಗ್ಗಡೆ ಕುಟುಂಬ ಕಬಳಿಸಿದ್ದಕ್ಕೆ ದಾಖಲೆ ಇದೆ. ದೇವಳದ ಆದಾಯ ಬಳಕೆ ಬಗ್ಗೆಯೂ ಮಾಹಿತಿ & ಸಾಕ್ಷಿಗಳಿವೆ” ಎಂದು ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ, ನಾಗರಿಕ ಸೇವಾ ಟ್ರಸ್ಟ್ ಹೇಳಿದೆ.





