ವೆನೆಜುವೆಲಾ ಮೇಲೆ ಮಿಲಿಟರಿ ದಾಳಿ ನಡೆಸಿ, ಚುನಾಯಿತ ಅಧ್ಯಕ್ಷರನ್ನು ಅಪಹರಿಸಿದ ಅಮೆರಿಕಾ ಸಾಮ್ರಾಜ್ಯಶಾಹಿ ಸರ್ಕಾರದ ಯುದ್ಧಕೋರತನದ ನಿಲುವು ಖಂಡಿಸಿ ಎಸ್ಯುಸಿಐ(ಸಿ) ಪಕ್ಷದ ಮೈಸೂರು ಜಿಲ್ಲಾ ಸಮಿತಿಯ ಸದಸ್ಯರು ಇಂದು ಮೈಸೂರು ನಗರದ, ಟೌನ್ ಹಾಲ್ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.
ಅಂತಾರಾಷ್ಟ್ರೀಯ ಕಾನೂನು ನೀತಿ ಸಂಹಿತೆಗಳನ್ನು ಮನಬಂದಂತೆ ಧಿಕ್ಕರಿಸಿದ ಅಮೆರಿಕಾದ ಗೂಂಡಾಗಿರಿಯ ವಿರುದ್ಧ, ಎಸ್ಯುಸಿಐ(ಸಿ) ಪಕ್ಷದ ಕೇಂದ್ರ ಸಮಿತಿ ಕರೆ ನೀಡಿರುವ ಅಖಿಲ ಭಾರತ ಪ್ರತಿಭಟನಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದರು.
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಮಾದಕ ದ್ರವ್ಯಗಳ ಕಳ್ಳಸಾಗಣೆ ಮಾಡಿಸುತ್ತಿದ್ದಾರೆ ಎಂದು ಅಮೆರಿಕಾ ಆರೋಪಿಸಿರುವುದು ಕಳ್ಳನಿಗೊಂದು ಪಿಳ್ಳೆ ನನ ಎಂಬಂತೆ ಹಾಸ್ಯಾಸ್ಪದವಾಗಿದೆ. ಇದೇ ಅಮೆರಿಕಾ ಹಿಂದೆ, ಇರಾಕಿನಲ್ಲಿ ಸಮೂಹ ವಿನಾಶದ ಅಸ್ತ್ರಗಳಿವೆ ಎಂದು ಆರೋಪಿಸಿ, ವರ್ಷಗಟ್ಟಲೆ ಯುದ್ಧ ಹೂಡಿ ಅಲ್ಲಿನ ಅಧ್ಯಕ್ಷ ಸದ್ದಾಂ ಹುಸೇನ್ ಅವರನ್ನು ಕೊಲೆ ಮಾಡಿತು. ಆದರೆ, ಇದುವರೆಗೂ ಅಂತಹ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.
ಪ್ರಜಾತಂತ್ರದ ಬದಲಿಗೆ ಮತ್ತಷ್ಟು ಅರಾಜಕತೆ, ಇಸ್ಲಾಮಿಕ್ ಮತೀಯವಾದ ಬೆಳೆದಿದೆ. ಅಫ್ಘಾನಿಸ್ಥಾನದಲ್ಲಿ ಭಯೋತ್ಪಾದನೆಯ ವಿರುದ್ಧ ಯುದ್ಧ ಸಾರಿ ಈಗ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸರಿಯಾದ ಚುನಾಯಿತ ಸರ್ಕಾರವನ್ನು ಬೀಳಿಸಿ ಐಸಿಸ್ ಕೈಗೆ ಕೊಡಲಾಗಿದೆ. ಇಂತಹ ಅಮೆರಿಕಾ ವೆನೆಜುವೆಲಾದಲ್ಲಿ ಪ್ರಜಾತಾಂತ್ರಿಕ ಸರ್ಕಾರವನ್ನು ತರುವುದೆಂದು ಹೇಳಿದರೆ ನಂಬಲಸಾಧ್ಯ.
ವಾಸ್ತವದಲ್ಲಿ ವೆನೆಜುವೆಲಾ ಜಗತ್ತಿನಲ್ಲೇ ಅತಿ ಹೆಚ್ಚು ಕಚ್ಚಾತೈಲದ ನಿಕ್ಷೇಪಗಳನ್ನು ಹೊಂದಿದೆ. 1998ರಲ್ಲಿ ಅಧಿಕಾರಕ್ಕೆ ಬಂದ ಹೋರಾಟಗಾರ ಹ್ಯೂಗೋ ಚಾವೇಜ್ ಅಮೆರಿಕಾ ಸೇರಿದಂತೆ ಎಲ್ಲಾ ವಿದೇಶ ಕಂಪನಿಗಳನ್ನು ನಿಷೇಧಿಸಿ, ಎಲ್ಲಾ ತೈಲೋದ್ಯಮವನ್ನು ರಾಷ್ಟ್ರೀಕರಣ ಮಾಡಿದರು. ಅವರ ನಂತರ 2013ರಲ್ಲಿ ಅಧಿಕಾರಕ್ಕೆ ಬಂದ ನಿಕೋಲಸ್ ಮಡುರೋ ಅದೇ ನೀತಿಗಳನ್ನು ಮುಂದುವರಿಸಿದ್ದಾರೆ.
ಇದನ್ನೆಲ್ಲಾ ಸಹಿಸದ ಅಮೆರಿಕಾ ರಾಜಕೀಯವಾಗಿ ಸೋಲಿಸಲು ವಿವಿಧ ತಂತ್ರಗಳನ್ನು ಮಾಡಿತು. ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿತ್ತು. ಆದರೆ, ಅದರಿಂದ ಮಡರೋ ಅಲುಗಾಡಲಿಲ್ಲ. ಆದರೆ, ದೇಶ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಅವರ ರಾಜಕೀಯ ಎದುರಾಳಿ, ಅಮೆರಿಕಾದ ಮಾರಿಯಾ ಕೊರಿನಾ ಮಚಾದೊ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು. ಈಗ ಕೆಲವು ತಿಂಗಳುಗಳಿಂದ ಮಾದಕ ದ್ರವ್ಯಗಳ ಕಳ್ಳಸಾಗಣೆ ತಡೆಯುವ ನೆಪ ನೀಡಿ ಕೆರೆಬಿಯನ್ ಸಮುದ್ರದಲ್ಲಿ ಅಮೆರಿಕಾ ತನ್ನ ಅತಿದೊಡ್ಡ ಯುದ್ಧನೌಕೆಯನ್ನು ತಂದು ನಿಲ್ಲಿಸಿದೆ.
ಇದೀಗ ಜನವರಿ 2ರ ನಡುರಾತ್ರಿ ದರೋಡೆಕೋರರಂತೆ ವೆನೆಜುವೆಲಾದ ಅಧ್ಯಕ್ಷರ ನಿವಾಸದ ಮೇಲೆ ದಾಳಿ ನಡೆಸಿ, ತಾವೇ ಅಲ್ಲಿ ಆಡಳಿತ ನಡೆಸುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದಾರೆ. ಅಮೆರಿಕಾದ ಇಂತಹ ವಿದೇಶಾಂಗ ನೀತಿಯು ಜಗತ್ತಿನ ಶಾಂತಿ ಕದಡಲು, ಭಯೋಭಾವನೆ ಬೆಳೆಯಲು ಮುಖ್ಯ ಕಾರಣವಾಗಿದೆ. ಆದ್ದರಿಂದ, ಅಮೆರಿಕಾ ವಿಶ್ವದಲ್ಲಿನ ಎಲ್ಲಾ ರಾಷ್ಟ್ರಗಳಿಗಿಂತ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ತನ್ನ ಬಂಡವಾಳಶಾಹಿ ವ್ಯವಸ್ಥೆಯನ್ನು ಮೇಲೆತ್ತುವುದಕ್ಕಾಗಿ, ಜಗತ್ತಿನ ದುರ್ಬಲ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯನ್ನು ತಡೆಯಲು ಮುಂದಾಗಿದೆ.
ದುರಂತವೆಂದರೆ ಸಾಮ್ರಾಜ್ಯಶಾಹಿ ವಿರೋಧಿ ಸ್ವಾತಂತ್ರ್ಯ ಹೋರಾಟದ ಇತಿಹಾಸ ಇರುವ ಭಾರತದಲ್ಲಿ ಅಧಿಕಾರ ಹಿಡಿದಿರುವ ಕೇಂದ್ರ ಬಿಜೆಪಿ ಸರ್ಕಾರ ಈ ಅಕ್ರಮಣವನ್ನು ಖಂಡಿಸುತ್ತಿಲ್ಲ. ಬದಲಿಗೆ ಭಾರತದೆ ಬಂಡವಾಳಶಾಹಿಗಳಿಗೆ ಇದರಿಂದಾಗುವ ಲಾಭ ನಷ್ಟದ ಲೆಕ್ಕಾಚಾರ ಹಾಕಿ ಆತ್ಮ ವಂಚನೆಯ ಹೇಳಿಕೆ ನೀಡುತ್ತಿದೆ.
ಈ ಸುದ್ದಿ ಓದಿದ್ದೀರಾ? ಎಲ್ಲಾ ಬಗೆಯ ಕೃಷಿಕರ ತವರೂರು ಹಾಸನ: ಶಾಸಕ ಹೆಚ್ ಕೆ ಸುರೇಶ್
ಇಂತಹ ಸಂದರ್ಭದಲ್ಲಿ ಒಂದು ದೇಶದ ಮೇಲೆ ದಾಳಿ ಮಾಡಿದ ಅಮೆರಿಕಾದ ಆಕ್ರಮಣದ ವಿರುದ್ಧ ಜಗತ್ತಿನ ಶಾಂತಿಪ್ರಿಯ ಜನತೆ ತೀವ್ರವಾಗಿ ಹೋರಾಡಲು ಮುಂದಾಗಬೇಕು. ವೆನೆಜುವೆಲಾದ ಅಧ್ಯಕ್ಷರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಭಾರತ ಸರ್ಕಾರವು ಹಿಂದಿನಂತೆ ತನ್ನ ಸಾಮ್ರಾಜ್ಯಶಾಹಿ ವಿರೋಧಿ, ಶಾಂತಿಪರ ನೀತಿಯನ್ನು ಪಾಲಿಸಿ, ಅಮೆರಿಕಾದ ವಿರುದ್ಧ ಜಾಗತಿಕ ಅಭಿಪ್ರಾಯ ಮೂಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಲೈವ್ ವೀಕ್ಷಿಸಿ:https://www.youtube.com/live/M6qJwMD3s0g?si=96sN77LlSDa87kon
ಪ್ರತಿಭಟನೆಯಲ್ಲಿ ಎಸ್ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಬಿ. ರವಿ, ಸದಸ್ಯರಾದ ಎಂ. ಉಮಾದೇವಿ, ಯಶೋಧರ್, ಸಂಧ್ಯಾ ಪಿ.ಎಸ್, ಹರೀಶ್, ಸುಮಾ, ಮುದ್ದುಕೃಷ್ಣ, ಆಸಿಯಾ ಬೇಗಂ, ನೀತುಶ್ರೀ ಇದ್ದರು.





