ವಿಜಯನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣವನ್ನು ಮದ್ಯಮುಕ್ತ ಗ್ರಾಮವನ್ನಾಗಿಸಬೇಕು ಮತ್ತು ಎಂಎಸ್ಐಎಲ್ ಮದ್ಯದ೦ಗಡಿಯನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಗ್ರಾಕೂಸ್ ಸಂಘಟನೆ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಗ್ರಾಕೂಸ್ ತಾಲೂಕು ಸಂಚಾಲಕಿ ಅಕ್ಕಮಹಾದೇವಿ ಮರಬ್ಬಿ ಹಾಳು, ಹಂಪಾಪಟ್ಟಣ ಗ್ರಾಮದ ಪಕ್ಕದಲ್ಲಿ ಇರುವ ಎಂಎಸ್ಐಎಲ್ ಮದ್ಯದ ಮಳಿಗೆಯನ್ನು ಕೂಡಲೇ ಸ್ಥಳಾಂತರಿಸಬೇಕು. ಗ್ರಾಮದ ಪಕ್ಕದಲ್ಲೇ ಇರುವುದರಿಂದ ಚಿಕ್ಕಮಕ್ಕಳು ಮದ್ಯವ್ಯಸನಿಗಳಾಗಿದ್ದಾರೆ. ಮದ್ಯದಂಗಡಿ ಮುಂಭಾಗದಲ್ಲಿಯೇ ಸಾರ್ವಜನಿಕರು ಮಹಿಳೆಯರು, ಓಡಾಡುವುದರಿಂದ ಮದ್ಯವ್ಯಸನಿಗಳಿಂದ ತೊಂದರೆಯುಂಟಾಗುತ್ತಿದೆ ಎಂದರು.
ಮಹಿಳೆಯರಿಗೆ ನಿರಂತರವಾಗಿ ಸಮಸ್ಯೆಯಾಗುತ್ತಿರುವುದರಿಂದ, ಕೂಡಲೇ ಸ್ಥಳಾಂತರಿಸಬೇಕು. ಹಂಪಾಪಟ್ಟಣ ಗ್ರಾಮವನ್ನು ಸಂಪೂರ್ಣವಾಗಿ ಮದ್ಯ ಮುಕ್ತವನ್ನಾಗಿಸಬೇಕು. ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಭೂಮಿಕಾ ಸಂಜೀವಿನಿ ವಾರ್ಡ್ ಒಕ್ಕೂಟ ಮುಖಂಡೆ ಅನಿತಾ, ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷ ಖಾಜಾ ಹುಸೇನ, ಗ್ರಾಕೂಸ್ ಮರಿಯಮ್ಮ, ಶಿವಕ್ಕ, ಗಾಳೆಮ್ಮ, ಹನುಮಂತ ಇನ್ನಿತರರು ಹಾಜರಿದ್ದರು.





