ಮಹಮ್ಮದ್ ಪೈಗಂಬರ್ ಅವರು 570ರಂದು ಮೆಕ್ಕಾದಲ್ಲಿ ಜನಿಸಿದರು. ಇಸ್ಲಾಂ ಧರ್ಮದ ಸ್ಥಾಪಕ ಹಾಗೂ ಖುರ್ಆನ್ನ ಘೋಷಕರಾಗಿದ್ದಾರೆ. ತಮ್ಮ ಯೌವನದಲ್ಲಿ ತಾಯಿಯನ್ನು ಕಳೆದುಕೊಂಡ ಅವರು ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದರು. 40ನೇ ವಯಸ್ಸಿನಲ್ಲಿ, ಅಲ್ಲಾಹನಿಂದ ದೇವದೂತ ಜಿಬ್ರೀಲ್ ಮೂಲಕ ಖುರ್ಆನ್ನ ಮೊದಲ ವಾಕ್ಯಗಳನ್ನು ಸ್ವೀಕರಿಸಿದರು. ಅವರು ಏಕದೇವೋಪಾಸನೆಯ ಸಂದೇಶವನ್ನು ಪ್ರಚಾರ ಮಾಡಿದರು ಎಂದು ಡಿವೈಎಫ್ಐ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಇಡಿಗಾರ ಹೇಳಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಶ್ರಮಿಕ ಭವನದಲ್ಲಿ ಮಹಮ್ಮದ್ ಪೈಗಂಬರ್ ಅವರ 1500ನೇ ಜನ್ಮ ದಿನಾಚರಣೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವ ಜನ ಫೆಡರೇಶನ್ ವತಿಯಿಂದ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
“ಬಹುದೇವತಾ ವಾದವನ್ನು ವಿರೋಧಿಸಿದರು ಮತ್ತು ಅಂತಿಮವಾಗಿ ತಮ್ಮ ಅನುಯಾಯಿಗಳೊಂದಿಗೆ ಮೆಕ್ಕಾದಿಂದ ಮದೀನಾಗೆ ವಲಸೆ ಹೋದರು. ಅವರ ಜೀವನದ ಪ್ರಮುಖ ಸಾಧನೆಗಳು ಇಸ್ಲಾಮಿಕ್ ಸಮಾಜದ ಸ್ಥಾಪನೆ, ಖುರ್ಆನ್ನ ಸಂಕಲನ ಹಾಗೂ ಮಾರ್ಗದರ್ಶನ ನೀಡಿದ ಜೀವನ ವಿಧಾನದ ರಚನೆಯಾಗಿದೆ. ಪೈಗಂಬರರು ಸಮಾಜದಲ್ಲಿ ನ್ಯಾಯ, ಸಾಮರಸ್ಯ, ಸಹಾನುಭೂತಿ ಮತ್ತು ಸಮಾನತೆಯನ್ನು ಉತ್ತೇಜಿಸಿದರು. ಅವರು ಬಡವರು ಹಾಗೂ ನಿರ್ಗತಿಕರಿಗೆ ಸಹಾಯ ಮಾಡಲು ಆದೇಶಿಸಿದ್ದರು” ಎಂದರು.
“ಪೈಗಂಬರರು ನಮಗೆ ಎಲ್ಲ ವಿಷಯದಲ್ಲಿ ಅಂದರೆ ಧಾರ್ಮಿಕ, ಸಾಮಾಜಿಕ, ದೈವಿಕ ನಂಬಿಕೆ, ರಾಜಕೀಯ ವ್ಯವಹಾರ, ವ್ಯಾಪಾರ, ಊಟ-ಉಪಾಸನ, ಅರೋಗ್ಯ, ಅಸ್ತಿ, ಸ್ನೇಹ-ರಕ್ತಸಂಭಂದ, ವಿಜ್ಞಾನ, ಮೂಢನಂಬಿಕೆ, ಯುದ್ಧ ಕರುಣೆ ಕಾಡು-ನಾಡು, ಮಸೀದಿ, ಮಂದಿರ, ಚರ್ಚ್, ಸ್ತ್ರೀ-ಪುರುಷರ, ಮಕ್ಕಳು, ತಂದೆ-ತಾಯಂದಿರ ಹಕ್ಕು, ಪ್ರಾಣಿ, ಪಕ್ಷಿಗಳ, ಮಾನವರ ಹಕ್ಕು, ಮಳೆ ಬೆಳೆ ಹೀಗೆ ಹಲವು ವಿಷಯಗಳ ಬಗ್ಗೆ ಅರಿವು ಮೂಡಿಸಿ ಮಾರ್ಗದರ್ಶನ ನೀಡಿದ್ದು, ಇವತ್ತಿಗೂ ಅವರು ಇಡೀ ವಿಶ್ವಕ್ಕೆ ಒಬ್ಬ ಶ್ರೇಷ್ಠ ದಾರ್ಶನಿಕ, ತತ್ವಜ್ಞಾನಿ ಹಾಗೂ ಶಿಕ್ಷರೆಂದು ಹೇಳುವುದರಲ್ಲಿ ಹೆಮ್ಮೆಯ ಮಾತಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಪ್ರವಾದಿ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಶಾಂತಿ, ಸೌಹಾರ್ದತೆ ಸಂದೇಶ
ವಿ. ಸ್ವಾಮಿ, ಬಂಡೆ ತಿರುಕಪ್ಪ, ಅಲ್ತಾಫ್, ಮಹಮ್ಮದ್ ಖಾಲಿದ್, ಖಾಸಿಂ, ಬಷೀರ ಅಹಮದ್ ವಕೀಲರು, ಜಾಫರ್ ಸಾದಿಕ್ ವಕೀಲರು, ಮಾಲತೇಶ್, ನಿಖಿಲ್, ಸಿದ್ದಲಿಂಗಪ್ಪ, ಅಮೀರ್ ಸಾಬ್ ಹಾಗೂ ಇತರರು ಇದ್ದರು.





