ವಿಜಯನಗರದ ವಿಜ್ಞಾನ ಇ ಟೆಕ್ನೊ ಸ್ಕೂಲ್ನಲ್ಲಿ 7ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಜಾಹ್ನವಿ ಎನ್ (12) ತೀವ್ರ ಅಸೌಖ್ಯದಿಂದ ಮಂಗಳವಾರ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆಕೆಗೆ ಡೆಂಗಿ ಬಾಧಿಸಿರುವ ಶಂಕೆ ವ್ಯಕ್ತವಾಗಿದೆ.
“ಬಾಲಕಿ ಡೆಂಗಿಯಿಂದಲೇ ಮೃತಪಟ್ಟಿದ್ದಾಳೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಆಕೆಯ ಮನೆಯ ಸುತ್ತಮುತ್ತಲಿನ ಪರಿಸರವನ್ನು ಅಧ್ಯಯನ ಮಾಡಿ, ಡೆಂಗಿಗೆ ಕಾರಣವಾಗುವ ಸೊಳ್ಳೆಗಳು ಇವೆಯೇ ಎಂಬುದನ್ನು ದೃಢಪಡಿಸಲು ತಂಡವನ್ನು ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಸಾವಿಗೆ ನಿಖರ ಕಾರಣವನ್ನು ತಿಳಿಯುವ ವಿಶ್ವಾಸವಿದೆ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ್ ತಿಳಿಸಿದ್ದಾರೆ.
“ವಿದ್ಯಾರ್ಥಿನಿಯ ತಂದೆ ಲ್ಯಾಬ್ ಟೆಕ್ನಿಶಿಯನ್. ಮನೆಯಲ್ಲಿ ಮೊದಲಿಗೆ ಚಿಕಿತ್ಸೆ ಮಾಡಿಕೊಂಡಿದ್ದಾರೋ ಎಂಬ ಬಗ್ಗೆ ತಿಳಿಯಬೇಕಿದೆ. ವಿದ್ಯಾರ್ಥಿನಿಗೆ ಇದ್ದಕ್ಕಿದ್ದಂತೆಯೇ ತೀವ್ರ ಅಸೌಖ್ಯ ಕಾಡಿದೆ. ಆಕೆಯ ಕಾಯಿಲೆಯ ಲಕ್ಷಣ ತಿಳಿದುಬಂದರೆ ಮುಂದಿನ ಎಚ್ಚರಿಕೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಹೀಗಾಗಿ ಯಾವ ಕಾಯಿಲೆಯಿಂದ ಮೃತಪಟ್ಟಳು ಎಂಬುದನ್ನು ತಿಳಿಯುವ ಪ್ರಯತ್ನ ಮುಂದುವರೆದಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಅರಣ್ಯ ಇಲಾಖೆ ಕಾರ್ಯಾಚರಣೆ; ಬಾಲಕನನ್ನು ಕೊಂದಿದ್ದ ಹುಲಿ ಸೆರೆ
ನಗರದ ಟಿ ಟಿ ಡ್ಯಾಂ ಪ್ರದೇಶದಲ್ಲಿ ವಾಸವಿರುವ ತಿರುಮಲೇಶ್–ರೇಣುಕಾ ದಂಪತಿಯ ಪುತ್ರಿ ಜಾಹ್ನವಿ ಅವರು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಇದೇ 18ರಂದು ಏಕಾಏಕಿ ಅನಾರೋಗ್ಯಕ್ಕೀಡಾದ ಆಕೆಯನ್ನು ಮೊದಲಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತಾಗಿ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದರಿಂದ ದಾವಣಗೆರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಪ್ರತಭಾನ್ವಿತಳಾಗಿದ್ದ ಜಾಹ್ನವಿ ಅವರು ತರಗತಿಗೆ ಟಾಪರ್ ಆಗಿದ್ದರು. ಇದೀಗ ಅವರ ಸಾವಿಗೆ ಶಾಲೆ ಕಂಬನಿ ಮಿಡಿದಿದ್ದು, ಬುಧವಾರ ಮಧ್ಯಾಹ್ನದವರೆಗೆ ಶಾಲೆಗೆ ರಜೆ ನೀಡಲಾಗಿತ್ತು ಎನ್ನಲಾಗಿದೆ.





