ವಿಶ್ವ ಪಾರಂಪರಿಕ ತಾಣವಾದ ಹಂಪಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಹಂಪಿ ಉತ್ಸವಕ್ಕೆ ಸಂಪೂರ್ಣ ಸಜ್ಜಾಗಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ ವೈಭವಶಾಲಿ ಉತ್ಸವದಲ್ಲಿ ಐದು ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ, ಆರು ವಿಭಿನ್ನ ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದ್ದಾರೆ.
ಹಂಪಿಯನ್ನು ಆಗಸದಿಂದ ವೀಕ್ಷಿಸಲು ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್ ಯಾನವನ್ನು ಗುರುವಾರದಿಂದಲೇ ಆರಂಭಿಸಲಾಗಿದೆ. ಪ್ರವಾಸಿಗರಿಗೆ ಹಂಪಿಯ ವೈಭವವನ್ನು ಗಗನತಲದಿಂದ ನೋಡುವ ಅಪೂರ್ವ ಅವಕಾಶ ಸಿಕ್ಕಿದೆ. ಇದೇ ಸಂದರ್ಭದಲ್ಲಿ ‘ವಸಂತ ವೈಭವ’ ಕಲಾ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಭ್ರಮದ ಮೆರವಣಿಗೆಯಾಗಿ ಸಾಗಿತು.

‘ತುಂಗಾರತಿಯನ್ನು ಹಲವು ವಿದೇಶಿ ಪ್ರವಾಸಿಗರು ನೋಡಿ ಖುಷಿಪಟ್ಟಿದ್ದಾರೆ. ಹಂಪಿಯನ್ನು ಆಗಸದಿಂದ ನೋಡುವ ಅವಕಾಶವೂ ಸಿಕ್ಕಿದೆ. ಹಂಪಿ ಉತ್ಸವ ನಮ್ಮ ನಾಡಿನ ಶ್ರೀಮಂತ ಕಲೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಸಫಲವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಜನರನ್ನು ಸೆಳೆಯುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಉತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ, ಆಹಾರ ಮತ್ತು ಮತ್ಸ್ಯ ಮೇಳ, ಕುಸ್ತಿ ಸೇರಿದಂತೆ ಹಲವು ಸಾಹಸ ಕ್ರೀಡೆಗಳು ನಡೆಯಲಿವೆ. ಜೊತೆಗೆ ಹಂಪಿಯ ಇತಿಹಾಸದ ಕುರಿತು ಗೋಷ್ಠಿಗಳು ಹಾಗೂ ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರವಾಸಿಗರನ್ನು ಆಕರ್ಷಿಸಲಿವೆ.
ಹಂಪಿ ಉತ್ಸವವು ರಾಜ್ಯದ ಸಾಂಸ್ಕೃತಿಕ ವೈಭವವನ್ನು ದೇಶ-ವಿದೇಶಗಳ ಮುಂದೆ ಮತ್ತೊಮ್ಮೆ ಉಜ್ಜ್ವಲವಾಗಿ ಪರಿಚಯಿಸುವ ವೇದಿಕೆಯಾಗುತ್ತಿದೆ.
ಇಂದು (ಫೆ.13) ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಜಯನಗರ ಜಿಲ್ಲಾ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಸರ್ಕಾರದ ಸಚಿವರುಗಳು, ಶಾಸಕರುಗಳು ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಮನೋರಂಜನೆ:
ಫೆ.14ರಂದು ಮುಖ್ಯವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನಟ ರಾಜ್ ಬಿ.ಶೆಟ್ಟಿ, ಸಪ್ತಮಿಗೌಡ, ಝೈದ್ ಖಾನ್, ಗಿಲ್ಲಿ ಮತ್ತು ಕಾವ್ಯ ಭಾಗವಹಿಸಲಿದ್ದು, ಅರ್ಜುನ್ ಜನ್ಯ ಮತ್ತು ತಂಡ ಹಾಗೂ ನವೀನ್ ಸಜ್ಜು ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಫೆ.15ರಂದು ಇದೇ ವೇದಿಕೆಯಲ್ಲಿ ಸಂಜೆ 6 ಗಂಟೆಯಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ, ನಟಿ ರಚಿತಾರಾಮ್, ಧ್ರುವಸರ್ಜಾ ಪಾಲ್ಗೊಳ್ಳಲಿದ್ದು ರಘು ದೀಕ್ಷಿತ್ ಮತ್ತು ತಂಡ, ಮಂಗಲಿ ಮತ್ತು ತಂಡ, ಮಣಿಕಾಂತ್ ಕದ್ರಿ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉಳಿದ ವೇದಿಕೆಗಳಲ್ಲಿ ಸ್ಥಳೀಯ ಕಲಾವಿದರು ಹಾಗೂ ಟಿವಿ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ.





