ಚಿಮ್ಮಲಗಿ ಏತ ನೀರಾವರಿ ಯೋಜನೆಗಾಗಿ ಭೂಸ್ವಾಧೀನದಿಂದ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಾಲಯದ ಆದೇಶದಂತೆ ಶೀಘ್ರವೇ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಸಂಘಟನೆಯ ಕಾರ್ಯಕರ್ತರು ಕೃಷ್ಣಾ ಮೇಲ್ದಂಡೆ ಯೋಜನೆಯ ಮಹಾ ವ್ಯವಸ್ಥಾಪಕ ರಮೇಶ ಕಳಸದ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, “ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತೀರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯಿಂದ ನಷ್ಟಗೊಂಡ ರೈತರಿಗೆ ಭೂಸ್ವಾಧೀನದ ಹಣ ಹಾಗೂ ಹೆಚ್ಚುವರಿ ಕೋರ್ಟ್ ಮೂಲಕ ಆದೇಶವಾದ ಪರಿಹಾರದ ಹಣವನ್ನು ಈವರೆಗೆ ಬಿಡಗಡೆ ಮಾಡಿಲ್ಲ. ಇದು ನ್ಯಾಯಾಂಗ ನಿಂದನೆಯಾಗಿದೆ” ಎಂದಿದ್ದಾರೆ.
“ಕಳೆದ 12 ವರ್ಷಗಳಿಂದ ಚಿಮ್ಮಲಗಿ ಏತ ನೀರಾವರಿ ಯೋಜನೆ ನಡೆಯುತ್ತಿದ್ದು, ರೈತರ ಜಮೀನುಗಳಲ್ಲಿ ಕಾಮಗಾರಿ ಕೈಗೊಳ್ಳುವ ಮುಂಚೆಯೇ ಭೂಸ್ವಾಧೀನದ ನೋಟಿಸ್ ಹಾಗೂ ಪರಿಹಾರ ನೀಡಿದ ನಂತರ
ಕಾಮಗಾರಿ ಪ್ರಾರಂಭಿಸಬೇಕು ಎಂಬ ನಿಯಮವಿದೆ. ಅದರೆ, ಆ ನಿಯಮಗಳನ್ನು ಗಾಳಿಗೆ ತೂರಿ ರೈತರನ್ನು ಇಲಾಖೆಗೆ ಹಾಗೂ ಕೋರ್ಟಿಗೆ ಅಲೆದಾಡುವಂತೆ ಮಾಡಲಾಗಿದೆ” ಎಂದು ದೂರಿದ್ದಾರೆ.
“ಕಾಲಮಿತಿ ಮುಗಿದರೂ ಇಲ್ಲಿಯವರೆಗೆ ಕಾಮಗಾರಿ ಮುಗಿಸಿಲ್ಲ. ರೈತರು ಕೇಳಿದರೆ ಹಾರಿಕೆ ಉತ್ತರ ನೀಡಲಾಗುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಲ್ಲ” ಎಂದು ಆರೋಪಿಸಿದರು.
“ಕೂಡಲೇ ಎಲ್ಲ ರೈತರಿಗೂ 15 ದಿನಗಳ ಒಳಗೆ ಪರಿಹಾರ ನೀಡಿದ್ದರೆ ಇಲಾಖೆಗೆ ಬೀಗ ಜಡಿದು ಪರಿಹಾರ ನೀಡುವವರೆಗೂ ಸತ್ಯಾಗ್ರಹ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಹಕ್ಕೊತ್ತಾಯ ಪತ್ರ ಸ್ವೀಕರಿಸಿದ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹಾ ವ್ಯವಸ್ಥಾಪಕ ರಮೇಶ ಕಳಸ, “ಸರ್ಕಾರಕ್ಕೆ ಈಗಾಗಲೇ ಪರಿಹಾರ ನೀಡಲು ಅನುದಾನ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ. ಅನುದಾನ ಬಂದ ತಕ್ಷಣ ಎಲ್ಲ ಫಲಾನುಭವಿಗಳಿಗೆ ನೀಡಲಾಗುವುದು” ಎಂದರು.
ಹಕ್ಕೊತ್ತಾಯ ಸಲ್ಲಿಸುವ ವೇಳೆ ತಾಳಿಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಕಲಕೇರಿ ಹೋಬಳಿ ಅಧ್ಯಕ್ಷ ಮಹಿಬೂಬ ಬಾಷಾ ಮನಗೂಳಿ ಇದ್ದರು.




