“ಮೊದಲು ಹೆಚ್ಚಾಗಿ ವೃದ್ಧಾಪ್ಯದಲ್ಲಿ ಕಂಡುಬರುತ್ತಿದ್ದ ನಾನಾಕ್ಯಾನ್ಸರ್ ಗಳು ಇಂದು ಯುವಕರಲ್ಲಿ ಕಾಣುತ್ತಿವೆ. ಕಾರಣ ತಂಬಾಕು, ಗುಟ್ಕಾ ಹಾಗೂ ಶರಾಬು ಸೇವನೆಯಂಥ ದುಶ್ಚಟಗಳು ಇದಕ್ಕೆ ಕಾರಣವಾಗಿವೆ. ಜೊತೆಯಾಗಿ ಊಟ ಮಾಡುವುದರಿಂದ ಮತ್ತು ಕೈಕುಲುಕುವುದರಿಂದ ಈ ಕಾಯಿಲೆ ಹರಡುವುದಿಲ್ಲ” ಎಂದು ಬಿ.ಎಲ್.ಡಿ.ಇ ಡೀಮ್ಡ್ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಹೇಳಿದರು.
ವಿಜಯಪುರ ಪಟ್ಟಣದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆ ವಿಭಾಗ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಆಯೋಜಿಸಿದ್ದ ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಮತ್ತು ಜಾಗೃತಿ ಅಭಿಯಾನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
“ಶರೀರದ ಯಾವುದೇ ಭಾಗದಲ್ಲಿ ಶೀಘ್ರವಾಗಿ ಬೆಳೆಯುವ ನೋವಿಲ್ಲದ ಗಂಟುಗಳು, ನಿಯಂತ್ರಣವಿಲ್ಲದ ರಕ್ತಸ್ರಾವ, ಕಾರಣವಿಲ್ಲದೆ ಹಸಿವು ಮತ್ತು ಶರೀರದ ತೂಕ ಕಡಿಮೆಯಾಗುವುದು ಕ್ಯಾನ್ಸರ್ ರೋಗದ ಪ್ರಮುಖ ಲಕ್ಷಣಗಳಾಗಿರಬಹುದು. ಕ್ಯಾನ್ಸರ್ ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ, ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಮುಖರಾಗಬಹುದು” ಎಂದು ತಿಳಿಸಿದರು.
ಬಿ.ಎಲ್.ಡಿ.ಇ. ಆಸ್ಪತ್ರೆಯಲ್ಲಿ ವಿವಿಧ ಕ್ಯಾನ್ಸರ್ ಸಂಬಂಧಿತ ರೋಗಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡಲು ತಜ್ಞ ವೈದ್ಯರ ಜೊತೆಗೆ ವಿಶ್ವ ದರ್ಜೆಯ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದೆ. ವಿಜಯಪುರ ಮತ್ತು ನೆರೆಯ ಜಿಲ್ಲೆಗಳ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ನಿರ್ಮಾಣ ಹಂತದಲ್ಲಿರುವ, ಪೂರ್ಣ ಪ್ರಮಾಣದ ಸುಸಜ್ಜಿತ ಬಿ.ಎಲ್.ಡಿ.ಇ. ಕ್ಯಾನ್ಸರ್ ಆಸ್ಪತ್ರೆ ಶೀಘ್ರದಲ್ಲಿ ತಲೆಎತ್ತಲಿದೆ” ಎಂದು ಅವರು ಹೇಳಿದರು.
ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ. ರಮಾಕಾಂತ ಬಳೂರಕರ ಮಾತನಾಡಿ, “ಕ್ಯಾನ್ಸರ್ ರೋಗವು ದುಶ್ಚಟಗಳಿಂದ ಅಷ್ಟೇ ಅಲ್ಲದೆ ಅನುವಂಶಿಕವಾಗಿ ಮತ್ತು ಕೆಲವು ವೈರಸ್ ಸೋಂಕುಗಲಿಂದಲೂ ಬರಬಹುದು. ಇಂಥ ಸಂದರ್ಭಲ್ಲಿ ಕ್ಯಾನ್ಸರ್ ಸ್ಕ್ರೀನಿಂಗ್ ತಪಾಸಣೆಯಿಂದ ರೋಗಲಕ್ಷಣಗಳು ಕಾಣುವ ಪೂರ್ವದಲ್ಲಿಯೇ ರೋಗವನ್ನು ಕಂಡುಹಿಡಿದು ಗುಣಪಡಿಸಬಹುದಾಗಿದೆ” ಎಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಘ ವಿಜಯಪುರದ ಅಧ್ಯಕ್ಷ ಡಾ. ಗಿರೀಶ ಕುಲ್ಲೊಳ್ಳಿ ಮಾತನಾಡಿ, “ಕ್ಯಾನ್ಸರ್ ರೋಗವು ಮಾರಣಾಂತಿಕ ಕಾಯಿಲೆಯಾಗಿದ್ದು ಇದರ ಭಯ ಬೇಡ, ಎಚ್ಚರವಿರಲಿ” ಎಂದು ಹೇಳಿದರು.
ಈ ಸಪ್ತಾಹ ಶಿಬಿರದಲ್ಲಿ ಸುಮಾರು 350ಕ್ಕೂ ಹೆಚ್ಚು ರೋಗಿಗಳು ತಪಾಸಣೆ ಮಾಡಿಸಿಕೊಂಡರು. ಅಗತ್ಯವಿರುವ ರೋಗಿಗಳು ವಿಶೇಷ ತಪಾಸಣೆಗಳಾದ ಮೆಮೊಗ್ರಾಫಿ, ಸೂಜಿ ತಪಾಸಣೆ (FNAC), ಬಯಾಪ್ಸಿ, ಸ್ಕ್ಯಾನಿಂಗ್ಗಳಿಗೆ ಒಳಪಟ್ಟು ಸೂಕ್ತ ಚಿಕಿತ್ಸೆಯನ್ನು ಪಡೆದರು. ಪ್ರತಿದಿನ ತಜ್ಞ ವೈದ್ಯರು ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಎಸ್ಐಆರ್ ಕುರಿತ ಕಾಂಗ್ರೆಸ್ ಮೌನ ಅಪಾಯಕಾರಿ: ಎಸ್ಡಿಪಿಐನ ಅಬ್ದುಲ್ ಹನ್ನಾನ್
ಕ್ಯಾನ್ಸರ್ ಜಾಗೃತಿ ಅಭಿಯಾನ ಸಪ್ತಾಹದ ಅಂಗವಾಗಿ ಕ್ಯಾನ್ಸರ್ ತಜ್ಞರಾದ ಡಾ. ಸಂಜೀವ ರಾಠೋಡ ಮತ್ತು ಡಾ. ರಾಜಶ್ರೀ ಯಲಿವಾಳ ಅವರು ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಫೆಬ್ರವರಿ 4 ರಂದು ಕ್ಯಾನ್ಸರ್ ಜಾಗೃತಿ ಕುರಿತು ಉಪನ್ಯಾಸ ನೀಡಿದರು. ಮತ್ತೋರ್ವ ಕ್ಯಾನ್ಸರ್ ತಜ್ಞರಾದ ಡಾ.ಶೈಲೇಶ.ಕನ್ನೂರ ಅಂದೇ, ಬಿ.ಎಲ್.ಡಿ.ಇ. ಎಫ್.ಎಂ. ರೇಡಿಯೋ ಬಾನುಲಿಯಲ್ಲಿ ಕ್ಯಾನ್ಸರ್ ಜಾಗೃತಿಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಡಾ. ಎಂ. ಬಿ. ಪಾಟೀಲ, ಡಾ. ವಿಕ್ರಂ ಸಿಂದಗಿಕರ, ಡಾ. ದಯಾನಂದ ಬಿರಾದಾರ, ಡಾ. ನಾಗರಾಜ ಬಿರಾದಾರ, ಡಾ. ಭುವನೇಶ್ವರಿ, ಡಾ. ಪ್ರೀತಿ ಮಾಲಪುರೆ, ಐಎಂಎ ಕಾರ್ಯದರ್ಶಿ ಡಾ. ವಿಜಯ ಪಾಟೀಲ ಮತ್ತು ಕಿರಿಯ ವೈದ್ಯರು ಉಪಸ್ಥಿತರಿದ್ದರು.





