ಸುದೀರ್ಘ 45 ವರ್ಷಗಳ ರಾಜಕೀಯ ಅನುಭವ ಹಾಗೂ ಹಿರಿತನದ ಆಧಾರದ ಮೇಲೆ ಸೂಕ್ತವಾದ ಸ್ಥಾನ ಮಾನ ನೀಡಿ ಗೌರವಿಸಬೇಕು ಎಂದು ಶಾಸಕ, ಕರ್ನಾಟಕ ಮಾರ್ಜಕ ಮತ್ತು ಸಾಬೂನು ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ ಮನವಿ ಮಾಡಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಚುನಾವಣಾ ಪ್ರಚಾರದಲ್ಲಿ ನಮ್ಮ ಮತಕ್ಷೇತ್ರದ ಜನರಿಗೆ ಕಾಂಗ್ರೆಸ್ ವರಿಷ್ಠರು ಹಾಗೂ ಸಿಎಂ ಸಿದ್ದರಾಮಯ್ಯ ಮಾತು ಕೊಟ್ಟಿದ್ದರು. ಪ್ರಾರಂಭದಲ್ಲೂ ಅವಕಾಶ ಕೊಡಲಿಲ್ಲ. ಸದ್ಯ ಈ ಎರಡನೇ ಅವಧಿಯ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡಬೇಕೆಂದು ಮತಕ್ಷೇತ್ರದ ಜನರ ಒತ್ತಾಯದ ಕೂಗೂ ಕೇಳಿ ಬರುತ್ತಿದೆ. ಇಲ್ಲದಿದ್ದರೆ ಪಕ್ಷದ ಮೇಲೆ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಆಗ ಪಕ್ಷವು ಮುಜುಗರಕ್ಕೀಡಾಗಬೇಕಾಗುತ್ತದೆ” ಎಂದು ತಿಳಿಸಿದರು.
“ನಮ್ಮ ಮತ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಪೂರಕ ಕಾಮಗಾರಿಗಳು ಬಾಕಿ ಉಳಿದಿದ್ದು, ನಮ್ಮ ಸರ್ಕಾರ ಬಂದರೆ ಈಡೇರಿಸುವುದಾಗಿ ಜನರಲ್ಲಿ ಭರವಸೆ ನೀಡಿದ್ದೇವೆ. ಸದ್ಯ ಅದು ಸಾಧ್ಯವಾಗುತ್ತಿಲ್ಲ. ಒಂದು ಮತಕ್ಷೇತ್ರ ಅಭಿವೃದ್ದಿ ಆಗಬೇಕೆಂದರೆ ಮಂತ್ರಿಯಾಗಿದ್ದರೆ ಮಾತ್ರ ಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಚಿವ ಸ್ಥಾನದ
ಆಕಾಂಕ್ಷಿಯಾಗಿದ್ದೇನೆ. ಜಾತಿ ಸಮೀಕ್ಷೆ ಆಧಾರದ ಮೇಲೆ ಲಿಂಗಾಯತ ರೆಡ್ಡಿ ಹಾಗೂ ಲಿಂಗಾಯತ ಕೋಟಾದಡಿಯಲ್ಲಿ ನನ್ನನ್ನು ಮಂತ್ರಿ ಮಾಡಬೇಕೆಂದು ಒತ್ತಾಯಿಸುತ್ತೇನೆ” ಎಂದರು.
ಇದನ್ನೂ ಓದಿ: ವಿಜಯಪುರ | ಕರ್ನಾಟಕ ರಾಜ್ಯೋತ್ಸವ: ಸಚಿವ ಎಂ ಬಿ ಪಾಟೀಲರಿಂದ ಧ್ವಜಾರೋಹಣ
ಕೈಯಾಗ ಕಂಕಣ ಕಟ್ಟಿಕೊಂಡ ಮೇಲೆ ಏತಕ್ಕಾಗಿ ಕಟ್ಟಿಕೊಂಡಿದ್ದಾರೆ ಅಂತ ಎಲ್ಲರಿಗೂ ಗೊತ್ತಾಗುತ್ತದೆ. ಈಗಾಗಲೇ ನಾವು ಕೈಯಾಗ ಕಂಕಣ ಕಟ್ಟಿಕೊಂಡಿದ್ದೇವೆ. ಯಾರಿಗಾದರೂ ಉನ್ನತ ಮಟ್ಟದ ಭವಿಷ್ಯ ಬೇಕೆನ್ನುವುದು ಮನಸ್ಸಿನಲ್ಲಿರುತ್ತದೆ. ನಾನು ಲಿಂಗಾಯತರಲ್ಲಿರುವಂತಹ ಒಳಪಂಗಡದ ಕೋಟಾದಲ್ಲಿ ಕೇಳುತ್ತೇನೆ. ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯಂತ ಹಿರಿಯ ಶಾಸಕನಾಗಿದ್ದು, ಈ ಬಾರಿ ನನಗೊಂದು ಅವಕಾಶ ಕೊಡಬೇಕೆಂದು ಕೇಳುತ್ತೇನೆ, ನಾಳೆಯೂ ಕೇಳುತ್ತೇನೆ ಎಂದರು.





