ರಾಜ್ಯದ ದುಡಿಯುವ ಜನರಿಗೆ ಅದರಲ್ಲೂ ಬಗರ್ ಹುಕುಂ ಸಾಗುವಳಿದಾರರ ಭೂಮಿಯ ಹಕ್ಕುಪತ್ರಕ್ಕೆ ಆಗ್ರಹಿಸಿ ನ.26 ಮತ್ತು 27ರಂದು ʼಬೆಂಗಳೂರು ಚಲೋʼ ಎಂಬ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಮುಖಂಡ ಕುಮಾರ್ ಸಮತಳ ಹೇಳಿದರು.
ವಿಜಯಪುರ ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗೆ ಪರಿಹಾರವಾಗಿ ಒನ್ ಟೈಮ್ ಸೆಟಲ್ಮೆಂಟ್ ಜಾರಿ ಮಾಡುವ ಮೂಲಕ ಭೂಮಿ ಹಕ್ಕು ಮಾನ್ಯ ಮಾಡಬೇಕು. ಸಮಗ್ರ ಮೇಘ ವಸತಿ ಯೋಜನೆ ಘೋಷಣೆ ಆಗಬೇಕು. ಅರಣ್ಯ ಕಾಯ್ದೆಯಡಿ ಅರಣ್ಯ ವಾಸಿಗಳಿಗೂ ನ್ಯಾಯ ಬದ್ಧ ಹಕ್ಕು ಸಿಗಬೇಕು. ಬಲವಂತದ ಹಾಗೂ ಫಲವತ್ತಾದ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಗಳು ರದ್ದಾಗಲಿ. ಬಲಾಢ್ಯರ ಪರವಾದ ಭೂ ತಿದ್ದುಪಡಿ ಕಾಯ್ದೆ 2022 ರದ್ದಾಗಬೇಕು” ಆಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯ ಮರಿಯಪ್ಪ ಮಾತನಾಡಿ, “ಉಳುಮೆಗೆ ಮಾತ್ರವಲ್ಲ ನೆತ್ತಿಯ ಮೇಲೊಂದು ಸೂರೂ ಇಲ್ಲವಾಗಿದೆ. ಸತ್ತ ಮೇಲೂ ಹೂಳಲು ಪರದಾಡುವ ಪರಿಸ್ಥಿತಿ ಇದೆ. ಭೂಮಿಯೆಲ್ಲಾ ಬಲಾಢ್ಯರ, ಕಂಪನಿಗಳ ಕೈಯಲ್ಲಿದೆ. ಆದರೂ ಅವರ ತಣಿಯದ ದಾಹಕ್ಕಾಗಿ ಭೂ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಯೇತರರೂ ಮನಸೋ ಇಚ್ಛೆ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ಅಭಿವೃದ್ಧಿಯ ಹೆರಿನಲ್ಲಿ ರೈತರ ಬಳಿ ಇದ್ದಬದ್ದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಬಡವರ ಪರ ಆಡಳಿತ ನೀಡುತ್ತೇವೆಂದು ಬಂದ ರಾಜ್ಯದ ಕಾಂಗ್ರೆಸ್ ಸರಕಾರ ಸಹ ಇದೇ ಹಾದಿಯಲ್ಲಿ ನಡೆಯುತ್ತಿದೆ. ‘ಬಾಯಲ್ಲಿ ಬಡವರ ಪರ ಮನದಲ್ಲಿ ಬಲಾಡ್ಯರು’ ಎಂಬಂತೆ ನಡೆದುಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯಪುರ | ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ವಿರೋಧಿಸಿ ರಂಗೋಲಿ ಚಳವಳಿ
ಭುವನೇಶ್ವರಿ ಕಾಂಬಳೆ ಮಾತನಾಡಿ,” ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಆದಿವಾಸಿಗಳನ್ನೂ ಬಿಡದೆ ಬೀದಿಗೆ ತಳ್ಳುತ್ತಾ ಲಕ್ಷಾಂತರ ಎಕರೆ ಭೂಮಿಗಳನ್ನು ದೇಶದ ಅತ್ಯಂತ ಲೂಟಿಕೋರ ಅಂಬಾನಿ-ಅದಾನಿಗಳಿಗೆ ಮತ್ತು ವಿದೇಶಿ ಕಂಪನಿಗಳಿಗೆ ಗಣಿಗಾರಿಕೆ ಮಾಡಲು ಅನುವು ಮಾಡಿಕೊಡುವ ಮೂಲಕ ಬಕಾಸುರನ ಪಾತ್ರ ವಹಿಸುತ್ತಿದೆ. ದೇಶಪ್ರೇಮದ ಹೆಸರಲ್ಲಿ ವಿದೇಶಿಗರ ಸೇವೆಯಲ್ಲಿ ನಿರತವಾಗಿದೆ ಮೋದಿ ನೇತೃತ್ವದ ಸರಕಾರ. ರಾಜ್ಯದ ದುಡಿಯುವ ಜನರಿಗೆ ಅದರಲ್ಲೂ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿಯ ಹಕ್ಕುಪತ್ರ ನೀಡಲು ಭೂಮಿ ಮಂಜೂರಾತಿ ಸಮಿತಿಗಳನ್ನು ಸರ್ಕಾರ ರಚಿಸಿದ್ದರೂ ಕಾಲಕಾಲಕ್ಕೆ ಸರಿಯಾಗಿ ಸಭೆಗಳಾಗದೆ, ಮಂಜೂರಾತಿಯೂ ಆಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಭೂಮಿ ಮತ್ತು ವಸತಿ ವಂಚಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಚನ್ನು ಕಟ್ಟಿಮನಿ, ಚಿದಾನಂದ ಇದ್ದರು.





