ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಉಗ್ರವಾದಿ ತಾಲಿಬಾನ್ ಸಂಘಟನೆಗೆ ಹೋಲಿಸಿರುವುದು ಅಕ್ಷಮ್ಯ ಅಪರಾಧ ಕನ್ನೇರಿ ಸ್ವಾಮೀಜಿಯ ಈ ಹೇಳಿಕೆಯು ಅತ್ಯಂತ ಖಂಡನೀಯ. ಹಾಗಾಗಿ ಅವರು ರಾಜ್ಯ ಪ್ರವೇಶಿಸುವುದನ್ನು ನಿರ್ಬಂಧಿಸಬೇಕು ಎಂದು ರಾಷ್ಟ್ರೀಯ ಬಸವ ಸೇನೆಯ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ.
ಈ ಕುರುತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ್ದ ಮಠಾಧೀಶರ ಕುರಿತು ಕನ್ನೇರಿ ಸ್ವಾಮೀಜಿ ಅಶ್ಲೀಲವಾಗಿ ಅವಾಚ್ಯವಾಗಿ ನಿಂದಿಸಿದ್ದರು. ವಿಜಯಪುರ ಜಿಲ್ಲಾಧಿಕಾರಿಗಳು ಆಗ ಅವರನ್ನು ಎರಡು ತಿಂಗಳ ಕಾಲ ವಿಜಯಪುರ ಪ್ರವೇಶಿಸಿದಂತೆ ನಿಷೇಧ ಹೇರಿದ್ದರು. ಸುಪ್ರೀಂ ಕೋರ್ಟ್ ವಿಜಯಪುರ ಜಿಲ್ಲಾಧಿಕಾರಿಗಳ ಆದೇಶ ಎತ್ತಿ ಹಿಡಿದು ಕನ್ನೇರಿ ಶ್ರೀಗೆ ನೀವು ಒಳ್ಳೆಯ ಪ್ರಜೆಯಲ್ಲ ಎಂದು ಛೀಮಾರಿ ಹಾಕಿತ್ತು. ಆದರೂ ಕಿಂಚಿತ್ತೂ ಬುದ್ದಿ ಕಲಿಯದ ಸ್ವಾಮೀಜಿ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯಪುರ | ನಾವು ಬೇಡ ಅಂದ್ರೂ ಸರ್ಕಾರ ಉಳಿಯುತ್ತೆ: ಸಚಿವ ಶಿವನಾಂದ ಪಾಟೀಲ
ಸರ್ಕಾರವು ಕನ್ನೇರಿ ಶ್ರೀ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣಗೆ ಒಳಪಡಿಸಬೇಕು. ಕರ್ನಾಟಕ ಪ್ರವೇಶಿಸಿದಂತೆ ಶಾಶ್ವತ ನಿರ್ಬಂಧ ವಿಧಿಸಬೇಕು. ಇಲ್ಲವಾದಲ್ಲಿ ಬಸವಪರ ಸಂಘಟನೆಗಳೆಲ್ಲ ಸೇರಿ ಬೀದಿಗಿಳಿದು ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿಕುಮಾರ ಬಿರಾದಾರ, ಶಾಂತವಿರ ಥಾಲಭಾವಡಿ, ನಿಂಗಪ್ಪ ಸಂಗಾಪುರ, ವಿರಾತಿಶಾನಂದ ಶ್ರೀಗಳು, ಮಾತೋಶ್ರೀ ಚಂದ್ರಕಲಾ ಪಾಟೀಲ, ಗುಣದಾಳ, ಪ್ರದೀಪ್ ತೋರವಿ, ಪ್ರಭುಗೌಡ ಪಾಟೀಲ ಹೇಳಿದ್ದಾರೆ.





