ವಿಜಯಪುರ ಜಿಲ್ಲೆ ಕಡಣಿಯ ಬೆರಗು ಪ್ರಕಾಶನ ಸಂಸ್ಥೆ ಕೊಡಮಾಡುವ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ.
2025ನೇ ಸಾಲಿನ ಪ್ರೊ. ಎಚ್ ಟಿ ಪೋತೆ ಹಸ್ತಪ್ರತಿ ಪ್ರಶಸ್ತಿಗೆ ಸಿಂದಗಿ ದೇವೂ ಮಾಕೊಂಡ ಅವರ ʼಯುದ್ಧ ಮೃದಂಗʼ ಅನುವಾದಿತ ಸಂಕಲನದ ಹಸ್ತಪ್ರತಿ ಆಯ್ಕೆಯಾಗಿದೆ. ಪ್ರೊ. ಎಚ್ ಟಿ ಪೋತೆ ಸೃಜನಶೀಲ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಡಾ. ಪದ್ಮಿನಿ ನಾಗರಾಜು ಅವರ ʼಸಮುದ್ರದ ಕೆರೆಯ ಸರಿಸಿʼ ಕಥಾ ಸಂಕಲನ ಹಾಗೂ ವಿಜಯಪುರದ ಡಾ. ಸುಜಾತ ಚಲವಾದಿ ಅವರ ʼಲಚಮವ್ವ ಮತ್ತು ಇತರ ಕಥೆಗಳುʼ 2024ರ ಕೃತಿಗಳು ಆಯ್ಕೆಯಾಗಿವೆ. ದಿ.ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ 2024ರ ಸಾಲಿನ ಸೃಜನೇತರ ವಿಭಾಗದ ಪುಸ್ತಕ ಪ್ರಶಸ್ತಿಗೆ ಬಾಗಲಕೋಟೆಯ ಮಹಾದೇವ ಬಸರಕೋಡ ಅವರ ʼಸುರಧೇನುʼ ಮತ್ತು ತುಮಕೂರಿನ ಅನಂತ ಕುಣಿಗಲ್ ಅವರ ‘ಅಪ್ಪನ ಆಟೋಗ್ರಾಫ್’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬೆರಗು ಪ್ರಕಾಶಾನ ಸಂಸ್ಥೆಯ ವಿಜಯಲಕ್ಷ್ಮಿ ಆರ್ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬೆರಗು ಪ್ರಕಾಶನವು ಕಳೆದ 6 ವರ್ಷಗಳಿಂದಲೂ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದು, ಪ್ರಸಕ್ತ ವರ್ಷದ ಪ್ರಶಸ್ತಿಗೆ 118 ಪುಸ್ತಕಗಳು, ಹಾಗೂ ಹಸ್ತಪ್ರತಿ ಸ್ಪರ್ಧೆಗೆ 57 ಹಸ್ತಪ್ರತಿಗಳು ನಾಡಿನ ವಿವಿಧ ಬಾಗಗಳಿಂದ ಮತ್ತು ಮಹಾರಾಷ್ಟ್ರ, ಕೇರಳ ಹಾಗೂ ಇತರೆ ರಾಜ್ಯಗಳಿಂದ ಬಂದಿದ್ದವು. ಖ್ಯಾತ ಕವಿ, ಕತೆಗಾರ ವಾಸುದೇವ ನಾಡಿಗ ಹಾಗೂ ವಿಜಯಪುರದ ಸಾಹಿತಿ ಶಂಕರ ಬೈಚಬಾಳ ಅವರು ತೀರ್ಪುಗರರಾಗಿ ಕಾರ್ಯನಿರ್ವಾಹಿಸಿದ್ದರು.



ಇದನ್ನೂ ಓದಿ: ವಿಜಯಪುರ | ಮಹಿಳೆ ಆತ್ಮರಕ್ಷಣೆ ಕಲೆ ಕಲಿಯುವುದು ಅನಿವಾರ್ಯ: ಪ್ರೊ. ನಾಮದೇವಗೌಡ
ಹಸ್ತಪ್ರತಿ ಪ್ರಶಸ್ತಿಯು ಹತ್ತು ಸಾವಿರ ರೂ ನಗದು, ಪ್ರಶಸ್ತಿಫಲಕ ಹಾಗೂ ಸ್ಮರಣಿಕೆಯೊಳಗೊಂದಿದ್ದು, ಬೆರಗು ಪ್ರಕಾಶನವು ಹಸ್ತಪ್ರತಿಯನ್ನು ಪ್ರಕಟಿಸುವ ಮೂಲಕ ಗೌರವಿಸಲಿದೆ ಹಾಗೂ ಪುಸ್ತಕ ಪ್ರಶಸ್ತಿ ಐದು ಸಾವಿರ ನಗದು, ಪ್ರಶಸ್ತಿಫಲಕ ಹಾಗೂ ಸ್ಮರಣಿಕೆ ಒಳಗೊಂಡಿದ್ದು, ಜನವರಿ 2026ರ ಮೊದಲ ವಾರ ಕಡಣಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.





