ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದಲ್ಲಿ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ 17 ವರ್ಷದ ಯುವತಿಯ ಶವ ಪತ್ತೆಯಾಗಿದ್ದ ಘಟನೆಯನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ವಿಜಯಪುರ ನಗರದ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ಎಐಎಮ್ಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ ಮಾತನಾಡಿ, “ದೇಶದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ನಮ್ಮ ಜಿಲ್ಲೆಯೂ ಹೊರತಾಗಿಲ್ಲ. ಇಂದು ಮಾಧ್ಯಮಗಳು ಹೆಣ್ಣು ಮಕ್ಕಳನ್ನು ಭೋಗದವಸ್ತು ಎಂಬಂತೆ ಚಿತ್ರಿಸುತ್ತಿವೆ. ವೆಬ್ಸೈಟ್ಗಳಲ್ಲಿ ಅಶ್ಲೀಲತೆ ಪ್ರಚಾರ ಮಾಡುತ್ತಿವೆ. ಇದರಿಂದಾಗಿ ಸಮಾಜ ಸಾಂಸ್ಕೃತಿಕ ಅಧಃಪತನದತ್ತ ಸಾಗುತ್ತಿದೆ. ಇತ್ತೀಚೆಗೆ ಐದು ವರ್ಷದ ಹಸುಳೆ ತನ್ನ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಅದರಂತೆ ದಸರಾ ಸಂದರ್ಭದಲ್ಲಿ ಬಲೂನ್ ಮಾರುವ ಅಪ್ರಾಪ್ತ ಮಗುವಿನ ಮೇಲೆ ದೌರ್ಜನ್ಯವೆಸಗಿದ ಭೀಕರ ಘಟನೆಯ ಆಘಾತ ಇನ್ನೂ ನಾಡಿನ ಜನತೆ ಮರೆತಿಲ್ಲ. ಹೀಗಿರುವಾಗಲೇ ಅಂತಹುದೇ ಘಟನೆ ಮರುಕಳಿಸಿದೆ”
“ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದಲ್ಲಿ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ 17 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಆಕೆಯನ್ನು ಅಪಹರಿಸಿ 12 ತಾಸುಗಳ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾದ ಈ ಘಟನೆ ಬಗ್ಗೆ ಸೂಕ್ತವಾದ /ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮನವಿ
ಪ್ರತಿಭಟನೆಯನ್ನು ಉದ್ದೇಶಿಸಿ ಎಐಎಮ್ಎಸ್ಎಸ್ನ ಜಿಲ್ಲಾ ಅಧ್ಯಕ್ಷೆ ಗೀತಾ ಎಚ್ ಹಾಗೂ ಮೀನಾಕ್ಷಿ ಸಿಂಘ, ನೀಲಾಂಬಿಕೆ, ಶಶಿಕಲಾ ಮಾತನಾಡಿ ಜಿಲ್ಲೆಯ ಎಲ್ಲಾ ಪ್ರಜ್ಞಾವಂತರು ಇದನ್ನು ಖಂಡಿಸಬೇಕು ಎಂದು ಕರೆ ನೀಡಿದರು.
ಅಮೂಲ್ಯ, ಸುಪ್ರೀತಾ ಚಲವಾದಿ, ಐಶ್ವರ್ಯ ಜಾದವ, ಭಾಗ್ಯಲಕ್ಷ್ಮೀ, ನೀಲಾಂಬಿಕಾ,,ಲಕ್ಷ್ಮೀ ಮುಂತಾದವರು ಭಾಗವಹಿಸಿದ್ದರು.





