ಇಂದಿನ ಯುಗದಲ್ಲಿ ತೆರಿಗೆ ಸಲ್ಲಿಕೆ ಮತ್ತು ಶೇರು ಮಾರುಕಟ್ಟೆ ವ್ಯಾಪಾರ ಕೌಶಲ್ಯಗಳೆರಡೂ ವ್ಯಕ್ತಿಯ ಹಣಕಾಸು ಸಾಮರ್ಥ್ಯವನ್ನು ನಿರ್ಧರಿಸುವ ಪ್ರಮುಖ ಸಾಧನಗಳಾಗಿವೆ ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಅಭಿಪ್ರಾಯಪಟ್ಟರು.
ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ವಾಣಿಜ್ಯ ಹಾಗೂ ವ್ಯವಹಾರ ಅಧ್ಯಯನ ವಿಭಾಗ ಆಯೋಜಿಸಿದ್ದ ʼಹಣಕಾಸು ಸಾಮರ್ಥ್ಯ ನಿರ್ಮಾಣ: ತೆರಿಗೆ ಸಲ್ಲಿಕೆ ಮತ್ತು ಷೇರು ಮಾರುಕಟ್ಟೆ ವ್ಯಾಪಾರಗಳ ಕೌಶಲ್ಯʼ ವಿಷಯ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉದ್ಯಮ, ಹಣಕಾಸು ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಉದ್ಯೋಗೋಚಿತ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಅಲ್ಲದೇ ಇಂತಹ ಕೌಶಲ್ಯಗಳು ಭವಿಷ್ಯದ ವೃತ್ತಿಜೀವನದಲ್ಲಿ ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯನ್ನು ಹೆಚ್ಚಿಸುತ್ತವೆ” ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ನಾಗರಬಾವಿಯ ಕೆಎಲ್ಇ ಸೊಸೈಟಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಆರ್ ಮದನ್ ಕುಮಾರ್ ಮಾತನಾಡಿ, “ಸ್ಟಾಕ್ ಮಾರ್ಕೆಟ್ನ ಮೂಲಭೂತ ತತ್ವಗಳು, ಹೂಡಿಕೆಯ ಆಯಾಮಗಳು, ಡಿಜಿಟಲ್ ಹೂಡಿಕೆ ವೇದಿಕೆಗಳು ಹಾಗೂ ವಿದ್ಯಾರ್ಥಿಗಳು ಅನುಸರಿಸಬೇಕಾದ ಸುರಕ್ಷಿತ ಹೂಡಿಕೆ ಕ್ರಮಗಳನ್ನು ತಿಳಿದುಕೊಂಡು ಮುಂದುವರೆಯುವುದು ಸೂಕ್ತ” ಎಂದರು.
ಇದನ್ನೂ ಓದಿ: ವಿಜಯಪುರ | ಕನ್ನೇರಿ ಶ್ರೀ ವಿರುದ್ಧ ಕಠಿಣ ಕ್ರಮಕ್ಕೆ ದಸಂಸ ಆಗ್ರಹ
ಬೆಂಗಳೂರಿನ ಸ್ಟಾಕ್ ಮಾರ್ಕೆಟ್ ಇನ್ಸ್ಟಿಟ್ಯೂಟ್ ತರಬೇತುದಾರರು ಡಾ.ದರ್ಶನ್ ಎಸ್ ಅವರು, ವೈಯಕ್ತಿಕ ಹಣಕಾಸು ನಿರ್ವಹಣೆ, ತೆರಿಗೆ ದಾಖಲಾತಿಗಳ ಅವಶ್ಯಕತೆ, ಆದಾಯ ತೆರಿಗೆ ವರದಿ ಸಲ್ಲಿಕೆ ವಿಧಾನಗಳು ಹಾಗೂ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಹಣಕಾಸು ಜ್ಞಾನ ಕುರಿತು ಪ್ರಾಯೋಗಿಕ ಉದಾಹರಣೆಗಳ ಮೂಲಕ ವಿವರಿಸಿದರು.
ಕಾರ್ಯಾಗಾರದಲ್ಲಿ ಕಾರ್ಯಕ್ರಮ ಸಂಯೋಜಕಿ ಪ್ರೊ ಅನಿತಾ ಆರ್ ನಾಟಿಕರ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು, ಸಂಶೋಧನಾರ್ಥಿಗಳು, ಉಪನ್ಯಾಸಕರು ಭೋದಕ ವರ್ಗ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.





