ದೇವರು ಕೆಲ ಮಕ್ಕಳನ್ನು ಆಯ್ಕೆ ಮಾಡಿ ಕಲಾವಿದರನ್ನಾಗಿ ಸೃಷ್ಟಿಸುತ್ತಾನೆ. ಅಂತಹ ಮಕ್ಕಳು ಕುಂಚವನ್ನೇ ಹಿಡಿದು ಜೀವನ ರೂಪಿಸಿಕೊಳ್ಳಬೇಕು. ಅಂತವರು ಸಮಾಜದ ಸಂಪನ್ಮೂಲ ವ್ಯಕ್ತಿಯಾಗಿ ಬೆಳೆಯಬಲ್ಲರು ಎಂದು ವಿಜಯಪುರ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸವರಾಜ ಗವಿಮಠ ಹೇಳಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮೊಮದಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬೆಂಗಳೂರಿನ ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ವಿಜಯಪುರದ ರಾಜರಾಜೇಶ್ವರಿ ಮಹಿಳಾ ಕಲಾ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ʼಕಲರವʼ- ಮಕ್ಕಳಿಗಾಗಿ ತರಬೇತಿ ಕಾರ್ಯ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ಕಲಾವಿದ ಮಲ್ಲಿಕಾರ್ಜುನ ಕನ್ನೂರ ಮಾತನಾಡಿ, “ಚಿತ್ರಕಲೆ ಎಲ್ಲಾ ಭಾಷೆಯ ತಾಯಿ ಭಾಷೆಯಾಗಿದೆ. ಮಕ್ಕಳು ಚಿತ್ರಗಳ ಮೂಲಕವೇ ಅಕ್ಷರ ಅಭ್ಯಾಸವನ್ನು ಪ್ರಾರಂಭಿಸಬೇಕು. ಎಲ್ಲಾ ಶಾಲೆಗಳಲ್ಲಿಯೂ ಚಿತ್ರಕಲಾ ಶಿಕ್ಷಕರು ಇರುವುದು ಬಹಳ ಮುಖ್ಯ. ಗ್ರಾಮೀಣ ಪ್ರದೇಶದ ಮಕ್ಕಳು ದೂರದೂರಿನಲ್ಲಿ ನಡೆಯುವ ಚಿತ್ರಕಲಾ ಪ್ರದರ್ಶನಗಳನ್ನು ನೋಡಲು ಆಗುವುದಿಲ್ಲ. 800 ವಿದ್ಯಾರ್ಥಿ ಸಮೂಹ ಹೊಂದಿರುವ ಶಾಲೆಗೆ ಅಕಾಡೆಮಿಯವರು ಕಲಾಕೃತಿಗಳನ್ನು ಪ್ರದರ್ಶನಕ್ಕಾಗಿ ಇಲ್ಲಿಗೆ ಕಳಿಸಿರುವುದು ಸಂತಸದ” ಸಂಗತಿ ಎಂದರು.
ಸಂಪನ್ಮೂಲ ವ್ಯಕ್ತಿ ರಮೇಶ ಸಾಸನೂರ ಮಾತನಾಡಿ, “ಪ್ರತಿಭೆ ಹುಟ್ಟುವುದು ಗ್ರಾಮೀಣ ಪ್ರದೇಶದಲ್ಲಿಯೇ. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಮುಂದೆ ದೊಡ್ಡ ಕಲಾವಿದರಾಗಿ ಹೊರಹೊಮ್ಮುತ್ತಾರೆ” ಎಂದರು.
ಇದನ್ನೂ ಓದಿ: ವಿಜಯಪುರ | ವೃತ್ತಿಪರ ಬದುಕಿನಲ್ಲಿ ಕೌಶಲ್ಯಗಳ ಪಾತ್ರ ಮಹತ್ವದ್ದು: ಡಾ. ಹಾಜರಾ ಪರ್ವೀನ್
ಲಲಿತ ಕಲಾ ಅಕಾಡೆಮಿ ಸದಸ್ಯ ಸಂಚಾಲಕಿ ರಾಜೇಶ್ವರಿ ಮೋಪಗಾರ ಅವರು ಕಲಾಸಕ್ತಿಯು ಮಕ್ಕಳಿಗೆ ಕಾರ್ಯಾಗಾರ ನಡೆಸಿದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಪುರೋಹಿತ, ಝಎಂ ಬಗಲಿ, ಸುಜಾತ ಮೊಗಲಿ, ಮಹಾಂತೇಶ ಪೋರಿ, ಆರ್ ಎಸ್ ಖಾನ್ ಇತರರು ಇದ್ದರು.





