ನಮ್ಮ ದೇಶ ಬಹುಸಂಸ್ಕೃತಿಗೆ ಪ್ರಖ್ಯಾತಿಯನ್ನು ಪಡಿದಿದೆ. ವಿವಿಧತೆಯಲ್ಲಿ ಏಕತೆಯನ್ನು ನಮ್ಮ ರಾಷ್ಟ್ರ ಹೊಂದಿದೆ. ಹಲವಾರು ಜಾತಿ, ಮತ, ಪಂಥಗಳು ಇವೆ. ಹಾಗಾಗಿ ನಾವೆಲ್ಲರೂ ಸುಮಾರು 75 ವರ್ಷಗಳಿಂದ ಸಾಮರಸ್ಯದಿಂದ ಬದುಕುತಿದ್ದೇವೆ ಎಂದು ಎದ್ದೇಳು ಕರ್ನಾಟಕ ವಿಜಯಪುರ ಜಿಲ್ಲಾ ಕೋಆರ್ಡಿನೆಟರ್ ಮಹಮ್ಮದ್ ಅಬ್ದುಲ್ ಖದೀರ್ ಹೇಳಿದರು.
ವಿಜಯಪುರ ನಗರದ ನವ ಸಾನಿಧ್ಯ ಸಂಸ್ಥೆ ಮತ್ತು ಝಾನ್ಸಿ ರಾಣಿ ಮಹಿಳಾ ಒಕ್ಕೂಟ, ಎದ್ದೇಳು ಕರ್ನಾಟಕ, ಈ ದಿನ.ಕಾಮ್ ಸಹಯೋಗದಲ್ಲಿ ನಡೆದ ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
“ಪ್ರಸ್ತುತ ಕೇಂದ್ರ ಸರ್ಕಾರವು ಕೋಮುವಾದಿ ವಿಚಾರವನ್ನು ಮುನ್ನಲೆಗೆ ತಂದು ಜನಗಳ ನಡುವೆ ಹೊಡೆದಾಳುವ ನೀತಿ ಜಾರಿಗೆ ತರುತ್ತಿದೆ. ಇದರ ವಿರುದ್ಧ ಬಲಿಷ್ಠ ಜನಾಂದೋಲನ ಬೆಳೆಯಬೇಕು.
ಈ ಹಿನ್ನಲೆಯಲ್ಲಿ ನಾವೆಲ್ಲರೂ ಕೆಲಸ ಮಾಡುವ ಅವಶ್ಯಕತೆ ಇದೆ” ಎಂದರು.
“ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಗಳನ್ನು ಎಲ್ಲ ಸಮುದಾಯದ ಜನರಿಗೆ ಮನುವರಿಕೆ ಮಾಡಿಸುವುದು ಇಂದಿನ ತುರ್ತು ಅಗತ್ಯವಿದೆ. ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳಿ ಎಂದು ದೇಶದ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಬೇಡಿಕೆ ಈಡೇರಿಸಲು ಸಂಯುಕ್ತ ಕಿಸಾನ್ ಮೋರ್ಚಾವು ಕಳೆದ 2 ವರ್ಷದ ಹಿಂದೆ ಹೋರಾಟ ಮಾಡಿದಾಗ ಮಂಡಿಯೂರಿ ಕೇಂದ್ರ ಸರ್ಕಾರವು ಈ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಮಾತು ಕೊಟ್ಟಿತ್ತು. ಆದರೆ ಮಾತು ತಪ್ಪಿದ ಕೇಂದ್ರ ಸರ್ಕಾರವು ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಲಿಲ್ಲ” ಎಂದು ಆರೋಪಿಸಿದರು.
ಮಾತು ತಪ್ಪಿರುವ ಕೇಂದ್ರದ ವಿರುದ್ಧ ರೈತರು ಹೋರಾಟ ಮಾಡಿದರೆ, ರೈತರ ಮೇಲೆ ಗೋಲಿ ಬಾರ್, ಅಶ್ರುವಾಯು ದಾಳಿ, ಅರೆಸೇನಾ ಪಡೆ ಬಳಸಿ ರೈತರನ್ನು ಅಧೋಗತಿಗೆ ತಳ್ಳುವಂತಹ ಎಲ್ಲ ಪ್ರಯತ್ನಗಳನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ. ಆದರೆ ರೈತರು ಯಾವುದೇ ಕಾರಣಕ್ಕೂ ಹಿಂಜರಿಯದೆ ಒಂದು ಹೆಜ್ಜೆ ಮುಂದೆ ಹಿಟ್ಟು ಹೋರಾಟ ಕಟ್ಟುತ್ತಿದ್ದಾರೆ. ಇದು ನಮ್ಮೆಲ್ಲರಿಗೂ ಸ್ಪೂರ್ತಿಯಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಮಾಜ ತಿದ್ದುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ: ದೊಡ್ಡಣ್ಣ ಬಜಂತ್ರಿ
“ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಂವಿದಾನ ಉಳಿಸುವುದು ಅತ್ಯಂತ ಅವಶ್ಯಕತೆ ಇದೆ. ಬರುವ ಚುನಾವಣೆಯಲ್ಲಿ ಕೇಂದ್ರ ಸರ್ಕಾರವನ್ನು ಸೋಲಿಸುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನಾವೆಲ್ಲರೂ ಬದ್ಧರಾಗೋಣ” ಎಂದು ಕರೆ ನೀಡಿದರು.
ಈ ಸಂರ್ಭದಲ್ಲಿ ಝಾನ್ಸಿ ರಾಣಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಭಾಗೀರಥಿ ಮಲ್ಲಿಕಾರ್ಜುನ ರಾಮತೀರ್ಥ, ನವ ಸಾನಿಧ್ಯ ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ಜೋಲಿ, ಈ ದಿನ.ಕಾಮ್ ಜಿಲ್ಲಾ ಕೋಆರ್ಡಿನೇಟರ್ ರಮೇಶ್ ಹೊಸಮನಿ ಸೇರಿದಂತೆ ಇತರರು ಇದ್ದರು.





