ಉತ್ತಮ ಮೂಲಸೌಕರ್ಯ, ಸುಸಜ್ಜಿತ ತರಗತಿ ಕೊಠಡಿಗಳು ಮತ್ತು ಕಲಿಕೆಗೆ ಅನುಕೂಲವಾದ ವಾತಾವರಣ ಮಕ್ಕಳ ಭವಿಷ್ಯಕ್ಕೆ ಹೊಸ ಚೈತನ್ಯ ತುಂಬುತ್ತವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಣಮುಚನಾಳದಲ್ಲಿ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯಿಂದ ಸಿಎಸ್ಆರ್ ಅನುದಾನದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ನೂತನ ಪ್ರೌಢಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
“ಈ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಇದೇ ವರ್ಷದ ಜನವರಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಇದೇ ವರ್ಷಾಂತ್ಯದೊಳಗೆ ಲೋಕಾರ್ಪಣೆ ಮಾಡುವ ಭರವಸೆ ನೀಡಿದ್ದೆ. ಕಾಮಗಾರಿ ಮುಕ್ತಾಯಗೊಂಡಿದ್ದು, ಬಳಕೆಗೆ ಯೋಗ್ಯವಾಗಿದೆ. ಸಕಾಲಕ್ಕೆ ಅನುದಾನ ನೀಡಿರುವ ಸಂಸ್ಥೆಗೆ ಕೃತಜ್ಞತೆಗಳು. ಈ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಗುಣಮಟ್ಟದ ಅಡುಗೆ ಮನೆ, ಭೋಜನ ಶಾಲೆ, ಉಪಾಧ್ಯಾಯರಿಗೆ ವಿರಮಿಸಿಕೊಳ್ಳಲು ಸ್ಟಾಫ್ ರೂಂ, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಆಧುನಿಕ ಶಾಲಾ ಕಟ್ಟಡವು ಗ್ರಾಮೀಣ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೊಸ ದಿಕ್ಕು ನೀಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಸಾಹಿತ್ಯಾಭಿರುಚಿ ಯುವಕರು ಮೈಗೂಡಿಸಿಕೊಳ್ಳಬೇಕು : ಎಸ್.ಆರ್.ಶ್ರೀನಿವಾಸ್
ಈ ವೇಳೆ ಸ್ವಾಮೀಜಿಗಳಾದ ಕಲ್ಲಯ್ಯ ಅರಕೇರಿಮಠ, ಮಲ್ಲಿಕಾರ್ಜುನ ಹಿರೇಮಠ, ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ಉಪಾಧ್ಯಕ್ಷ ರಮೇಶ ರಾವ್ ಮತ್ತು ಜನರಲ್ ಮ್ಯಾನೇಜರ್ ಕಿರಣ, ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ, ಬಿಇಒ ಬಸವರಾಜ ತಳವಾರ, ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ವಿದ್ಯಾರಾಣಿ ತುಂಗಳ, ಮಹಾದೇವ ನಾಟೀಕಾರ, ಮಲ್ಲು ಕಲಾದಗಿ, ವಿಠ್ಠಲ ನಾಟೀಕಾರ, ಮಾದುರಾಯಗೌಡ ಬಿರಾದಾರ, ನಿಂಗೊಂಡ ಬಿರಾದಾರ, ದೇವಾನಂದ ಲಚ್ಯಾಣ, ಕಣಮುಚನಾಳ, ಸಾರವಾಡ, ಧನ್ಯಾಳ, ಅತಾಲಟ್ಟಿ ಗ್ರಾಮಗಳ ನಾನಾ ಮುಖಂಡರು ಇದ್ದರು. ಶಾಲೆಯ ಮುಖ್ಯ ಶಿಕ್ಷಕ ಆರ್ ಬಿ ಪಾಟೀಲ ಸ್ವಾಗತಿಸಿದರು. ಸಹ ಶಿಕ್ಷಕ ಪ್ರಕಾಶ ಮನ್ನಿಕೇರಿ ನಿರೂಪಿಸಿದರು.





