ದೇಶದ ಕಾನೂನಿನನ್ವಯ ನೋಂದಣಿ ಆಗದೇ ಇರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್ಎಸ್ಎಸ್) ಸರ್ಕಾರಿ/ಅನುದಾನಿತ ಶಾಲಾ-ಕಾಲೇಜು ಆವರಣದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ, ದೊಣ್ಣೆ ಹಿಡಿದು ಪಥಸಂಚಲನ ಸೇರಿದಂತೆ ಇನ್ನಿತರ ಜನವಿರೋಧಿ, ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಪ್ರತಿರೋಧ ವ್ಯಕ್ತಪಡಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರಂಭಿಸಿರುವ ‘ಸೈದ್ಧಾಂತಿಕ ಹೋರಾಟ’ವನ್ನು ವಿಜಯಪುರ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಬಣ ಬೆಂಬಲಿಸುತ್ತಿದೆ ಎಂದು ಮಂಜುನಾಥ ಕಟ್ಟಿಮನಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹತಾಶೆಯಲ್ಲಿರುವ ಆರ್ಎಸ್ಎಸ್ ಮತ್ತು ಬಿಜೆಪಿಯು ಪ್ರಿಯಾಂಕ್ ಖರ್ಗೆ ಮತ್ತವರ ಕುಟುಂಬದ ಮೇಲೆ ವೈಯಕ್ತಿಕವಾಗಿ ಕ್ಷುಲ್ಲಕ ದಾಳಿ ನಡೆಸುತ್ತಾ ದ್ವೇಷ ಕಾರುತ್ತಿರುವುದನ್ನು ಹಾಗೂ ‘ಪ್ರಿಯಾಂಕ್ ಖರ್ಗೆ ಅವರ ಮನೆಗೇ ನುಗ್ಗುತ್ತೇವೆ’ ಎಂದು ಬೆದರಿಕೆ ಹಾಕಿರುವ ಬಿಜೆಪಿ ಮುಖಂಡ ಮಣಿಕಾಂತ್ ರಾಥೋಡ್ ಅವರ ಗೂಂಡಾಗಿರಿ ನಡೆಯನ್ನು ದಲಿತ ಸಂಘರ್ಷ ಸಮಿತಿ ಸಂಯೋಜಕ ತೀವ್ರವಾಗಿ ಖಂಡಿಸಿದೆ.
ವಾಸ್ತವವಾಗಿ ಪಥಸಂಚಲನ ಮಾಡುವ ಅಧಿಕಾರ ಸಾಂವಿಧಾನಿಕವಾಗಿ ಇರುವುದು ಪೊಲೀಸ್ ಮತ್ತು ಇನ್ನಿತರ ರಕ್ಷಣಾ ಪಡೆಗಳಿಗೆ ಮಾತ್ರ. ಆರ್ಎಸ್ಎಸ್ ಸೇರಿದಂತೆ ಇತರ ಯಾವುದೇ ಸಂಘ ಸಂಸ್ಥೆಗಳು ಮೆರವಣಿಗೆ-ಪ್ರತಿಭಟನೆ ಮಾಡಬಹುದೇ ಹೊರತು, ‘ಪಥಸಂಚಲನ’ವನ್ನಲ್ಲ. ಆದ್ದರಿಂದ ಸರ್ಕಾರ ದೃಢ ನಿಲುವು ತಾಳುವುದರ ಮೂಲಕ ಆರ್ಎಸ್ ಎಸ್ ದೊಣ್ಣೆ ಹಿಡಿದು ಪಥ ಸಂಚಲನ ನಡೆಸುವುದಕ್ಕೆ ಅನುಮತಿ ನೀಡಬಾರದು ಎಂದು ದಸಂಸ ಒಕ್ಕೂಟವು ಆಗ್ರಹಿಸಿದೆ.
ಇದನ್ನೂ ಓದಿ: ವಿಜಯಪುರ | ಕಿತ್ತೂರು ರಾಣಿ ಚನ್ನಮ್ಮನ ವ್ಯಕ್ತಿತ್ವ ಸದಾ ಸ್ಪೂರ್ತಿದಾಯಕ: ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ಆರ್ಎಸ್ಎಸ್ ಮೆರವಣಿಗೆ ಮಾಡಲು ಬಯಸಿದರೆ ಅದಕ್ಕೆ ನಮ್ಮ ಆಕ್ಷೇಪಣೆ – ತಕರಾರು ಇಲ್ಲ ಆದರೆ, ಮಾರಕಾಸ್ತ್ರಗಳಲ್ಲಿ ಒಂದಾದ ದೊಣ್ಣೆ ಹಿಡಿದು ಮೆರವಣಿಗೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲದೆ ಇರುವುದರಿಂದ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿ ಆರ್ ಎಸ್ ಎಸ್ ನ ಈ ಸಂವಿಧಾನ ವಿರೋಧಿ ನಡೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





