ಸರ್ಕಾರದಲ್ಲಿ ಖಾಲಿಯಿರುವ ಉದ್ಯೋಗಗಳನ್ನ ಭರ್ತಿಗೆ ಕ್ರಮವಹಿಸಬೇಕು ಹಾಗೂ ಉದ್ಯೋಗದ ವಯೋಮಿತಿಯನ್ನ ಸಡಿಲ/ಹೆಚ್ಚು ಮಾಡಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಘಟಕ ಆಗ್ರಹಿಸಿದೆ.
ಇಂದು ನಗರದಲ್ಲಿ ನಡೆದ ಬೃಹತ್ ಹೋರಾಟದಲ್ಲಿ ಸುಮಾರು ಹತ್ತು ಸಾವಿರಕ್ಕಿಂತ ಹಿಚ್ಚು ವಿದ್ಯಾರ್ಥಿಗಳು ಸೇರಿ ನಗರದ ಅಂಬೇಡ್ಕರ್ ವೃತ್ತದ ವರೆಗೆ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿದರು.
ಈ ವೇಳೆ ದವಿಪ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, “ನಾಡಿನಾದ್ಯಂತ ವಿದ್ಯಾರ್ಥಿ ಯುವಜನರ ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಆಗಿರಬಹುದು; ಇಂದಿನ ಕಾಂಗ್ರೆಸ್ ಸರ್ಕಾರ ಆಗಿರಬಹುದು, ನಾಲ್ಕು ವರ್ಷದಿಂದ ಯಾವುದೇ ಸರ್ಕಾರಿ ಹುದ್ದೆಗಳನ್ನು ತುಂಬದೇ ಸತಾಯಿಸುತ್ತಿರುವುದು ಖಂಡನೀಯ. ವಿದ್ಯಾರ್ಥಿ ಯುವ ಜನರು ನೌಕರಿ ಪಡೆಯಬೇಕೆನ್ನುವ ಉದ್ದೇಶದಿಂದ ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ. ಆದರೆ ಸರ್ಕಾರ ಅವರ ಕಷ್ಟಕ್ಕೆ ಪ್ರತಿಫಲವಾಗಿ ಉದ್ಯೋಗ ನೀಡದೆ ಅವರ ಜೀವನವನ್ನು ಹಾಳು ಮಾಡುತ್ತಿರುವುದು ಅತಿ ಖೇದರರ ಸಂಗತಿ” ಎಂದರು.

ದವಿಪ ಜಿಲ್ಲಾ ಸಂಚಾಲಕ ಅಕ್ಷಯ ಕುಮಾರ ಅಜಮನಿ ಮಾತನಾಡಿ, “ದಲಿತ ವಿದ್ಯಾರ್ಥಿ ಪರಿಷತ್ ಸುಮಾರು ನಿರುದ್ಯೋಗಿ ಯುವಕರ ಪರವಾಗಿ ಎರಡು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದೆ. ಆದರೆ ನಮ್ಮನ್ನಾಳುವ ಸರ್ಕಾರಗಳು ನಮ್ಮ ಕಷ್ಟಗಳನ್ನ ಅರ್ಥಮಾಡಿಕೊಳ್ಳದೆ ಇವತ್ತು ಬೀದಿಯಲ್ಲಿ ನಿಲ್ಲಿಸುವ ರೀತಿಯಲ್ಲಿ ನಮ್ಮನ್ನ ನೋಡಿಕೊಳ್ಳುತ್ತಿದ್ದಾರೆ ಇದರಿಂದ ಸರ್ಕಾರಕ್ಕೆ ನಾಚಿಕೆಯಾಗಬೇಕು. ಹಲವು ವರ್ಷಗಳಿಂದ ವಿದ್ಯಾರ್ಥಿ ಯುವ ಜನರು ತಮ್ಮ ಊರನ್ನು ಬಿಟ್ಟು ಸಂಬಂಧಿಕರನ್ನು ಬಿಟ್ಟು ತಂದೆ-ತಾಯಿ ಎಲ್ಲರನ್ನೂ ಬಿಟ್ಟು ನಗರಗಳಿಗೆ ಬಂದು ಸರ್ಕಾರಿ ಹುದ್ದೆ ಪಡೆದು ಸಾಧನೆ ಮಾಡಬೇಕೆನ್ನುವ ಹಂಬಲದಲ್ಲಿರುವ ಉದ್ಯೋಗ ಆಕಾಂಕ್ಷಿಗಳಿಗೆ ಈಗಿನ ಸರ್ಕಾರಗಳು ಉದ್ಯೋಗ ನೀಡದೆ ಸತಾಯಿಸುತ್ತಿರುವುದು ಮತ್ತು ಅವರ ಜೀವನವನ್ನು ನಾಶ ಮಾಡುತ್ತಿರುವುದು ಖಂಡನೀಯ. ನಮ್ಮ ದೇಶದ ಸಂವಿಧಾನ ಹೇಳುತ್ತಿದೆ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯ ಅವಕಾಶಗಳು ಮತ್ತು ಉದ್ಯೋಗದ ಅವಕಾಶಗಳು ದೊರೆಯಬೇಕೆಂದು ಆದರೆ ಅದನ್ನು ಯಾವುದೋ ಪಾಲನೆ ಮಾಡದೆ ವಿದ್ಯಾರ್ಥಿ ಯುವ ಜನರ ಬಾಳಿಗೆ ಕುತ್ತು ತರುವಂತಹ ಕೆಲಸ ಇವತ್ತಿನ ಸರ್ಕಾರಗಳು ಮಾಡುತ್ತಿವೆ, ಅದಕ್ಕಾಗಿ ನಾವು ಇಡೀ ರಾಜ್ಯಾದ್ಯಂತ ಉದ್ಯೋಗ ಆಕಾಂಕ್ಷೆ ಯುವಕರ ಪರವಾಗಿ ಧ್ವನಿ ಎತ್ತಿದ್ದೇವೆ ಅವರಿಗೆ ನ್ಯಾಯ ಸಿಗುವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ” ಎಂದರು.
ಜಿಲ್ಲಾ ಉಪಾಧ್ಯಕ್ಷ ಮಾದೇಶ ಛಲವಾದಿ ಮಾತನಾಡಿ, “ರಾಜ್ಯದ ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳಿಗೆ ಒಂದು ವಾರದಲ್ಲಿ ನೋಟಿಫಿಕೇಶನ್ ಹೊರಡಿಸಬೇಕು. ನಾಲ್ಕು ವರ್ಷದಿಂದ ಸರ್ಕಾರಿ ಹುದ್ದೆಯನ್ನು ಭರ್ತಿ ಮಾಡದ ಕಾರಣಕ್ಕಾಗಿ ಎಷ್ಟೋ ವಿದ್ಯಾರ್ಥಿಗಳ ವಯಸ್ಸು ಮೀರಿದೆ. ಅಂಥವರಿಗೆ 35 ವರ್ಷದ ತನಕ ವಯೋಮಿತಿಯನ್ನು ಹೆಚ್ಚಿಸಬೇಕು. ಸರ್ಕಾರಿ ಉದ್ಯೋಗದ ಅನುಮೋದನೆಯಯಲ್ಲಿ ಸ್ಪಷ್ಟವಾಗಿ ಸಮಯದ ಸ್ಪಷ್ಟತೆಯನ್ನು ನಿಗದಿಪಡಿಸಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ವಿವಿಯ ಪತ್ರಿಕೋದ್ಯಮ ವಿಭಾಗಕ್ಕೆ ರಾಷ್ಟ್ರೀಯ ಪ್ರಶಸ್ತಿ
ಹೋರಾಟದ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣುರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಮನವಿಯನ್ನ ಸ್ವೀಕರಿಸಿ, ಹೋರಾಟದ ವಾತಾವರಣವನ್ನ ತಿಳಿಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ನ ಮುಖಂಡರಾದ ಹುಚ್ಚಪ್ಪ ಸಿಂದಗಿ, ಮಂಜುನಾಥ್, ಪ್ರತಾಪ್ ತೋಳನೂರ, ಪ್ರಶಾಂತ ದಾಂಡೇಕರ್, ರಾಹುಲ್ ಕಳಸದ, ಯಮನೂರಿ ಮಾದರ್, ಭೀಮು, ಮಂಜುನಾಥ್ ಎಲ್ ಬಾ, ಶಿಲ್ಪಾ, ಮುಂತಾದವರು ಮತ್ತು ವಿದ್ಯಾರ್ಥಿ ಯುವಜನರು ಭಾಗಿಯಾಗಿದ್ದರು.





