ಇತ್ತೀಚಿಗೆ ಸುರಿದ ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಕುರಿತು ಜಂಟಿ ಸಮೀಕ್ಷೆ ವರದಿಯನ್ನು ಪ್ರಕಟಿಸಿ, ರೈತರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ಅಂತಿಮ ವರದಿ ವಿಂಗಡಿಸಿ ಸಲ್ಲಿಸುವಂತೆ ಸಂಬಂಧಿಸಿದ ತಹಶೀಲ್ದಾರ್ಗಳಿಗೆ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, “ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯ 13 ತಾಲೂಕುಗಳಲ್ಲಿ ಹಾನಿಗೊಳಗಾದ ಬೆಳೆಗಳ ಜಂಟಿ ಸಮೀಕ್ಷೆ ನಡೆಸಿದ್ದು, 21683.9 ಹೆಕ್ಟೇರ್ ಕೃಷಿ ಹಾಗೂ 450 ಹೆಕ್ಟೇರ್ ತೋಟಗಾರಿಕೆ ಬೆಳೆಗಳ ಸಮೀಕ್ಷಾ ವರದಿಯನ್ನು ಜಿಲ್ಲೆಯ ಸಂಬಂಧಿಸಿದ ಗ್ರಾಮ ಪಂಚಾಯತ್ ಕಾರ್ಯಾಲಯ, ರೈತ ಸಂಪರ್ಕ ಕೇಂದ್ರ, ತಹಶೀಲ್ದಾರ ಕಾರ್ಯಾಲಯಗಳಲ್ಲಿ ಹಾನಿಗೊಳಗಾದ ಅಂತಿಮ ರೈತರ ಬೆಳೆಗಳ ಪಟ್ಟಿಯನ್ನು ಪ್ರಚುರಪಡಿಸಿ ರೈತರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ವರದಿಯನ್ನು ವಿಂಗಡಿಸಿ ವರದಿಯನ್ನು ಸಲ್ಲಿಸಬೇಕು” ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ 13 ತಾಲೂಕಿನ ತಹಶೀಲ್ದಾರಗಳ ನಿರ್ದೇಶನದಂತೆ ತಮ್ಮ ತಾಲೂಕಿನಲ್ಲಿ ಬೆಳ ಹಾನಿಯಾದ ರೈತ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರ ಸೇರಿದಂತೆ ವಿವಿಧಡೆ ಪ್ರಚುರಪಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಎಲ್ಲ ತಹಶೀಲ್ದಾರಗಳು ಈಗಾಗಲೇ ಹಾನಿಯಾದ ಭಾಗಶ ಮನೆ, ಕಚ್ಚಾ ಮನೆಗಳಿಗೆ ನಿಗದಿತ ಅವಧಿಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ಮಹಿಳಾ ಸಬಲೀಕರಣದತ್ತ ʼಒಡಲ ಧ್ವನಿ ಒಕ್ಕೂಟʼದ ಹೆಜ್ಜೆ; ರೈತರಿಗೆ ಕೃಷಿ ಪರಿಕರ ವಿತರಣೆ
ಮಳೆ ಸೇರಿದಂತೆ ಪ್ರಾಕೃತಿಕ ವಿಕೋಪದಿಂದ ರಸ್ತೆಗಳ ಸಂಪರ್ಕ ಕಡಿತಗೊಂಡಲ್ಲಿ ತಕ್ಷಣ ಸ್ಪಂದಿಸಿ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಬೇಕು. ತಾಲೂಕಿನ ನೋಡಲ್ ಅಧಿಕಾರಿಗಳು ತಾಲೂಕಿನ ಸಮಗ್ರ ಮಾಹಿತಿ ಹೊಂದಿ, ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಂಚಿತವಾಗಿಯೇ ಸಭೆಗಳನ್ನು ನಡೆಸಿ, ಸೂಕ್ತ ತಿಳುವಳಿಕೆ ಮೂಡಿಸಬೇಕು. ಜಿಲ್ಲೆಯಾದ್ಯಂತ ವಿಫಲವಾಗಿರುವ ಕೊಳವೆ ಬಾವಿಗಳಿದ್ದಲ್ಲಿ ಕೂಡಲೇ ಮುಚ್ಚಲು ಕ್ರಮ ವಹಿಸಬೇಕು. ಯಾವುದೇ ಅನಾಹುತಕ್ಕೆ ಅವಕಾಶ ನೀಡದೇ ಸಮರ್ಪಕವಾಗಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.





