ಈ ಬಾರಿ ಡೆಂಘೀ ಜ್ವರ ಹೆಚ್ಚಳವಾಗುತ್ತಿದ್ದು, ಜನತೆಯನ್ನು ಅತಿಹೆಚ್ಚು ಬಾಧಿಸುತ್ತಿದೆ. ಇದನ್ನು ತಡೆಗಟ್ಟಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಹುಣಶ್ಯಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಂಗಾರೇಮ್ಮ ಮಾನಪ್ಪ ದೊಡಮನಿ ಅವರು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿ, “ತಾಲೂಕಿನಲ್ಲಿ ವ್ಯಾಪಿಸುತ್ತಿರುವ ಡೆಂಘೀ ಜ್ವರದಿಂದ ಗ್ರಾಮೀಣ ಭಾಗದ ಜನತೆಯ ಆರೋಗ್ಯಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಬೇಕು. ಹಲವೆಡೆ ಹಳ್ಳಿಗಳಲ್ಲಿ ವೈದ್ಯರ ಕೊರತೆಯಿಂದ ಮುಚ್ಚಿರುವ ಆರೋಗ್ಯ ಹಿರಿಯ, ಪ್ರಾಥಮಿಕ ಹಾಗೂ ಉಪಕೇಂದ್ರಗಳನ್ನು ಪುರಾರಂಭಿಸಬೇಕು. ಅಗತ್ಯ ವೈದ್ಯಾಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಿ, ಆರೋಗ್ಯ ಸೇವೆಗಳನ್ನು ಒದಗಿಸಲು ಅಗತ್ಯಗತ್ಯವಾದ ಕ್ರಮ ಕೈಗೊಳ್ಳಬೇಕು” ಎಂದರು.
“ವಿಪರೀತ ಜ್ವರ, ಮೈಕೈ, ಕಣ್ಣು, ತಲೆ ಹಾಗೂ ತೀವ್ರ ಕೀಲುನೋವು ರೋಗದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಡೆಂಘೀ ಇರುವುದು ದೃಢಪಟ್ಟಲ್ಲಿ, ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಡೆಂಘೀಗೆ ಹೆದರುವ ಅಗತ್ಯವಿಲ್ಲ. ಡೆಂಘೀ ಜ್ವರದಿಂದ ಉಂಟಾಗುವ ಸಾವು-ನೋವುಗಳನ್ನು ತಪ್ಪಿಸಬೇಕಾದರೆ ಮುಖ್ಯವಾಗಿ ಸೊಳ್ಳೆಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು” ಎಂದರು.
ಈ ರೋಗ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ನೀರು ಶೇಖರಣೆಯಾಗದಂತೆ ನೀರಿನ ತೊಟ್ಟಿ, ಬ್ಯಾರಲ್ಗಳನ್ನು ವಾರಕೊಮ್ಮೆ ಸ್ವಚ್ಛಗೊಳಿಸಬೇಕು. ಈಗ ಮಳೆಗಾಲ ಪ್ರಾರಂಭವಾಗಿದ್ದು, ತ್ಯಾಜ್ಯ ವಸ್ತುಗಳಾದ ಟೈಯರ್, ಎಳನೀರು ಚಿಪ್ಪು, ಇತರೆ ಪ್ಲಾಸ್ಟಿಕ್ ವಸ್ತುಗಳಲ್ಲಿ ನೀರು ಸಂಗ್ರಗಗೊಂಡು ಸೊಳ್ಳೆಗಳ ಉತ್ಪತ್ತಿಗಳಾಗುತ್ತವೆ. ಆದುದರಿಂದ ನೀರು ಸಂಗ್ರಹವಾಗದಂತೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಗ್ರಾಮಗಳಲ್ಲಿ ಮನವರಿಕೆ ಕಾರ್ಯಕ್ರಮ ನಡೆಸಬೇಕು” ಎಂದು ಮನವಿ ಮಾಡಿದರು.
“ಡೆಂಘೀ ದೃಢಪಟ್ಟರೆ ಅಗತ್ಯ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಚಿಕಿತ್ಸೆ ವಿಳಂಬವಾದಲ್ಲಿ ಸಾವುಗಳು ಸಂಭವಿಸಬಹುದು. ಇಂತಹ ಅವಗಡಗಳಿಗೆ ಕಾರಣವಾಗದಂತೆ ತಾಲೂಕು ಆಡಳಿತ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಮನೆ ಮನೆಗೆ ಆರೋಗ್ಯ ಕಾರ್ಯಕರ್ತೆಯರು ಭೇಟಿ ನೀಡಿ, ಅರಿವು ಮೂಡಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ರಸ್ತೆಬದಿ ನಿಲ್ಲಿಸುವ ಲಾರಿ ತೆರವುಗೊಳಿಸುವಂತೆ ದಲಿತ ಸೇನೆ ಆಗ್ರಹ
ಈ ಸಂದರ್ಭದಲ್ಲಿ ಮಲ್ಲಮ್ಮ ಕೊಂಡಗುಳ, ಶರಣಮ್ಮ, ರಮೇಶ್ ಚಲುವಾದಿ, ಆಕಾಶ ಬಿರಾದಾರ, ಪ್ರಜ್ವಲ್ ಮಲ್ಲಾರಿ, ಶಿವಾನಂದ ಖಾಚಾಪುರ ಸೇರಿದಂತೆ ಇತರ ಗ್ರಾಮಗಳ ಗ್ರಾಮಸ್ಥರು ಇದ್ದರು.





