ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಬಾಬಾನಗರದ ಬಳಿ ನಿರ್ಮಿಸಲು ಉದ್ದೇಶಿರುವ 0.8 ಟಿಎಂಸಿ ಜಲಸಂಗ್ರಹಗಾರದ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ಶೀಘ್ರದಲ್ಲಿಯೇ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದರು.
ಬಾಬಾನಗರ ಹತ್ತಿರವಿರುವ ಉದ್ದೇಶಿತ ಯೋಜನಾ ಪ್ರದೇಶಕ್ಕೆ ಅಧಿಕಾರಿಗಳು, ರೈತ ಮುಖಂಡರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
“ಜಲಸಂಗ್ರಹಗಾರ ನಿರ್ಮಾಣಕ್ಕೆ ಎಲ್ಲರ ಸಲಹೆ ಸೂಚನೆ ಪಡೆಯಲಾಗುವುದು. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಅವುಗಳನ್ನು ಸರಿಪಡಿಸಿಕೊಂಡು ಡಿಪಿಆರ್ ಸಿದ್ದಪಡಿಸಲಾಗುವುದು. ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆ ಅಡಿ ಒಟ್ಟು 6.3 ಟಿಎಂಸಿ ಹಂಚಿಕೆಯಾಗಿದೆ. ಈ ಪೈಕಿ ತಿಕೋಟಾ ಹೋಬಳಿಗೆ 5.5 ಟಿಎಂಸಿ ನೀರು ಲಭ್ಯವಾಗಿದ್ದರೂ ಮಳೆಗಾಲದಲ್ಲಿ ಮಾತ್ರ ಬೆಳೆಗಳಿಗೆ ನೀರು ಕೊಡಲಾಗುತ್ತಿದೆ. ಜೊತೆಗೆ ಕೆರೆಗಳನ್ನು ತುಂಬಿಸಲು ನೀರು ಬಳಕೆ ಮಾಡುತ್ತಿದ್ದರೂ ಇದುವರೆಗೆ ಕೇವಲ 2 ಟಿಎಂಸಿಯಷ್ಟು ನೀರು ಮಾತ್ರ ಬಳಕೆ ಸಾಧ್ಯವಾಗಿದೆ” ಎಂದರು.
“ಅಲ್ಲದೆ ಈಗಾಗಲೇ ಎಫ್ಐಸಿ ಕಾಮಗಾರಿ ನಡೆಯುತ್ತಿದೆ. ಎಫ್ಐಸಿ ಆದ ನಂತರವೂ ಕೇವಲ ಮೂರು ಟಿಎಂಸಿ ನೀರು ಮಾತ್ರ ಬಳಕೆ ಆಗುತ್ತದೆ. ಇನ್ನು 2.5 ಟಿಎಂಸಿ ನೀರು ಉಳಿಕೆಯಾಗಲಿದೆ. ಹೀಗಾಗಿ ಈ ನೀರನ್ನು ಮಳೆಗಾಲದಲ್ಲಿ ಶೇಖರಿಸಿಕೊಂಡು ಸತ್ಬಳಿಕೆ ಮಾಡಲು ಉದ್ದೇಶಿಸಲಾಗಿದೆ. ತುಬಚಿ – ಬಬಲೇಶ್ವರ ಯೋಜನೆ ನೀರನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ಬಾಬಾ ನಗರದ ಬಳಿ 0.8 ಟಿಎ ಸಿ ಜಲಸಂಗ್ರಹಾರ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಇಲ್ಲಿ ಐದು ನೂರು ಎಕರೆಗೂ ಅಧಿಕ ಸರ್ಕಾರಿ ಜಮೀನು ಲಭ್ಯವಿದೆ. ಜಲಸಂಗ್ರಹಗಾರ ನಿರ್ಮಾಣಕ್ಕೆ ಯಾವುದೇ ಭೂ ಸ್ವಾಧೀನಕ್ಕೆ ಹಣ ವೆಚ್ಚ ಮಾಡುವ ಅವಶ್ಯಕತೆ ಇಲ್ಲ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಿಜಯಪುರ | ಕರ್ನಾಟಕ ರಾಜ್ಯೋತ್ಸವ: ಸಚಿವ ಎಂ ಬಿ ಪಾಟೀಲರಿಂದ ಧ್ವಜಾರೋಹಣ
“ಕೇವಲ ಭೂಸ್ವಾಧೀನಕ್ಕೆ700-800 ಕೋಟಿ ರೂ ವೆಚ್ಚ ಮಾಡಬೇಕಾಗಿ ಬರುತ್ತಿತ್ತು. ಸರ್ಕಾರಿ ಜಮೀನು ಇರುವುದರಿಂದ ಈ ಹಣ ಉಳಿತಾಯವಾಗಲಿದೆ. ಜೊತೆಗೆ ಈ ಪ್ರದೇಶವು ನೈಸರ್ಗಿಕವಾಗಿ ತಗ್ಗು ಪ್ರದೇಶವಾಗಿದ್ದು, ಜಲಸಂಗ್ರಹಗಾರಕ್ಕೆ ಸೂಕ್ತವಾಗಲಿದೆ. ಹೆಚ್ಚಿನ ಕಾಮಗಾರಿ ಅವಶ್ಯಕತೆಯೂ ಬರುವುದಿಲ್ಲ. ಈ ಜಲಸಂಗ್ರಹಗಾರದ ಮೂಲಕ ಬೇಸಿಗೆ ಕಾಲದಲ್ಲಿ ಕೆರೆಗಳು, ಹಳ್ಳಿಗಳಿಗೆ ನೀರು ಒದಗಿಸಲಾಗುವುದು. ಹೀಗಾಗಿ ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೂ ಮನದಟ್ಟು ಮಾಡಿಕೊಡಲಾಗಿದೆ” ಎಂದು ತಿಳಿಸಿದರು.





