ವಿಮೆಯಲ್ಲಿ ಆಗಿರುವ ಮೋಸವನ್ನು ಸರಿಪಡಿಸಿ, 2023-24ರಲ್ಲಿ ವಿಜಯಪುರ ಜಿಲ್ಲೆಯ ನಷ್ಟಗೊಂಡ ಎಲ್ಲ ರೈತರಿಗೂ ಬೆಳೆವಿಮೆ ಪರಿಹಾರ ನೀಡಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಫಸಲ್ ಭೀಮಾ ಯೋಜನೆಯಡಿ ಸಾಕಷ್ಟು ಅವ್ಯವಹಾರ ಆಗಿರುವದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ವಿಜಯಪುರ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತವರೆಗೆ ಜಾಥಾ ನಡೆಸಿ, ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು, ಬಳಿಕ ಮನವಿ ಸಲ್ಲಿಸಿ ಮಾತನಾಡಿದರು.
“ಕಳೆದ 3 ತಿಂಗಳಿಂದ ವಿಮೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಿ ಸರ್ಕಾರಕ್ಕೂ ಮನವಿ ಮಾಡಿದ್ದಾಗ್ಯೂ ಈವರೆಗೆ ಮಾಹಿತಿ ನೀಡಿಲ್ಲ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಂಟಿ ಇಲಾಖೆಗಳಿಂದ ಕೈಗೊಂಡ ಬೆಳೆಸಮೀಕ್ಷೆ ಹಾಗೂ ಬೆಳೆ ಕಟಾವೂ ಮಾಡಿರುವ ವರದಿ, ಫೋಟೊ ಹಾಗೂ ವಿಡಿಯೋ ನೀಡಬೇಕು. ಫಸಲ್ ಭೀಮಾ ಯೋಜನೆ ಎನ್ನುವುದು ಅವೈಜ್ಞಾನಿಕ ಹಾಗೂ ಅಪಾರದರ್ಶಕವಾಗಿದೆ. ಇವುಗಳ ಸಂಪೂರ್ಣ ಮಾಹಿತಿ ನೀಡಬೇಕು” ಎಂದು ಆಗ್ರಹಿಸಿದರು.
“ಕಳೆದ ವರ್ಷ ಬರಗಾಲದಿಂದ ತತ್ತರಿಸಿರುವ ರೈತರಿಗೆ ರಾಜ್ಯ ಹಾಗೂ ಕೇಂದ್ರ ಪ್ರಕೃತಿ ವಿಕೋಪ ಪರಿಹಾರದಡಿ ₹413 ಕೋಟಿ ನೀಡಿದ್ದರು. ರೈತರಿಗೆ ಅಲ್ಪ ಸ್ವಲ್ಪವಾದರೂ ಅನುಕೂಲವಾಗಲಿ ಎನ್ನುವ ದೃಷ್ಟಿಕೋನದಿಂದ 2023-24ನೇ ಸಾಲಿನಲ್ಲಿ ಸಾಲಸೋಲ ಮಾಡಿ ಯೋಜನೆಯಡಿ ವಿಮಾಹಣ ತುಂಬಿದ್ದರು. ಆದರೆ ವಿಮಾ ಕಂಪೆನಿಯವರು ಸ್ಥಳೀಯ ಅಧಿಕಾರಿಗಳೊಡನೆ ಜಿಲ್ಲೆಯ ಹಲವಾರು ಕಡೆಗಳಲ್ಲಿ ಬೆಳೆ ಚೆನ್ನಾಗಿ ಬಂದಿದೆಯೆಂದು ತಪ್ಪು ವರದಿ ಸಲ್ಲಿಸಿ ಅನೇಕರಿಗೆ ವಿಮೆ ಬಾರದ ಹಾಗೆ ಮಾಡಿದ್ದಾರೆ” ಎಂದು ಆರೋಪಿಸಿದರು
“ಬೆಳೆವಿಮೆ ಪರಿಹಾರ ಬಾರದಿರುವುದಕ್ಕೆ ಕೃಷಿ ಸಚಿವ, ಕೃಷಿ ಆಯುಕ್ತ, ಜಿಲ್ಲಾಧಿಕಾರಿ, ಜಂಟಿ ಕೃಷಿ ನಿರ್ದೇಶಕರು, ತೋಟಗಾರಿಕಾ ಸಹಾಯಕ ನಿರ್ದೇಶಕರು, ಕಂದಾಯ ಇಲಾಖೆ, ಪಂಚಾಯತ್ ರಾಜ್ಯ ಇಲಾಖೆ ಹಾಗೂ ವಿಮೆ ಅಧಿಕಾರಿಗಳು ಉತ್ತರ ನೀಡದೆ, ʼನಮ್ಮ ಹತ್ತಿರ ಮಾಹಿತಿ ಇಲ್ಲ, ಅವರಿಗೆ ಕೇಳಿ, ಇವರಿಗೆ ಕೇಳಿʼರೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ” ಎಂದು ಸಂಗಮೇಶ್ ಸಗರ ಅಸಮಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಿಸಾನ್ ಕಾಂಗ್ರೆಸ್ನಿಂದ ಸಾಧಕ ಕೃಷಿ ಕಾರ್ಮಿಕರಿಗೆ ಸನ್ಮಾನ
ಫಸಲ್ ಭೀಮಾ ಯೋಜನೆಯಡಿ ₹131 ಕೋಟಿ ವಿಮೆ ಪರಿಹಾರ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಬರಗಾಲದಿಂದ ತತ್ತರಿಸಿರುವ ಜಿಲ್ಲೆಗೆ ಸುಮಾರು ₹1,000 ಕೋಟಿ ಪರಿಹಾರ ಬರಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಶಾಮಿಲಾಗಿರುವುದರಿಂದ ಪರಿಹಾರ ಬಾರದೆ ಪರಿತಪ್ಪಿಸುವಂತಾಗಿದೆ” ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರು, ಹೋರಾಟಗಾರರು ಸೇರಿದಂತೆ ಹಲವು ಗ್ರಾಮದ ರೈತರು ಇದ್ದರು.





