ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗಿದೆ. ಮಾರುಕಟ್ಟೆಗೆ ಜೋಳ ಬಂದು ಎರಡು ತಿಂಗಳು ಗತಿಸಿದರೂ ಇಲ್ಲಿಯವರೆಗೆ ಖರೀದಿ ಕೇಂದ್ರ ಆರಂಭ ಮಾಡಿಲ್ಲ. ಇದು ಖಂಡನೀಯ. ಕೂಡಲೇ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಯಾವುದೇ ಶರತ್ತುಗಳಿಲ್ಲದೆ ರೈತರು ಬೆಳೆದಿರುವ ಎಲ್ಲಾ ಮೆಕ್ಕೆಜೋಳವನ್ನು ಖರೀದಿ ಮಾಡಬೇಕು ಹಾಗೂ ಇಲ್ಲಿರುವ ಗೊಂದಲಗಳನ್ನು ನಿವಾರಿಸಬೇಕು. ಧಾರವಾಡಕ್ಕೆ ಸ್ಯಾಂಪಲ್ ಕಳಿಸಲು ಸಾಧ್ಯವಾಗುವುದಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ಪ್ರಾರಂಭ ಮಾಡುವಂತೆ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.
ರೈತರ ಖಾತೆಗೆ ಕೆಜಿ ಕೇವಲ ಎರಡು ಸಾವಿರ ಎಂದು ನಿಗದಿ ಮಾಡಿದರೆ, ಉಳಿದ ಮೆಕ್ಕೆಜೋಳ ಏನು ಮಾಡಬೇಕು? ಸರ್ಕಾರ ಕೇವಲ ನೆಪ ಮಾತ್ರಕ್ಕೆ ರೈತಪರ ಮುಖವಾಡ ಹಾಕಿದರೆ ಏನು ಪ್ರಯೋಜನವಾಗುವುದಿಲ್ಲ. ಎಲ್ಲಾ ಬೆಳೆಗಾರರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು. ಕೇವಲ ಗೊಂದಲ ಸೃಷ್ಟಿಸಿದರೆ ಹೇಗೆ ಎಂಬುದು ತಿಳಿಯದಾಗಿದೆ ಎಂದರು.
ಇದನ್ನೂ ಓದಿ: ವಿಜಯಪುರ | ನಾವು ಬೇಡ ಅಂದ್ರೂ ಸರ್ಕಾರ ಉಳಿಯುತ್ತೆ: ಸಚಿವ ಶಿವನಾಂದ ಪಾಟೀಲ
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ಆನಂದ ಕೆ, “ಈಗಾಗಲೇ ಸರ್ಕಾರಕ್ಕೆ ಮೂರು ಬಾರಿ ಹಾಗೂ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ವರದಿ ಕಳುಹಿಸಿ ಶೀಘ್ರವಾಗಿ ಖರೀದಿ ಕೇಂದ್ರ ಆರಂಭಿಸುವಂತೆ ನಾವು ಕೂಡ ತಿಳಿಸಿದ್ದೇವೆ. ಕೆಎಂಎಫ್, ಡಿಸ್ಟಲರಿ ಹಾಗೂ ಪಲ್ಟ್ರಿ ಫುಡ್ ಸೇರಿದಂತೆ ಸಾಧ್ಯವಿರುವ ಎಲ್ಲಾ ಕಡೆಗೂ ಖರೀದಿ ಕೇಂದ್ರ ಆರಂಭಿಸಲು ಪ್ರಯತ್ನ ಮಾಡಲಾಗುತ್ತಿದೆ. ಮೆಕ್ಕೆಜೋಳ ಬೆಳಗಾರರ ಸಮಸ್ಯೆ ಕುರಿತು ಅರಿತು ಆದಷ್ಟು ಬೇಗ ಪ್ರಾರಂಭ ಮಾಡಲಾಗುವುದು ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಾಹುಲ ಕೋಪಕಡ್ಡಿ, ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾಧ್ಯಕ್ಷ ಸಂಗಮೇಶ ಸಾಗರ ಇದ್ದರು.





