ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಮುಳುಗಡೆ ಪ್ರದೇಶ ಹಳೇ ಸಿದ್ದಾಪುರ ಭಾಗದಲ್ಲಿ ರೈತರ ಮಾಲ್ಕಿ ಜಮೀನು ಅತಿಕ್ರಮಿಸಿ ನಾಲತವಾಡ ಪಟ್ಟಣ ಪಂಚಾಯತಿಯವರು ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರೈತರು ಸ್ಥಳಕ್ಕೆ ತೆರಳಿ ವಿವಾದ ಇತ್ಯರ್ಥಗೊಳ್ಳುವವರೆಗೂ ಘಟಕ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದರು.
“ನಮಗೆ ಇರುವುದೇ ಸ್ವಲ್ಪ ಜಮೀನು. ಅದರಲ್ಲೇ ಬೇಸಾಯ ಮಾಡಿ ಬದುಕು ಕಟ್ಟಿಕೊಂಡಿದ್ದೇವೆ. ಈಗ ಅದರಲ್ಲಿಯೂ ಕಾಲು ಭಾಗ ಸರ್ಕಾರದ ಹೆಸರಿನಲ್ಲಿ ನಮ್ಮಿಂದ ಕಸಿದುಕೊಂಡರೆ ಬದುಕಿಗೆ ಏನು ಮಾಡಬೇಕು. ನಮಗೆ ನ್ಯಾಯ ಬೇಕು. ಇದಕ್ಕಾಗಿ ನಾವು ಯಾವ ಹಂತಕ್ಕೆ ಹೋಗಲು ಸಿದ್ದರಿದ್ದೇವೆ. ಸರ್ವೆಯ ಅಂತಿಮ ವರದಿ ಬರುವವರೆಗೂ ಘಟಕದ ಕೆಲಸ ನಿಲ್ಲಿಸಿ” ಎಂದು ಆಗ್ರಹಿಸಿದರು.
“ಮುದ್ದೇಬಿಹಾಳದಿಂದ ಸರ್ವೇಯರುಗಳು ಆಗಮಿಸಿ ಸರ್ವೇ ಕಾರ್ಯ ನಡೆಸುತ್ತಿದ್ದುದನ್ನು ಗಮನಿಸಿದ ರೈತರು ಈಗಾಗಲೇ ಸರ್ವೇಯರುಗಳು ನಮ್ಮ ಮಾಲ್ಕಿ ಜಮೀನಿನ ಹದ್ದುಬಸ್ತು ಗುರ್ತಿಸಿ ಕಲ್ಲುಗಳನ್ನು ನೆಟ್ಟಿದ್ದಾರೆ. ನಮ್ಮ ಜಮೀನನ್ನು ಘಟಕ ನಿರ್ಮಾಣಕ್ಕೆ ಪಪಂನವರು ಅತಿಕ್ರಮಿಸಿರುವುದು ಖಚಿತವಾಗಿದೆ. ಹೀಗಿರುವಾಗ ಮತ್ತೊಮ್ಮೆ ಏಕೆ ಸರ್ವೆ ನಡೆಸುತ್ತಿದ್ದೀರಿ” ಎಂದು ಆಕ್ಷೇಪಿಸಿದರು.

“ಪಪಂ ಮುಖ್ಯಾಧಿಕಾರಿ ರೈತರ ಸರ್ವೆ ಅರ್ಜಿಗೆ ತಕರಾರು ದಾಖಲಿಸಿ ಮತ್ತೊಮ್ಮೆ ಸರ್ವೆ ನಡೆಸುವಂತೆ ಕೋರಿ ಪತ್ರ ಬರೆದಿದ್ದರಿಂದ ಈ ಕಾರ್ಯ ನಡೆಸಲಾಗುತ್ತಿದೆ. ಮೊದಲಿನ ಸರ್ವೇಯರ್ ಕೂಡ ನಮ್ಮ ಜೊತೆ ಬಂದಿದ್ದಾರೆ. ಸರ್ವೆ ನಂಬರ್ 92ರಲ್ಲಿ ಸರ್ಕಾರದ ಜಮೀನು ಇದೆ. ಸರ್ವೆ ನಂಬರ್ 93ರಲ್ಲಿ ಖಾಸಗಿ ಮಾಲೀಕತ್ವದ ರೈತರ ಜಮೀನು ಇದೆ. ಇವೆರಡನ್ನೂ ಸರ್ವೆ ಮಾಡಿದ್ದೇವೆ. ವರದಿಯನ್ನು ಮೇಲಧಿಕಾರಿಗೆ ಸಲ್ಲಿಸುತ್ತೇವೆ. ಅವರು ಅಂತಿಮ ತೀರ್ಮಾನ ಪ್ರಕಟಿಸುತ್ತಾರೆ” ಎಂದು ಸರ್ವೇ ಸುಪರ್ವೈಸರ್ ಹಜೇರಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಿಜಯಪುರ | ಸಕ್ಕರೆ ದರ ನಿಗದಿಗೆ ವಿಳಂಬ ಬೇಡ: ಡಿಸಿ ಆನಂದ
ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಯವರು ತಹಶೀಲ್ದಾರ್, ಕಂದಾಯ ನಿರೀಕ್ಷಕರು ಸರ್ವೇ ನಡೆಸಿ ಕೊಟ್ಟ ನಕ್ಷೆ ಸಹಿತ ದಾಖಲೆ ಪರಿಗಣಿಸಿ ಘಟಕ ನಿರ್ಮಾಣ ಕಾರ್ಯ ಆರಂಭಿಸಿದ್ದೇವೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದರು.
ಗ್ರಾಮಸ್ಥರಾದ ಶಿವರುದ್ರಯ್ಯ ಹಿರೇಮಠ, ಸಂಗಪ್ಪ ಹವಲ್ದಾರ, ಪರಸಪ್ಪ ಸುಲ್ತಾನಪುರ, ಈರಪ್ಪ ಸುಲ್ತಾನಪುರ, ಬಸವರಾಜ ಲೋಟಗೇರಿ, ಅಂಬ್ರಪ್ಪ ಕರೀಭಾವಿ, ಶಿವಾನಂದ ಉಂಡಿ, ಯಮನಪ್ಪ ಕೋಟಿ, ಮಹಾಂತಪ್ಪ ಹಾವರಗಿ, ಬಸವರಾಜ ಅಂಗಡಿ, ಶಿವು ಅಂಗಡಿ, ಈರಪ್ಪ ಪತ್ತೆಪುರ, ಬಸಪ್ಪ ಪತೇಪುರ, ಪ್ರಭು ಪತ್ತೇಪುರ, ಮಹಾಂತೇಶ ಪಟ್ಟಣದ, ಈರಪ್ಪ ಕೋಟಿ, ಚಂದ್ರಶೇಖರ ಪಾಟೀಲ, ಜಗದೇವಪ್ಪ ಕೋಟಿ, ಮಲ್ಲಪ್ಪ ಪತ್ತೆಪುರ, ಅಮರೇಗೌಡ ಪಾಟೀಲ, ಅಂಬರೀಷ್ ಚಿತ್ತಾಪುರ, ಚನ್ನಪ್ಪ ಲೊಟಗೇರಿ, ಸಂಗಪ್ಪ ಪತ್ತೆಪುರ ಇನ್ನಿತರರು ಇದ್ದರು.





