“ಕೇಂದ್ರ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಫೆಬ್ರುವರಿ 12ರಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ” ಎಂದು ಜೆಸಿಟಿಯು ಮುಖಂಡರು ಲಕ್ಷ್ಮಣ ಹಂದ್ರಾಳ ಕರೆ ನೀಡಿದರು.
ವಿಜಯಪುರ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಸರಕಾರ ಕಾರ್ಮಿಕರ ಪರವಾಗಿ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, 4 ಕಾರ್ಮಿಕ ಸಂಹಿತೆಗಳನ್ನು ರೂಪಿಸಿ ಇಎಸ್ಐ, ಪಿ.ಎಫ್. ಹಾಗೂ ಬೋನಸ್ ಹಕ್ಕುಗಳಿಂದ ಕಾರ್ಮಿಕರನ್ನು ವಂಚಿತರನ್ನಾಗಿಸುವ ಆತಂಕವಿದೆ. ಇದರ ವಿರುದ್ದ ಮುಷ್ಕರ, ಹೋರಾಟ ಮಾಡಿದರೆ ವೇತನ ಕಡಿತ, ಜೈಲು ಮೊದಲಾದ ಗಂಭೀರ ಶಿಕ್ಷೆ ಪ್ರಕಟಿಸುವ ಅವಕಾಶವನ್ನು ಕಲ್ಪಿಸಿರುವುದು ಹೋರಾಟದ ಶಕ್ತಿಯನ್ನು ದಮನಿಸುವ ಕೆಲಸ ನಡೆದಿದೆ’ ಎಂದರು.
ಜೆ ಸಿ ಟಿ ಯು ಜಿಲ್ಲಾ ಮುಖಂಡರು ಮಲ್ಲಿಕಾರ್ಜುನ ಎಚ್ ಟಿ ಮಾತನಾಡಿ, “ಪ್ರಬಲ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಗೆಜೆಟ್ ಹೊರಡಿಸಿ ಈ ಸಂಹಿತೆಗಳನ್ನು ಅನುಷ್ಠಾನವಾಗದೆ. ಹೀಗಾಗಿ ಕೂಡಲೇ ನೀತಿಯನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪ ಬಾರದು. ನೀತಿಯನ್ನು ಕೂಡಲೇ ವಿರೋಧಿಸಬೇಕು” ಎಂದರು.
ಕಾರ್ಮಿಕ ಮುಖಂಡ ಎಚ್. ಮಲ್ಲಿಕಾರ್ಜುನ ಮಾತನಾಡಿ, “ಸರ್ಕಾರ ಖಾಸಗೀಕರಣ ಮಾಡುತ್ತಿದೆ. ಮಹಿಳೆಯರಿಗೆ ಸುರಕ್ಷತೆಯ ಅಭಯವಿಲ್ಲದೇ ರಾತ್ರಿ ಪಾಳಿ ಕೆಲಸ ಕಡ್ಡಾಯ ಮಾಡುತ್ತಿದೆ. ಇನ್ನೊಂದೆಡೆ ಕಾರ್ಮಿಕರ ಶೋಷಣೆ ಉದ್ದೇಶವೋ ಎಂಬಂತೆ ಕಾರ್ಪೋರೇಟ್ ಕಂಪನಿಗಳ ಪರವಾಗಿ ನೀತಿ ರೂಪಿಸಿ ಅವರಿಗೆ ರತ್ನಗಂಬಳಿ ಸ್ವಾಗತ ನೀಡುತ್ತಿದೆ” ಎಂದರು.
‘ಸರ್ಕಾರಿ ಹುದ್ದೆಗಳು ಖಾಲಿ ಇವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ನಿರಾಸಕ್ತಿ ತೋರುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಯಲ್ಲಿ ಸುರೇಶ ಜಿ.ಬಿ., ಎಚ್.ಟಿ. ಭರತಕುಮಾರ ಇದ್ದರು.





