ರಾಜ್ಯದಲ್ಲಿ ಒಟ್ಟು ಎಂಟು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದಿಂದ 2024ರ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ- ಯುವಜನರ ಬೇಡಿಕೆ ವಿಚಾರಗಳನ್ನು ಸೇರಿಸಲು ಮತ್ತು ಈ ಹಕ್ಕು ಒತ್ತಾಯಗಳೇ ಯುವಜನರ ಮತಗಳನ್ನು ಎಣಿಸುವಂತೆ ಜನಾಭಿಪ್ರಾಯ ಮೂಡಿಸಲು ಕರ್ನಾಟಕ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವು ಶಿಕ್ಷಣದ ಮೂಲಭಾಗಿದಾರರೊಂದಿಗೆ ಸಮಾಲೋಚಿಸಿ “ವಿದ್ಯಾರ್ಥಿ-ಯುವಜನ ಪ್ರಣಾಳಿಕೆ” ತಯಾರುಗೊಳಿಸಿದೆ. ಎಲ್ಲ ರಾಜಕೀಯ ಪಕ್ಷಗಳು ಈ ಬೇಡಿಕೆಗಳನ್ನು ಈಡೇರಿಸುವ ಪ್ರಮಾಣಿಕ ಪ್ರಯತ್ನ ಮತ್ತು ಬದ್ಧತೆಯನ್ನು ಖಚಿತಪಡಿಸಬೇಕು ಎಂದು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ವಿಜಯಪುರ ಜಿಲ್ಲಾ ಸಮಿತಿಯಿಂದ ನಗರದ ಖಾಸಗಿ ಹೋಟೆಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಟಿ ಉದ್ದೇಶಿಸಿ ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಪೂಜಾರಿ ಮಾತನಾಡಿ, “ದೇಶದ ವಿದ್ಯಾರ್ಥಿಗಳು ಮತ್ತು ಯುವಜನರು ಸದಾ ನಡೆಯುತ್ತಿರುವ ಎಲ್ಲ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಅವರನ್ನು ಲಘುವಾಗಿ ಪರಿಗಣಿಸಬಾರದು” ಎಂದು ಎಚ್ಚರಿಕೆ ನೀಡಿದರು.
“ಕಳೆದ ಐದು ವರ್ಷಗಳಲ್ಲಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲು ವಿಫಲವಾಗಿದ್ದು, ಗಾಢ ನಿದ್ರೆಗೆ ಜಾರಿದ್ದವು. ಆದರೆ ಮತ್ತೆ ಚುನಾವಣೆ ಬಂದಿದೆ. ಎಲ್ಲ ಪಕ್ಷಗಳು ಮತ್ತೆ ಹೊಸ ಮುಖಗಳೊಂದಿಗೆ ಮತದಾರರನ್ನು ಸೆಳೆಯಲು ಬರುತ್ತಿದ್ದಾರೆ. ಹಾಗಾಗಿ ಇಲ್ಲಿ ಎಲ್ಲ ಪಕ್ಷಗಳಿಗೆ ನಮ್ಮ ವಿದ್ಯಾರ್ಥಿಗಳ ಒಕ್ಕೂಟವು ಅಗ್ರಹಿಸುವುದೇನೆಂದರೆ ಪ್ರಮುಖವಾಗಿ ಶಿಕ್ಷಣ ಖಾಸಗೀಕರಣ ಕೈಬಿಡಬೇಕು. ಶಿಕ್ಷಣವು ಧರ್ಮ ನಿರಿಪೇಕ್ಷಿತವಾಗಿರಬೇಕು. ಶಿಕ್ಷಣವು ಸಮಗ್ರ ಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡುವಂತಾಗಬೇಕು. ಶಿಕ್ಷಣ ಕ್ಷೇತ್ರಕ್ಕೆ ಪ್ರತಿ ವರ್ಷವೂ ಬಜೆಟ್ಟಿನಲ್ಲಿ ಅನುದಾನವನ್ನು ಕಡಿತ ಮಾಡಿರುವುದನ್ನು ವಾಪಸ್ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
“ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರವು ಇನ್ವೆಸ್ಟ್ಮೆಂಟ್ ಜಾರಿ ತಂದಿರುವುದನ್ನು ಹಿಂಪಡೆದುಕೊಳ್ಳಬೇಕು. ಯುಜಿಸಿಎಲ್ಲಿ ಎಸ್ಸಿ/ಎಸ್ಟಿ ಮತ್ತು ಬ್ಯಾಕ್ ಲಾಗ್ಗಳನ್ನು ರದ್ದು ಮಾಡಿರುವುದನ್ನು ಹಿಂದೆ ತೆಗೆದುಕೊಳ್ಳುವುದು ಪ್ರಮುಖವಾಗಿದೆ” ಎಂದರು.
“ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇನೆಂದು ಭರವಸೆ ನೀಡಿ ಈವರೆಗೂ ಯಾವುದೇ ರೀತಿಯ ಹೊಸ ನೇಮಕಾತಿ ಮಾಡಿಕೊಂಡಿಲ್ಲದಿರುವುದು ದುರಂತವೇ ಸರಿ. ಕಳೆದ ಹತ್ತು ವರ್ಷಗಳಲ್ಲಿ ಲಕ್ಷಾಂತರ ಉದ್ಯೋಗಗಳು ಸಂಪೂರ್ಣ ಸರ್ವನಾಶವಾಗಿ ಖಾಸಗಿಯವರ ಹಿಡಿತದಲ್ಲಿದ್ದು, ಉದ್ಯೋಗದ ಅಭದ್ರತೆ ಉಂಟಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಭೆ
“ಉದ್ಯೋಗ ಮೂಲಭೂತ ಹಕ್ಕು, ಸರ್ವರಿಗೂ ಉದ್ಯೋಗ ಕಲ್ಪಿಸುವಂತಹ ಯೋಜನೆ ಜಾರಿಯಾಗಬೇಕು. ದೇಶದ ವಿದ್ಯಾರ್ಥಿಗಳಿಗೆ ಭದ್ರತೆ ಹೆಚ್ಚಿಸುವ ನಿಟ್ಟನಲ್ಲಿ ಕಾರ್ಯಪ್ರವೃತ್ತರಾಗಬೇಕು” ಎಂದು ಆಗ್ರಹಿಸಿದರು.
ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ ಅಜಮನಿ, ಎಸ್ಐಓ ಅಬ್ದುಲ್ ಜಾವೇದ್, ವಿದ್ಯಾರ್ಥಿ ಮುಖಂಡರಾದ ಸಾಹೇಬಿ, ವಿಜಯಲಕ್ಷ್ಮಿ, ಗುರುಪ್ರಸಾದ ಬಿ ಜಿ ಸೇರಿದಂತೆ ಇತರರು ಇದ್ದರು.





