ಕಬ್ಬು ಬೆಳೆಗಾರರ ಸಮಗ್ರ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಸೂಕ್ತವಾಗಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಮುಖ್ಯಮಂತ್ರಿಗಳು, ಸಕ್ಕರೆ ಸಚಿವರು ಸೇರಿದಂತೆ ಅನೇಕ ಸಚಿವರ ಸಮಕ್ಷಮದಲ್ಲಿ ಈ ವಿಷಯವಾಗಿ ವಿಶೇಷ ಸಭೆ ನಡೆಸಲಾಗುವುದು. ಪ್ರಧಾನ ಮಂತ್ರಿಗಳನ್ನು ಸಹ ಭೇಟಿ ಮಾಡುವ ನಿಟ್ಟಿನಲ್ಲಿಯೂ ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಎಂಬಿ ಪಾಟೀಲ ಭರವಸೆ ನೀಡಿದರು.
ವಿಜಯಪುರ ನಗರದ ಗಗನ್ ಮಹಲ್ ಉದ್ಯಾನವನದಲ್ಲಿ ರೈತರು ಹಾಗೂ ಕಬ್ಬು ಬೆಳೆಗರಾರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
“ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡುವ ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3500 ದರ ನಿಗದಿಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ವಿವಿಧ ರೈತಪರ, ಕನ್ನಡ ಪರ ಸಂಘಟನೆಗಳು ಜಂಟಿಯಾಗಿ ಗಗನ್ ಮಹಲ್ ಉದ್ಯಾನವನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲ ಆಲಿಸಿದ ಅವರು, ಕಳೆದ 9 ವರ್ಷಗಳಿಂದ ಸಕ್ಕರೆ ಬೆಲೆ ಪರಿಷ್ಕರಣೆ ಮಾಡದಿರುವುದು, ಎಥನಾಲ್ ಖರೀದಿಸುವಲ್ಲಿ ಕೇಂದ್ರ ಸರ್ಕಾರ ನಿರಾಸಕ್ತಿ ತೋರಿಸುತ್ತಿದೆ. ಈ ಎಲ್ಲಾ ನಿಯಮಾವಳಿಗಳು ಬದಲಾವಣೆಯಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಹ ನಿಯಮಾವಳಿಗಳನ್ನು ಪರಿಷ್ಕರಣೆ ಮಾಡಬೇಕಿದೆ. ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸರ್ಕಾರ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಲಿದ್ದಾರೆ” ಎಂದು ಭರವಸೆ ನೀಡಿದರು.

“ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕೇಂದ್ರ ಸರ್ಕಾರದ ಕಣ್ತೆರೆಸುವ ಕೆಲಸ ಮಾಡಲಿ. ನಿಯೋಗದೊಂದಿಗೆ ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಈ ನಿಯಮಾವಳಿಗಳನ್ನು ಪರಿಷ್ಕರಣೆ ಮಾಡಲಿ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಒಳ್ಳೆಯದು ಮಾಡಲು ಸಮನ್ವಯ ಸಾಧಿಸಬೇಕಾಗುತ್ತದೆ. ಕಬ್ಬು ಬೆಳೆಗೆ ಬೆಲೆ ನಿಗದಿ, ಎಥಿನಾಲ್ ಕರದಿ ಪ್ರಮಾಣ ಹೆಚ್ಚಳ ಮೊದಲಾದ ಮಹತ್ವದ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಬೇಕಿದೆ, ನಾನು ಕೇಂದ್ರ ಸರ್ಕಾರಕ್ಕೆ ದೂರುತ್ತಿಲ್ಲ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು” ಎಂದು ಒತ್ತಾಯಿಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾ ರೈತಪರ, ಬಡವರ ಪರವೇ ಇರುವವರು. ಯಾವ ಸರ್ಕಾರವೂ ಕಬ್ಬಿಗೆ ಬೆಂಬಲ ಬೆಲೆ ನೀಡಿರಲಿಲ್ಲ. ಈ ಹಿಂದೆ ನಮ್ಮ ಸರ್ಕಾರದಲ್ಲಿ ಸಕ್ಕರೆ ಸಚಿವರಾಗಿದ್ದ ಶಾಸಕ ಹುಕ್ಕೇರಿಯವರು ₹350 ಬೆಂಬಲ ಬೆಲೆ ನೀಡಿದ್ದರು. ಇಡೀ ಸರ್ಕಾರವೇ ಕಬ್ಬು ಬೆಳೆಗಾರರ ಪರವಾಗಿದೆ. ಇದರಲ್ಲಿ ಎಳ್ಳಷ್ಟು ಸಂಶಯ ಬೇಡ” ಎಂದರು.
ಹೋರಾಟದ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ಸಕ್ಕರೆ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದರೂ ಸಹ ನಮ್ಮ ಸಮಸ್ಯೆಗಳ ಬಗ್ಗೆ ಕಾಳಜಿ ತೋರುತ್ತಿಲ್ಲ. ಸಕ್ಕರೆ ಕಾಯ್ದೆ ಪ್ರಕಾರ 15 ದಿನದಲ್ಲಿ ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿ ಆಗಬೇಕು. ಆದರೆ ಸಕ್ಕರೆ ಕಾರ್ಖಾನೆಗಳು ಈ ನಿಯಮ ಪಾಲಿಸಿಲ್ಲ. ವರ್ಷ ಕಳೆದರೂ ರೈತರಿಗೆ ಬಿಲ್ ಪಾವತಿ ಆಗಿಲ್ಲ. ಒಂದೇ ಒಂದು ಕಾರ್ಖಾನೆ 15 ದಿನದಲ್ಲಿ ಬಿಲ್ ಹಾಕಿದ್ದು ತೋರಿಸಿದರೆ ನಾನೇ ಎಲ್ಲರೂ ಹೇಳಿದಂತೆ ಕೇಳುವೆ. ಈ ಸಕ್ಕರೆ ಕಾರ್ಖಾನೆಗಳು ಸರ್ಕಾರಕ್ಕೇ ಮೋಸ ಮಾಡುತ್ತವೆ; ಇನ್ನು ರೈತರಿಗೆ ಬಿಡುತ್ತಾರಾ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ವಿಜಯಪುರ | ಸಕ್ಕರೆ ದರ ನಿಗದಿಗೆ ವಿಳಂಬ ಬೇಡ: ಡಿಸಿ ಆನಂದ
ಪ್ರತಿ ಟನ್ ಕಬ್ಬಿಗೆ ₹3500 ದರ ನೀಡುವವರೆಗೂ ನಾವು ಧರಣಿ ಸ್ಥಳ ಬಿಟ್ಟು ಕದಲುವುದಿಲ್ಲ. ತಾವೇ ಮಧ್ಯಸ್ಥಿಕೆ ವಹಿಸಿ ಈ ದರ ಕೊಡಿ ಎಂದು ಸಚಿವರಿಗೆ ರೈತರ ಪರವಾಗಿ ಹಕ್ಕೊತ್ತಾಯ ಮಂಡಿಸಿದರು.
ಕಾರ್ಮಿಕ ಹೋರಾಟಗಾರ ಅಪ್ಪು ಸಾಹೇಬ ಯಾರನಾಳ ಮಾತನಾಡಿ, “ನಿಜವಾಗಿಯೂ ಹೊಲಗಳಲ್ಲಿ ದುಡಿಯುವವರು ಶಾಸನ ಸಭೆಗೆ ಆಯ್ಕೆಯಾಗುತ್ತಿಲ್ಲ. ಈ ಹಿಂದೆ 20 ರಿಂದ 25 ಜನರು ರೈತರಾಗಿ ವಿಧಾನಸಭೆ ಪ್ರವೇಶಿಸುತ್ತಿದ್ದರು. ಆದರೆ ಇಂದು ಅವರ ಕೊರತೆ ಕಾಣುತ್ತಿದೆ. ಅನೇಕ ಹೋರಾಟಗಳ ಸಂದರ್ಭದಲ್ಲಿ ಅಧಿಕಾರಿಗಳು ರೈತರಿಗೆ ಏಕವಚನ ಪ್ರಯೋಗಿಸುತ್ತಾರೆ. ಈ ರೀತಿ ಆಗಬಾರದು. ಅಧಿಕಾರಿಗಳು ನಮ್ಮ ಸೇವಕರು. ರೈತರ ಈ ಬೇಡಿಕೆ ನ್ಯಾಯಯುತವಾಗಿದೆ. ಅನೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರ ದುಡ್ಡಿನಲ್ಲಿಯೇ ಗೆದ್ದು ಶಾಸಕರಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಮನಗೂಳಿ ಹಿರೇಮಠ ಅಭಿನವ ಸಂಗಮ ಬಸವ ಶಿವಚಾರ್ಯರು ಮಾತನಾಡಿದರು.ೀ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪ ಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಉಮೇಶ ಕಾರಜೋಳ, ಪಂಚಪ್ಪ ಕಲಬುರಗಿ, ಅರವಿಂದ ಕುಲಕರ್ಣಿ, ರಾಮನಗೌಡ ಪಾಟೀಲ, ಫಯಾಜ್ ಕಲಾದಗಿ, ರಾಹುಲ್ ಕುಬಕಡ್ಡಿ, ಸಂದೀಪ ಪಾಟೀಲ, ವಿಜಯ ಜೋಶಿ, ವಿವೇಕ ತಾವರಗೇರಾ ಇದ್ದರು.





