ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಮಹಾರಾಷ್ಟ್ರ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಮೇ 19ರಿಂದಲೇ ಒಳಹರಿವು ಆರಂಭವಾಗಿತ್ತು. ಆರಂಭದಲ್ಲಿ 424 ಕ್ಯೂಸೆಕ್ನಿಂದ ಶುರುವಾದ ಒಳಹರಿವು ಈಗ 12,134 ಕ್ಯೂಸೆಕ್ಗೆ ಬಂದು ತಲುಪಿದೆ.
ಮುಂಗಾರು ಪೂರ್ವ ಮಳೆಯಿಂದ ಮೇ 24ರವರೆಗೆ ಡ್ಯಾಮ್ಗೆ ಸಾಧಾರಣ ಒಳಹರಿವು ಇತ್ತು. 25ರಿಂದ 29ರವರೆಗೆ 35 ಸಾವಿರದಿಂದ 60 ಸಾವಿರ ಕ್ಯೂಸೆಕ್ ಒಳಹರಿವು ಶುರುವಾಗಿದ್ದರಿಂದ ಮುಂಜಾಗೃತಾ ಕ್ರಮವಾಗಿ ಮೇ 29ರಂದು ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ 10 ಸಾವಿರ ಕ್ಯೂಸೆಕ್ ನೀರು ಹರಿಬಿಡುವ ಮೂಲಕ ಪ್ರಸಕ್ತ ಸಾಲಿನಲ್ಲಿ ಪ್ರಥಮ ಬಾರಿಗೆ ಹೊರಹರಿವು ಆರಂಭಿಸಲಾಯಿತು. ಒಳಹರಿವಿನ ಪ್ರಮಾಣ ನಂತರ ದಿನಗಳಲ್ಲಿ ಇಳಿಮುಖವಾಗಿದ್ದರಿಂದ ಹೊರಹರಿವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಆರ್ಭಟ ಆರಂಭವಾದ್ದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಶುಕ್ರವಾರ ಬೆಳಿಗ್ಗೆಯಿಂದ ಮತ್ತೆ ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ ನೀರು ಹರಿ ಬಿಡಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಭಾರೀ ಮಳೆಗೆ ಗೋಡೆ ಕುಸಿತ; ವೃದ್ಧೆ ಸಾವು, ನಾಲ್ವರಿಗೆ ಗಾಯ
ಜೂನ್ ತಿಂಗಳ ಎರಡನೇ ವಾರದಲ್ಲಿ ಆಲಮಟ್ಟಿ ಜಲಾಶಯ ಅರ್ಧದಷ್ಟು ಭರ್ತಿಯಾಗಿರುವುದು ದಾಖಲೆಯಾಗಿದೆ. ಕಳೆದ ಐದಾರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವುದರ ಜತೆಗೆ ಜಲಾಶಯ ಅರ್ಧ ಭರ್ತಿಯಾಗಿದ್ದರಿಂದ ವಿಜಯಪುರ, ಬಾಗಲಕೋಟೆ, ರಾಯಚೂರ, ಯಾದಗಿರಿ, ಕಲಬುರಗಿ ಜಿಲ್ಲೆಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಸಂತಸಗೊಂಡಿದ್ದಾರೆ.





